ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ. 23 ಅಕ್ಟೋಬರ್ 2024, ಬುಧವಾರ.  (Photo| PTI)
ವಿದೇಶ

ಮೋದಿ- ಕ್ಸೀ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ: ಗಸ್ತು ಒಪ್ಪಂದಕ್ಕೆ ಉಭಯ ನಾಯಕರ ಅನುಮೋದನೆ

ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ತಮ್ಮ ಮಿಲಿಟರಿಗಳಿಂದ ಗಸ್ತು ತಿರುಗುವ ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ ಈ ದ್ವಿಪಕ್ಷೀಯ ಸಭೆ ನಡೆದಿದ್ದು, ಇದು 4 ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವವಲ್ಲಿ ಪ್ರಮುಖ ಪ್ರಗತಿಯಾಗಿದೆ.

ಕಜಾನ್: ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನಡುವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಳೆದ ಐದು ವರ್ಷಗಳಲ್ಲೇ ಮೊದಲ ರಚನಾತ್ಮಕ ಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ದ್ವಿಪಕ್ಷೀಯ ಮಾತುಕತೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಮತ್ತು ಚೀನಾ ಪ್ರಬುದ್ಧತೆ ಮತ್ತು ಪರಸ್ಪರ ಗೌರವವನ್ನು ಪ್ರದರ್ಶಿಸುವ ಮೂಲಕ "ಶಾಂತಿಯುತ ಮತ್ತು ಸ್ಥಿರ" ಸಂಬಂಧವನ್ನು ಹೊಂದಬಹುದು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ಪೂರ್ವ ಲಡಾಖ್ ನ ವಿವಾದವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ನಡೆದ ಒಪ್ಪಂದವನ್ನು ಅನುಮೋದಿಸಿದರು.

ದ್ವಿಪಕ್ಷೀಯ ಸಭೆಯಲ್ಲಿ, ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಡಿ ಸಂಬಂಧಿತ ವಿಷಯಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವಂತಹ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೇ ಇರುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು.

ಭಾರತ-ಚೀನಾ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ವಿಶೇಷ ಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂಬ ಅಂಶವನ್ನು ಉಭಯ ನಾಯಕರು ಗಮನಿಸಿದರು.

ಮೋದಿ ಮತ್ತು ಕ್ಸಿ ವಿಶೇಷ ಪ್ರತಿನಿಧಿಗಳಿಗೆ ಮುಂದಿನ ಭೇಟಿಗೆ ದಿನಾಂಕ ನಿಗದಿಪಡಿಸುವುದು ಮತ್ತು ಅವರ ಪ್ರಯತ್ನಗಳನ್ನು ಮುಂದುವರಿಸಲು ಸೂಚಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಶೇಷ ಪ್ರತಿನಿಧಿಗಳ ಮುಂದಿನ ಸಭೆಯನ್ನು ಸೂಕ್ತ ದಿನಾಂಕದಂದು ನಿಗದಿಪಡಿಸಲು ನಾವು ಆಶಿಸುತ್ತೇವೆ ಎಂದು ಮಿಸ್ರಿ ಹೇಳಿದ್ದಾರೆ.

ಮೋದಿ ಮತ್ತು ಕ್ಸಿ ದ್ವಿಪಕ್ಷೀಯ ಸಂಬಂಧಗಳ ಸ್ಥಿತಿಯನ್ನು ಕಾರ್ಯತಂತ್ರ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ಪರಿಶೀಲಿಸಿದ್ದಾರೆ ಮತ್ತು ಉಭಯ ದೇಶಗಳ ನಡುವಿನ ಸ್ಥಿರ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಬುದ್ಧತೆ ಮತ್ತು ಬುದ್ಧಿವಂತಿಕೆಯೊಂದಿಗೆ ಮತ್ತು ಪರಸ್ಪರ ಗೌರವವನ್ನು ತೋರಿಸುವ ಮೂಲಕ ಭಾರತ ಮತ್ತು ಚೀನಾ ಶಾಂತಿಯುತ ಮತ್ತು ಸ್ಥಿರ ಸಂಬಂಧವನ್ನು ಹೊಂದಬಹುದು ಎಂದು ಮೋದಿ ಮತ್ತು ಕ್ಸಿ ಇಬ್ಬರೂ ಒತ್ತಿ ಹೇಳಿದರು ಎಂದು ಮಿಸ್ರಿ ತಿಳಿಸಿದ್ದಾರೆ.

