ವಿದೇಶ

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕುಲಭೂಷಣ್ ಜಾಧವ್ ಗೆ ಮೇಲ್ಮನವಿ ಸಲ್ಲಿಕೆ ಹಕ್ಕು ನೀಡುವ ಮಸೂದೆ ಅಂಗೀಕಾರ

Raghavendra Adiga

ಇಸ್ಲಾಮಾಬಾದ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸರ್ಕಾರಿ ಬೆಂಬಲಿತ ಮಸೂದೆಯನ್ನು ಅಂಗೀಕರಿಸಿದ್ದು, ಇದು ಮರಣದಂಡನೆ ಶಿಕ್ಷೆಗೆ ಗುರುಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಾಷ್ಟ್ರೀಯ ಅಸೆಂಬ್ಲಿ 2020 ರ ಐಸಿಜೆ (ವಿಮರ್ಶೆ ಮತ್ತು ಮರು-ಪರಿಗಣನೆ) ಮಸೂದೆಯನ್ನು ಗುರುವಾರ ಅಂಗೀಕರಿಸಿತು, ಆರೋಪಿತ ಭಾರತೀಯ ಗೂಢಚಾರ ಜಾಧವ್ ಅವರಿಗೆ ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪಿನ ಅನುಸಾರವಾಗಿ ಕಾನ್ಸುಲರ್ ನೆರವನ್ನು  ಹೊಂದಲು ಅವಕಾಶವಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

51 ವರ್ಷದ ಧವ್ ಅವರಿಗೆ 2017 ರ ಏಪ್ರಿಲ್‌ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಜಾಧವ್‌ಗೆ ಕಾನ್ಸುಲರ್ ಪ್ರವೇಶವನ್ನು ನಿರಾಕರಿಸಿದ್ದಕ್ಕಾಗಿ ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಭಾರತ ಪಾಕಿಸ್ತಾನ ವಿರುದ್ಧ ಐಸಿಜೆಯನ್ನು ಸಂಪರ್ಕಿಸಿತು.

ಹೇಗ್ ಮೂಲದ ಐಸಿಜೆ ಜುಲೈ 2019 ರಲ್ಲಿ ತೀರ್ಪು ನೀಡಿ ಧವ್ ಅವರ ಶಿಕ್ಷೆ ಬಗ್ಗೆ ಪಾಕಿಸ್ತಾನವು "ಪರಿಣಾಮಕಾರಿ ವಿಮರ್ಶೆ ಮತ್ತು ಮರುಪರಿಶೀಲನೆ" ಯನ್ನು ಕೈಗೊಳ್ಳಬೇಕು ಮತ್ತು ಹೆಚ್ಚಿನ ವಿಳಂಬವಿಲ್ಲದೆ ಭಾರತಕ್ಕೆ ಕಾನ್ಸುಲರ್ ಪ್ರವೇಶವನ್ನು ನೀಡಬೇಕು ಎಂದು ಹೇಳಿದೆ. ಐಸಿಜೆ ತನ್ನ 2019 ರ ತೀರ್ಪಿನಲ್ಲಿ, ಜಾಧವ್ ಅವರಿಗೆ ನೀಡಿರುವ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರಿಯಾದ ವೇದಿಕೆಯನ್ನು ನೀಡುವಂತೆ ಪಾಕಿಸ್ತಾನವನ್ನು ಕೇಳಿಕೊಂಡಿತ್ತು.

ಮಸೂದೆ ಅಂಗೀಕಾರದ ನಂತರ ಮಾತನಾಡಿದ ಕಾನೂನು ಸಚಿವ ಫರೋಘ್ ನಾಸಿಮ್ ಅವರು ಮಸೂದೆಯನ್ನು ಅಂಗೀಕರಿಸದಿದ್ದರೆ ಭಾರತವು ಯುಎನ್ ಸೆಕ್ಯುರಿಟಿ ಕೌನ್ಸಿಲ್ಗೆ ಹೋಗಬಹುದಿತ್ತು ಮತ್ತು ಐಸಿಜೆ ಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕೇಳಬಹುದಿತ್ತು. ಐಸಿಜೆ ತೀರ್ಪಿನ ನಂತರ  ಮಸೂದೆಯನ್ನು ಅಂಗೀಕರಿಸಲಾಗುತ್ತಿದೆ ಎಂದು ಹೇಳಿದರು.

ಪಾಕಿಸ್ತಾನವು "ಜವಾಬ್ದಾರಿಯುತ ರಾಷ್ಟ್ರ" ಎಂದು ಈ ಮೂಲಕ ಜಗತ್ತಿಗೆ ಸಾಬೀತುಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಜಾಧವ್ ಪ್ರಕರಣದಲ್ಲಿ ಐಸಿಜೆ ತೀರ್ಪಿನ ನಂತರ ಕಳೆದ ವರ್ಷ ಮೇ ತಿಂಗಳಲ್ಲಿ ಸುಗ್ರೀವಾಜ್ಞೆ ಪ್ರಕಟಿಸುವ ಮೂಲಕ ಸರ್ಕಾರ ಈಗಾಗಲೇ ಕಾನೂನನ್ನು ಜಾರಿಗೊಳಿಸಿತ್ತು.

ಚುನಾವಣೆ (ತಿದ್ದುಪಡಿ) ಮಸೂದೆ ಸೇರಿದಂತೆ ಇತರ 20 ಮಸೂದೆಗಳನ್ನು ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿತು.

SCROLL FOR NEXT