ವಿದೇಶ

ಕತಾರ್‌ನಲ್ಲಿ 8 ಭಾರತೀಯರಿಗೆ ಮರಣದಂಡನೆ: ಕುಟುಂಬ ಸದಸ್ಯರನ್ನು ಭೇಟಿಯಾದ ಜೈಶಂಕರ್!

Nagaraja AB

ನವದೆಹಲಿ: ಕತಾರ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಎಂಟು ಭಾರತೀಯರ ಕುಟುಂಬ ಸದಸ್ಯರನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸೋಮವಾರ ಭೇಟಿಯಾಗಿದ್ದಾರೆ. ಭಾರತೀಯರ ಬಿಡುಗಡೆಗೆ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಜೈಶಂಕರ್ ಕುಟುಂಬ ಸದಸ್ಯರಿಗೆ ಭರವಸೆ ನೀಡಿದ್ದಾರೆ.  

ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಕತಾರ್‌ನ ಪ್ರಥಮ ಹಂತದ ನ್ಯಾಯಾಲಯವು ಗುರುವಾರ ಮರಣದಂಡನೆ ವಿಧಿಸಿತು. ಆದರೆ, ಈ ತೀರ್ಪನ್ನು ಆಘಾತಕಾರಿ ಎಂದು ಭಾರತ ಬಣ್ಣಿಸಿದ್ದು, ಪ್ರಕರಣದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸಲು ಪ್ರತಿಜ್ಞೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜೈ ಶಂಕರ್, ಕತಾರ್‌ನಲ್ಲಿ ಬಂಧಿತರಾಗಿರುವ 8 ಭಾರತೀಯರ ಕುಟುಂಬಗಳನ್ನು ಇಂದು ಬೆಳಿಗ್ಗೆ ಭೇಟಿಯಾದೆ. ಪ್ರಕರಣಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಸರ್ಕಾರ ಎಲ್ಲಾ ಪ್ರಯತ್ನ ಮುಂದುವರಿಸುತ್ತದೆ. ಈ ನಿಟ್ಟಿನಲ್ಲಿ ಕುಟುಂಬಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಖಾಸಗಿ ಕಂಪನಿ ಅಲ್ ದಹ್ರಾ ಜೊತೆ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಆದರೆ, ಕತಾರ್ ಅಧಿಕಾರಿಗಳಾಗಲಿ ಅಥವಾ ಭಾರತ ಸರ್ಕಾರವಾಗಲಿ ಭಾರತೀಯ ಪ್ರಜೆಗಳ ವಿರುದ್ಧದ ಆರೋಪಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸರಲಿಲ್ಲ.

SCROLL FOR NEXT