ವಿದೇಶ

ಕೈ ಕುಲುಕಲು ಮುಂದೆ ಬಂದ ರಷ್ಯಾದ ಅಧಿಕಾರಿಗೆ 'ನಮಸ್ತೆ' ಹೇಳಿ ಬದ್ಧತೆ ಮೆರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

Sumana Upadhyaya

ಮಾಸ್ಕೊ: ಶಾಂಘೈ ಸಹಕಾರ ಸಂಘ(ಎಸ್ ಸಿಒ)ದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೋವಿಡ್-19ನ ಈ ಸಮಸ್ಯೆಯ ಸಮಯದಲ್ಲಿ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ.

ಮಾಸ್ಕೊದಲ್ಲಿ ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸುವ ಸಂದರ್ಭದಲ್ಲಿ ಅವರ ಕೈ ಕುಲುಕುವ ಬದಲು ಭಾರತದ ಸಂಪ್ರದಾಯದಂತೆ ಎರಡೂ ಕೈಗಳನ್ನು ಮುಗಿದು ನಮಸ್ತೆ ಎಂದು ದೂರದಿಂದಲೇ ಹೇಳುವ ಮೂಲಕ ತಮ್ಮ ಬದ್ಧತೆಯನ್ನು ಮೆರಿದಿದ್ದಾರೆ. ಮಾಸ್ಕ್ ಕೂಡ ಧರಿಸಿದ್ದರು.

ತಾವು ಮಾಸ್ಕೊಗೆ ತಲುಪಿರುವ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ರಷ್ಯಾ ರಕ್ಷಣಾ ಸಚಿವ ಜನರಲ್ ಸರ್ಜಿ ಶೊಯ್ಗು ಅವರ ಜೊತೆ ನಾಳೆ ದ್ವಿಪಕ್ಷೀಯ ಮಾತುಕತೆಯನ್ನು ಇದಿರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಡಿ ಬಿ ವೆಂಕಟೇಶ್ ವರ್ಮ ಅವರೊಂದಿಗೆ ರಷ್ಯಾ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ, ಅವರನ್ನು ಮಾಸ್ಕೊ ವಿಮಾನ ನಿಲ್ದಾಣದಲ್ಲಿ ಮೇಜರ್ ಜನರಲ್ ಬುಕ್ತೀವ್ ಯುರಿ ನಿಕೊಲೆವಿಚ್ ಬರಮಾಡಿಕೊಂಡರು.

ರಾಜನಾಥ್ ಸಿಂಗ್ ಅವರು ನಮಸ್ತೆ ಎಂದಾಗ ಅಲ್ಲಿನ ಉನ್ನತ ಸೇನಾಧಿಕಾರಿಗಳು ಕೂಡ ಅದೇ ರೀತಿ ಪ್ರತಿಕ್ರಿಯೆ ಕೊಟ್ಟರು. ಪ್ರತಿಯೊಬ್ಬರಿಗೂ ನಮಸ್ತೆ ಎಂದು ಹೇಳುತ್ತಾ ಹೋಗುವಾಗ ಒಬ್ಬರು ಕೈಕುಲಕಲು ಮುಂದಾದರು. ಆಗ ರಾಜನಾಥ್ ಸಿಂಗ್ ಅವರೇ ನಮಸ್ತೆ ಎಂದು ಹೇಳುವುದು ಕಂಡುಬಂತು. ಈ ಕೋವಿಡ್-19 ಸಮಯದಲ್ಲಿ ನಮಸ್ತೆ ಹೇಳುವುದು ವಿಶ್ವ ನಾಯಕರಲ್ಲಿ ಟ್ರೆಂಡ್ ಆಗಿದೆ.

ಭಾರತ, ಖಜಕಿಸ್ತಾನ್, ಚೀನಾ, ಕ್ರಿಜಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಎಸ್ ಸಿಒದ ಸದಸ್ಯ ರಾಷ್ಟ್ರಗಳಾಗಿವೆ.

SCROLL FOR NEXT