ಅಧಿಕೃತ ಸಂವಾದ ಕಾರ್ಯವಿಧಾನಗಳನ್ನು ಬಳಸಿಕೊಂಡು ಕಾರ್ಯತಂತ್ರದ ಸಂವಹನವನ್ನು ಹೆಚ್ಚಿಸುವ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಸ್ಥಿರಗೊಳಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳು ಈಗ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಿಸ್ರಿ ಹೇಳಿದರು.

ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ತಮ್ಮ ಮಿಲಿಟರಿಗಳಿಂದ ಗಸ್ತು ತಿರುಗುವ ಒಪ್ಪಂದವನ್ನು ದೃಢಪಡಿಸಿದ ಎರಡು ದಿನಗಳ ನಂತರ ಈ ಸಭೆ ನಡೆಯಿತು, ಇದು ನಾಲ್ಕು ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವ ಪ್ರಮುಖ ಪ್ರಗತಿಯಾಗಿದೆ."ಕಳೆದ ಹಲವಾರು ವಾರಗಳಲ್ಲಿ, ಭಾರತ ಮತ್ತು ಚೀನಾದ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ವಿವಿಧ ವೇದಿಕೆಗಳಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿದ್ದಾರೆ. ಈ ಚರ್ಚೆಗಳ ಪರಿಣಾಮವಾಗಿ, LAC ಉದ್ದಕ್ಕೂ ಗಸ್ತು ವ್ಯವಸ್ಥೆಗಾಗಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಮತ್ತು ಇದು ಸೇನಾ ಹಿಂತೆಗೆತಕ್ಕೆ ಕಾರಣವಾಗುತ್ತದೆ. 2020 ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೂ ಇದು ನೆರವಾಗಲಿದೆ. ನಾವು ಈ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದ್ದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸೋಮವಾರ (ಅ.21) ರಂದು ನಡೆದಿದ್ದ ಒಪ್ಪಂದ ಮತ್ತು ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆಗಳನ್ನು ದೃಢಪಡಿಸಿದ್ದರು.

"ಇತ್ತೀಚಿನ ಅವಧಿಯಲ್ಲಿ, ಚೀನಾ ಮತ್ತು ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜತಾಂತ್ರಿಕ ಮತ್ತು ಮಿಲಿಟರಿ ವೇದಿಕೆಗಳ ಮೂಲಕ ನಿಕಟ ಸಂವಹನ ನಡೆಸುತ್ತಿದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಬೀಜಿಂಗ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

ನವೆಂಬರ್ 2022 ರಲ್ಲಿ, ಇಂಡೋನೇಷ್ಯಾ ಅಧ್ಯಕ್ಷರು ಜಿ 20 ನಾಯಕರಿಗೆ ಆಯೋಜಿಸಿದ್ದ ಭೋಜನಕೂಟದಲ್ಲಿ ಮೋದಿ ಮತ್ತು ಕ್ಸಿ ಶುಭಾಶಯ ವಿನಿಮಯ ಮಾಡಿಕೊಂಡು ಸಂಕ್ಷಿಪ್ತ ಸಂಭಾಷಣೆ ನಡೆಸಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿಯೂ, ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಶೃಂಗಸಭೆಯ ನಡುವೆ ಭಾರತದ ಪ್ರಧಾನಿ ಮತ್ತು ಚೀನಾದ ಅಧ್ಯಕ್ಷರು ಜೋಹಾನ್ಸ್‌ಬರ್ಗ್‌ನಲ್ಲಿ ಸಂಕ್ಷಿಪ್ತ ಮತ್ತು ಅನೌಪಚಾರಿಕ ಮಾತುಕತೆ ನಡೆಸಿದ್ದರು.

2019 ರ ಅಕ್ಟೋಬರ್‌ನಲ್ಲಿ ಮಾಮಲ್ಲಪುರಂನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಉಭಯ ನಾಯಕರು ಕೊನೆಯದಾಗಿ ರಚನಾತ್ಮಕ ಸಭೆಯನ್ನು ನಡೆಸಿದ್ದರು. ಪೂರ್ವ ಲಡಾಖ್ ಗಡಿ ವಿವಾದ ಮೇ 2020 ರಲ್ಲಿ ಉಂಟಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT