ಲಂಕಾ
ಲಂಕಾ  
ವಿದೇಶ

ಕಚ್ಚತೀವು ದ್ವೀಪದ ಬಗ್ಗೆ ಬಿಜೆಪಿ ಪ್ರಸ್ತಾಪ; ಶ್ರೀಲಂಕಾ ಪ್ರತಿಕ್ರಿಯೆ ಏನೆಂದರೆ...

Srinivas Rao BV

ನವದೆಹಲಿ: ಕಚ್ಚತೀವು ದ್ವೀಪವನ್ನು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಶ್ರೀಲಂಕಾಗೆ ಬಿಟ್ಟುಕೊಡಲಾಯಿತು ಎಂಬ ಬಗ್ಗೆ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಆರೋಪ ಮಾಡಿರುವುದು ದೇಶಾದ್ಯಂತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಬೆಳವಣಿಗೆ ಬಗ್ಗೆ ಶ್ರೀಲಂಕಾ ಪ್ರತಿಕ್ರಿಯೆ ನೀಡಿದ್ದು, ಕಚ್ಚತೀವು ದ್ವೀಪದ ವಿಷಯವನ್ನು ಈ ವರೆಗೂ ಯಾರೂ ಪ್ರಸ್ತಾಪಿಸಿರಲಿಲ್ಲ. ಆದ್ದರಿಂದ ಲಂಕಾ ಕ್ಯಾಬಿನೆಟ್ ನಲ್ಲಿ ಆ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹೇಳಿದೆ.

1974 ರಲ್ಲಿ ಕಚ್ಚತೀವು ಎಂಬ ಸಣ್ಣ ದ್ವೀಪವನ್ನು ಕಾಂಗ್ರೆಸ್ ಪಕ್ಷ ಕೊಲಂಬೋಗೆ ಬಿಟ್ಟುಕೊಟ್ಟಿತ್ತು ಎಂದು ಬಿಜೆಪಿ ಆರೋಪಿಸಿತ್ತು. "ಸಂಪುಟವು ಅದನ್ನು ಎಂದಿಗೂ ಪ್ರಸ್ತಾಪಿಸದ ಕಾರಣ ಅದನ್ನು ಚರ್ಚಿಸಲಿಲ್ಲ" ಎಂದು ಸಂಪುಟದ ವಕ್ತಾರ ಮತ್ತು ವಾರ್ತಾ ಸಚಿವ ಬಂಡುಲ ಗುಣವರ್ಧನ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಪಕ್ಷವು ಬಿಟ್ಟುಕೊಟ್ಟಿದೆ ಎಂದು ಹೊಸ ಸಂಗತಿಗಳು ಬಹಿರಂಗಪಡಿಸುತ್ತವೆ ಎಂಬುದನ್ನು ಪ್ರತಿಪಾದಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕಚ್ಚತೀವು ದ್ವೀಪದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಿರುದ್ಧ ವಾಗ್ದಾಳಿ ನಡೆಸಿದ್ದರು.

ಜೈಶಂಕರ್ ಕಾಂಗ್ರೆಸ್‌ನ ಪ್ರಧಾನ ಮಂತ್ರಿಗಳು ಕಚ್ಚತೀವು ದ್ವೀಪದ ಬಗ್ಗೆ ಅಸಡ್ಡೆ ಪ್ರದರ್ಶಿಸಿದರು ಮತ್ತು ಇದಕ್ಕೆ ವಿರುದ್ಧವಾದ ಕಾನೂನು ದೃಷ್ಟಿಕೋನಗಳ ಹೊರತಾಗಿಯೂ ಭಾರತೀಯ ಮೀನುಗಾರರ ಹಕ್ಕುಗಳನ್ನು ಅವರು ಕಾಳಜಿ ವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಮೊದಲು 1974ರಲ್ಲಿ ಮತ್ತು ನಂತರ 1976 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಒಪ್ಪಂದಗಳ ವಿವರಗಳನ್ನು ಉಲ್ಲೇಖಿಸಿದ ಅವರು, ಭಾರತದ ಭೂಪ್ರದೇಶದ ಬಗ್ಗೆ ಕೇಂದ್ರ ಸರ್ಕಾರ ಮತ್ತು ಅಂದಿನ ಪ್ರಧಾನ ಮಂತ್ರಿಗಳು ತೋರಿದ ಅಸಡ್ಡೆ ಪುನರಾವರ್ತಿತ ವಿಷಯವಾಗಿದೆ ಎಂದು ಹೇಳಿದ್ದರು.

SCROLL FOR NEXT