ಪಾಕಿಸ್ತಾನ ಸೇನೆ ಮೇಲೆ ಬಂಡುಕೋರ ದಾಳಿ (ಸಂಗ್ರಹ ಚಿತ್ರ) 
ವಿದೇಶ

ಪಾಕಿಸ್ತಾನ ವಿರುದ್ಧ ಮತ್ತೆ ಮುಗಿಬಿದ್ದ Balochistan ಬಂಡುಕೋರರು, 9 ಸೈನಿಕರು ಹತ!

ಬಲೂಚ್ ಲಿಬರೇಶನ್ ಆರ್ಮಿ ಗುಂಪು ಮಾರಕ ದಾಳಿಗಳ ಸರಣಿಯ ನಂತರ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಆ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದ ದಿನವೇ ಈ ದಾಳಿ ನಡೆದಿದೆ.

ಕ್ವೆಟ್ಟಾ: ಅಮೆರಿಕ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ವಿರುದ್ಧ ಬಲೂಚಿಸ್ತಾನ ಬಂಡುಕೋರರು ದಾಳಿ ನಡೆಸಿದ್ದಾರೆ.

ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ತಾನದ ವಾಶುಕ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಂಬತ್ತು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗುಂಪು ಮಾರಕ ದಾಳಿಗಳ ಸರಣಿಯ ನಂತರ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಆ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿದ ದಿನವೇ ಅಂದರೆ ಸೋಮವಾರ ಈ ದಾಳಿ ನಡೆದಿದೆ.

ದಾಳಿ ನಡೆದ ವಾಶುಕ್ ಜಿಲ್ಲೆಯ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, ಡಜನ್ಗಟ್ಟಲೆ ಉಗ್ರರು ಪೊಲೀಸ್ ಠಾಣೆ ಮತ್ತು ಗಡಿ ಪಡೆಗಳ ಆವರಣದ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದರು.

ಮೋಟಾರ್‌ಬೈಕ್‌ಗಳಲ್ಲಿ ಬಂದ ಸುಮಾರು 40 ರಿಂದ 50 ಭಯೋತ್ಪಾದಕರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿ ಅವುಗಳನ್ನು ಧ್ವಂಸ ಮಾಡಿದರು. ವಾಶುಕ್ ಜಿಲ್ಲೆಯ ಬಸಿಮಾ ನಗರದ ಫ್ರಾಂಟಿಯರ್ ಕಾರ್ಪ್ಸ್ ಕಾಂಪೌಂಡ್ ಮೇಲೆ ಉಗ್ರಗಾಮಿಗಳು ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದಿದ್ದಾರೆ.

ಈ ವೇಳೆ ಕನಿಷ್ಠ 9 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದು, ಆರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಆಂತರಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇನ್ನು ಈ ದಾಳಿಗೆ ಸಂಬಂಧಿಸಿದಂತೆ ಈ ವರೆಗೂ ಯಾವುದೇ ಸಂಘಟನೆ ಹೊಣೆಹೊತ್ತುಕೊಂಡಿಲ್ಲ. ಆದರೆ ಪಾಕಿಸ್ತಾನ ಸೇನೆ ಬಿಎಲ್ಎ (ಬಲೂಚ್ ಲಿಬರೇಶನ್ ಆರ್ಮಿ) ಈ ದಾಳಿ ಮಾಡಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

ಮಹಾ ಅಚ್ಚರಿ: ಶರದ್ ಪವಾರ್ ಪುತ್ರಿ ಸುಪ್ರಿಯ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್!

ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ, ಪುನರ್ ಪರಿಶೀಲನೆಗೆ ಒತ್ತಾಯ

'ರಾಜಕೀಯ ದ್ವೇಷ, ಪೊಲೀಸರ ವೈಫಲ್ಯ' ಬಳ್ಳಾರಿ ಹಿಂಸಾಚಾರ ಘಟನೆಗೆ ಕಾರಣ: ಕಾಂಗ್ರೆಸ್ ಸಮಿತಿ

SCROLL FOR NEXT