ವಿದೇಶ

ಯುದ್ಧದ ಪರಿಣಾಮಗಳನ್ನು ನೋಡಿದ್ದೇವೆ, ಶಾಂತಿ ಮಾತುಕತೆಗೆ ಮರಳಿ: ರಷ್ಯಾಗೆ ಜೈಶಂಕರ್ ಸಲಹೆ

Lingaraj Badiger

ಮಾಸ್ಕೋ​: ಭಾರತ ಮತ್ತು ರಷ್ಯಾ "ಅಸಾಧಾರಣವಾದ" ಮತ್ತು ಬಲವಾದ ಸಂಬಂಧವನ್ನು ಹೊಂದಿವೆ. ಹೆಚ್ಚುತ್ತಿರುವ ಆರ್ಥಿಕ ಸಹಕಾರದ ಹಿನ್ನೆಲೆಯಲ್ಲಿ ಸಮತೋಲಿತ, ಪರಸ್ಪರ ಲಾಭದಾಯಕ ಮತ್ತು ದೀರ್ಘಾವಧಿಯ ಒಪ್ಪಂದವನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಮಾಸ್ಕೋದಲ್ಲಿ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಮಾತುಕತೆ ನಡೆಸಿದರು. 

ಸಮರ್ಕಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದಂತೆ... ಇದು ಯುದ್ಧದ ಯುಗವಲ್ಲ. ನಾವು ಉಕ್ರೇನ್‌ ಮೇಲಿನ ಯುದ್ಧದ ಪರಿಣಾಮಗಳನ್ನು ನೋಡುತ್ತಿದ್ದೇವೆ. ಶಾಂತಿ ಮಾತುಕತೆಗೆ ಮರಳಲು ಭಾರತ ಬಲವಾಗಿ ಸಲಹೆ ನೀಡುತ್ತದೆ. ಜಾಗತಿಕ ಆರ್ಥಿಕತೆಯು ಗಮನಾರ್ಹ ಸಂಘರ್ಷಕ್ಕೆ ಸಿಲುಕಿದ್ದು, ಇದು ಪರಸ್ಪರ ಅವಲಂಬಿತವಾಗಿದೆ ಎಂದು ಜೈಶಂಕರ್ ಅವರು ಮಾಸ್ಕೋದಲ್ಲಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಿಂದ ಕೋವಿಡ್, ಹಣಕಾಸಿನ ಒತ್ತಡಗಳು ಮತ್ತು ವ್ಯಾಪಾರದ ತೊಂದರೆಗಳಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ಬಹಳ ಪರಿಣಾಮವನ್ನು ಉಂಟು ಮಾಡಿದೆ. ಉಕ್ರೇನ್ ಬಹಳ ನಷ್ಟವನ್ನು ಕೂಡ ಅನುಭವಿಸಿದೆ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಗಳು ಇವೆ. ಇವುಗಳು ದೀರ್ಘಕಾಲಿಕ ಸಮಸ್ಯೆಗಳಾಗಿವೆ. ಇವೆರಡೂ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ವಿಚ್ಛಿದ್ರಕಾರಕ ಪರಿಣಾಮವನ್ನು ಬೀರುತ್ತಿವೆ. ಈ ನಮ್ಮ ಮಾತುಕತೆಗಳು ಒಟ್ಟಾರೆ ಜಾಗತಿಕ ಪರಿಸ್ಥಿತಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಕಾಳಜಿ ಬಗ್ಗೆ ಆಗಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.

SCROLL FOR NEXT