ವಿದೇಶ

ತಾಲಿಬಾನ್ ಹಿಂಸಾಚಾರ: ಅಫ್ಘಾನಿಸ್ತಾನದಲ್ಲಿರುವ ದೂತವಾಸ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಲು ಭಾರತ ಕ್ರಮ

Harshavardhan M

ಕಾಬೂಲ್/ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಬಾಲ್ಖ್ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ತಾಲಿಬಾನ್ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು, ಮಜರ್-ಇ-ಶರೀಫ್‌ನಲ್ಲಿರುವ ತನ್ನ ದೂತವಾಸದಿಂದ ಭಾರತವು ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸುತ್ತಿದೆ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ.

ಕಾನ್ಸುಲೇಟ್‌ನ ಭಾರತೀಯ ಮೂಲದ ಸಿಬ್ಬಂದಿ ಮತ್ತು ಮಜರ್-ಇ-ಶರೀಫ್‌ನಲ್ಲಿ ವಾಸಿಸುತ್ತಿರುವ ಹಲವಾರು ಭಾರತೀಯರನ್ನು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಭದ್ರತಾ ಸನ್ನಿವೇಶದಿಂದಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಸಲಹೆ ನೀಡಿದೆ. 

ತಾಲಿಬಾನ್ ಬಂಡುಕೋರರ ದೃಷ್ಟಿ ಅಫ್ಘಾನಿಸ್ತಾನದ ನಾಲ್ಕನೇ ಅತಿ ದೊಡ್ಡ ನಗರವಾದ ಮಝರ್ ಇ ಶರೀಫ್ ಮೇಲೆ ಬಿದ್ದಿರುವ ಬೆನ್ನಲ್ಲೇ ಭಾರತ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ವಿಶೇಷ ವಿಮಾನದ ಏರ್ಪಾಡು ಮಾಡಿರುವುದು ಗಮನಾರ್ಹ. 

ಸೋಮವಾರವಷ್ಟೇ ತಾನು ಮಝರ್ ಇ ಶರೀಫ್ ನಗರವನ್ನು ವಶಪಡಿಸಿಕೊಳ್ಳಲು ಮುಂದಾಗುವುದಾಗಿ ತಾಲಿಬಾನ್ ಪ್ರಕಟಣೆ ಹೊರಡಿಸಿತ್ತು. ಆಫ್ಘನ್ ಸರ್ಕಾರದ ವಶದಲ್ಲಿರುವ ಪ್ರದೇಶಗಳಲ್ಲಿ ಮಝರ್ ಇ ಶರೀಫ್ ಪ್ರಮುಖವಾದುದೆಂದು ಹೇಳಲಾಗುತ್ತಿದೆ. ಹೀಗಾಗಿ ಸಹಜವಾಗಿ ತಾಲಿಬಾನ್ ವಕ್ರದೃಷ್ಟಿ ಅದರ ಮೇಲೆ ಬಿದ್ದಿದೆ. ಅದನ್ನು ವಶಪಡಿಸಿಕೊಂಡಲ್ಲಿ ಆಫ್ಹ್ಘನ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ ಎನ್ನುವುದು ತಾಲಿಬಾನ್ ಲೆಕ್ಕಾಚಾರ. ರಾಜಕೀಯ ಪರಿಣತರು ಕೂಡಾ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಇದೀಗ ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿರುವ ವಿಮಾನ ಮಝರ್ ಇ ಶರೀಫ್ ನಗರದಿಂದ ಇಂದು ಹೊರಡಲಿದೆ. ಈ ಬಗ್ಗೆ ಮಝರ್ ಇ ಶರೀಫ್ ನಗರದಲ್ಲಿನ ಭಾರತೀಯ ದೂತವಾಸ ಕಚೇರಿ ಟ್ವೀಟ್ ಮಾಡಿದ್ದು, ಅಲ್ಲಿಂದ ಹೊರಡಲಿಚ್ಛಿಸುವ ಭಾರತೀಯರು ಆದಷ್ಟು ಬೇಗನೆ ತಮ್ಮ ಹಾಗೂ ಕುಟುಂಬದ ವಿವರಗಳನ್ನು ನೀಡುವಂತೆ ಸೂಚಿಸಿದೆ.

SCROLL FOR NEXT