ವಿದೇಶ

ನೇಪಾಳ ಸಂಸತ್ತು ವಿಸರ್ಜಿಸಿದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ; ನವೆಂಬರ್ ನಲ್ಲಿ ಮಧ್ಯಂತರ ಚುನಾವಣೆ ಘೋಷಣೆ

Srinivasamurthy VN

ಕಠ್ಮಂಡು: ನೇಪಾಳದಲ್ಲಿ ಬಹುಮತ ಕಳೆದುಕೊಂಡಿದ್ದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಕೊನೆಗೂ ಅಂತ್ಯವಾಗಿದ್ದು, ನೇಪಾಳ ಸಂಸತ್ತನ್ನು ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ವಿಸರ್ಜಿಸಿ ಮಧ್ಯಂತರ ಚುನಾವಣೆ ಘೋಷಣೆ ಮಾಡಿದ್ದಾರೆ.

ನಿನ್ನೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ವಿರೋಧ ಪಕ್ಷಗಳು ಪ್ರತ್ಯೇಕವಾಗಿ ನೇಪಾಳ ರಾಷ್ಟ್ರಪತಿಗಳಾದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿವೆ. ಒಲಿ ಅವರು ತಮ್ಮ ಸಿಪಿಎನ್‌–ಯುಎಂಎಲ್‌ ಪಕ್ಷದ 121 ಸಂಸದರು ಮತ್ತು ಜನತಾ ಸಮಾಜವಾದಿ  ಪಕ್ಷ–ನೇಪಾಳ (ಜೆಎಸ್‌ಪಿ–ಎನ್‌) ಪಕ್ಷದ 32 ಸಂಸದರ ಬೆಂಬಲ ಇದೆ ಎಂದು ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ಬಳಿ ಹಕ್ಕು ಮಂಡಿಸಿದ್ದಾರೆ.

ಇದಕ್ಕೂ ಮುನ್ನ ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಅವರು ತಮಗೆ 149 ಸಂಸದರ ಬೆಂಬಲ ಇದೆ ಎಂದು ಹೇಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. 

ಆದರೆ ಇದೀಗ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಉಭಯ ನಾಯಕರ ಸರ್ಕಾರ ರಚನೆ ಹಕ್ಕು ಮನವಿಯನ್ನು ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ತಿರಸ್ಕರಿಸಿದ್ದು, ನೇಪಾಳ ಸಂಸತ್ತನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ಘೋಷಣೆ ಮಾಡಿದ್ದಾರೆ. ಇದೇ ನವೆಂಬರ್ 12 ಮತ್ತು 19ರಂದು  ಮಧ್ಯಂತರ ಚುನಾವಣೆಗೆ ಆದೇಶಿಸಿದ್ದಾರೆ.

ಇನ್ನು ಸಿಪಿನ್‌–ಯುಎಂಎಲ್‌ ಪಕ್ಷದ ಅಧ್ಯಕ್ಷ ಒಲಿ ಅವರು ಸಂವಿಧಾನದ 76(3)ನೇ ವಿಧಿ ಪ್ರಕಾರ ಮೇ 14ರಂದು ನೇಪಾಳದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದಕ್ಕೂ ನಾಲ್ಕು ದಿನ ಮುನ್ನವಷ್ಟೇ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಅವರು 30  ದಿನದೊಳಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಮತ್ತೆ ಸದನದಲ್ಲಿ ಈ ಪರೀಕ್ಷೆ ಎದುರಿಸುವ ಒಲವನ್ನು ಅವರು ತೋರಿರಲಿಲ್ಲ. ಹೀಗಾಗಿ ಅಧ್ಯಕ್ಷೆ ವಿದ್ಯಾದೇವಿ ಅವರು ಇತರ ರಾಜಕೀಯ ಪಕ್ಷಗಳಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ಅವಕಾಶ ನೀಡಿದ್ದರು. ಇದಕ್ಕಾಗಿ ಶುಕ್ರವಾರ ಸಂಜೆ  5ರವರೆಗೆ ಗಡುವು ನಿಗದಿ ಮಾಡಿದ್ದರು.
 

SCROLL FOR NEXT