ವಿದೇಶ

ಲಡಾಕ್ ನಲ್ಲಿ ಯಥಾಸ್ಥಿತಿ ಮುರಿಯುವ ಚೀನಾದ ಪ್ರಯತ್ನ ದ್ವಿಪಕ್ಷೀಯ ಸಂಬಂಧ ಉಲ್ಲಂಘನೆಯಾಗಿದೆ:ರಾಜನಾಥ್ ಸಿಂಗ್ 

Sumana Upadhyaya

ನವದೆಹಲಿ: ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ಮಾಸ್ಕೊದಲ್ಲಿ ಉಭಯ ದೇಶಗಳ ನಾಯಕರ ಮಧ್ಯೆ ಸುಮಾರು ಎರಡೂವರೆ ಗಂಟೆ ಕಾಲ ಸಭೆ ನಡೆದಿದೆ. ಅದರಲ್ಲಿ ಚೀನಾದ ಆಕ್ರಮಣಕಾರಿ ನಡತೆ ಮತ್ತು ಗಡಿಯಲ್ಲಿ ಯಥಾಸ್ಥಿತಿ ಮುರಿಯುವ ಪ್ರಯತ್ನ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ. ನಿಮ್ಮ ಈ ನಡೆಯನ್ನು ಒಪ್ಪಲು ಖಂಡಿತಾ ಸಾಧ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಶಿಷ್ಟಾಚಾರ ಮತ್ತು ದ್ವಿಪಕ್ಷೀಯ ಒಪ್ಪಂದಗಳ ಪ್ರಕಾರ, ಗಡಿಯಲ್ಲಿ ಆದಷ್ಟು ಶೀಘ್ರವೇ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಿ, ಅದು ಪಾಂಗೊಂಗ್ ಲೇಕ್ ನಿಂದ ಹಿಡಿದು ಎಲ್ಲಾ ಕಡೆ ಚೀನಾ ತನ್ನ ಸೇನೆಯನ್ನು ನಿಯೋಜಿಸಿರುವಲ್ಲಿಯಿಂದ ಹಿಂತೆಗೆದುಕೊಂಡ ಬಳಿಕವಷ್ಟೆ ಮಾತುಕತೆಗೆ ಸಿದ್ದ ಎಂದು ಖಡಾಖಂಡಿತವಾಗಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಿನ್ನಾಭಿಪ್ರಾಯ ವಿವಾದವಾಗುವುದು ಬೇಡ:ಗಡಿ ನಿರ್ವಹಣೆ ಕುರಿತು ಭಾರತ ಈಗಾಗಲೇ ಜವಾಬ್ದಾರಿ ನಡೆ ತೆಗೆದುಕೊಂಡಿದ್ದು ಭಾರತದ ಸ್ವಾಯತ್ತತೆ ಮತ್ತು ಪ್ರಾಂತೀಯ ಸಾರ್ವಭೌಮತ್ವವನ್ನು ರಕ್ಷಿಸಲು ತಮ್ಮ ಬದ್ಧತೆಯಲ್ಲಿ ಯಾವುದೇ ಅನುಮಾನವಿಲ್ಲ. ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಬಾಂಧವ್ಯ ಬೆಳೆಯಬೇಕಾದರೆ, ಶಾಂತಿ ಮತ್ತು ಭಾತೃತ್ವ ವೃದ್ಧಿಸಲು ಸಹಮತ ಅಗತ್ಯ, ನಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬೆಳೆದು ಅದು ವಿವಾದವಾಗಲು ಬಿಡುವುದು ಬೇಡ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಈಗಿನ ಪರಿಸ್ಥಿತಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡುವುದು ಬೇಡ, ಗಡಿ ಪ್ರದೇಶದ ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡಿದಷ್ಟು ನಮಗೆ ತೊಂದರೆ ಎಂದು ಚೀನಾ ರಕ್ಷಣಾ ಸಚಿವರಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪೂರ್ವ ಲಡಾಕ್ ನ ದಕ್ಷಿಣ ಪಂಗೊಂಗ್ ತೀರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಣಯವನ್ನು ಬದಲಾಯಿಸುವ ಚೀನಾ ಸೇನೆಯ ಪ್ರಯತ್ನಕ್ಕೆ ಭಾರತದ ನಿಯೋಗ ನಿನ್ನೆಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT