ವಿದೇಶ

ಭಾರತದೊಂದಿಗಿನ ಸಂಬಂಧ ಅತ್ಯಂತ ಪ್ರಮುಖ, ಆದರೆ ಆರೋಪ ಸಾಬೀತಾದರೆ... ಕೆನಡಾ ಸಚಿವ ಹೇಳಿದ್ದೇನು?

Manjula VN

ಒಟ್ಟಾವ: ಭಾರತ ಮತ್ತು ಕೆನಡಾ ಜೊತೆಗಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ನಡುವಲ್ಲೇ ಭಾರತದೊಂದಿಗಿನ ಸಂಬಂಧ ಅತ್ಯಂತ ಪ್ರಮುಖ ಎಂದು ಕೆನಡಾದ ರಕ್ಷಣಾ ಸಚಿವ ಬಿಲ್ ಬ್ಲೇರ್ ಅವರು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಭಾರತದೊಂದಿಗಿನ ಕೆನಡಾ ಸಂಬಂಧವನ್ನು ಅತ್ಯಂತ ಪ್ರಮುಖ ಎಂದ ಹೇಳಿದರು.

ನಿಜ್ಜರ್ ಹತ್ಯೆ ಕುರಿತ ಆರೋಪಗಳ ತನಿಖೆ ನಡೆಯುತ್ತಿದ್ದು, ಕೆನಡಾವು ಭಾರತದ ಜೊತೆಗಿನ ಪಾಲುದಾರಿಕೆಗಳನ್ನು ಮುಂದುವರಿಸಲಿದೆ. ಭಾರತದೊಂದಿಗಿನ ನಮ್ಮ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಇದು ಸವಾಲಿನ ಸಮಸ್ಯೆಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ಭಾರತದ ಜೊತೆ ಉತ್ತಮ ಬಾಂಧವ್ಯದ ಜೊತೆ ನಾವು ಕಾನೂನು, ನಾಗರಿಕರನ್ನು ರಕ್ಷಿಸುವ ಜವಾಬ್ದಾರಿಯನ್ನೂ ಹೊಂದಿದ್ದೇವೆ. ನಾವು ಸಂಪೂರ್ಣ ತನಿಖೆಯನ್ನು ನಡೆಸಿ ಸತ್ಯವನ್ನು ಖಚಿತಪಡಿಸಿಕೊಳ್ಳುತ್ತೇವೆ. ಆರೋಪಗಳು ನಿಜವೆಂದು ಸಾಬೀತಾದರೆ, ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಯ ಹತ್ಯೆಯು ನಮ್ಮ ಸಾರ್ವಭೌಮತ್ವದ ಉಲ್ಲಂಘನೆಯಾಗುತ್ತದೆ. ಕೆನಡಾವು ಆ ಬಗ್ಗೆ ಬಹಳ ಮಹತ್ವದ ಕಾಳಜಿಯನ್ನು ಹೊಂದಿದೆ ಎಂದರು. ಇದೇ ವೇಳೆ ಇಂಡೊ-ಪೆಸಿಫಿಕ್ ಕಾರ್ಯತಂತ್ರವು ಕೆನಡಾಕ್ಕೆ ಇನ್ನೂ ನಿರ್ಣಾಯಕವಾಗಿದೆ ಎಂದೂ ಹೇಳಿದರು.

ಪಂಜಾಬ್‌ನ ಜಲಂಧರ್‌ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾ ದೇಶಕ್ಕೆ ಪರಾರಿಯಾಗಿದ್ದನು. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತ, ಕೆನಡಾದಲ್ಲಿ ವಲಸೆ ಹೋಗಿ ಖಲಿಸ್ತಾನ್‌ ಉಗ್ರರ ನಾಯಕನಾಗಿದ್ದ. ಕೆನಡಾ ದೇಶದ ಸರ್ರೆ ಎನ್ನುವ ಪ್ರದೇಶದಲ್ಲಿರುವ ಗುರುದ್ವಾರದ ಹೊರಗೆ 2023ರ ಜುಲೈ 18 ರಂದು ಅಪರಿಚಿತ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಗುಂಪಿನ ಮುಖಂಡ ಹರ್ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕೆನಡಾ ಸಂಸತ್‌ನಲ್ಲೇ ಗಂಭೀರ ಆರೋಪ ಮಾಡಿದ್ದರು. ಆ ಹೇಳಿಕೆಯ ಬಳಿಕ ಭಾರತ-ಕೆನಡಾ ನಡುವೆ ಶೀತಲ ಸಮರ ಆರಂಭವಾಗಿದೆ.

SCROLL FOR NEXT