ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಣಾಯಕ ರಾಜತಾಂತ್ರಿಕ ಹಸ್ತಕ್ಷೇಪ ಮತ್ತು ಪ್ರಮುಖ ನಾಯಕತ್ವವನ್ನು ಉಲ್ಲೇಖಿಸಿ, ಪಾಕಿಸ್ತಾನ ಸರ್ಕಾರ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಔಪಚಾರಿಕವಾಗಿ ಶಿಫಾರಸು ಮಾಡಲು ನಿರ್ಧರಿಸಿದೆ ಎಂದು ದಿ ಡಾನ್ ವರದಿ ಮಾಡಿದೆ.
ಪಹಲ್ಗಾಮ್ ದಾಳಿಯ ನಂತರ ಅದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ಆಪರೇಷನ್ ಸಿಂದೂರ್ ನಂತರ ಹಲವಾರು ದಿನಗಳ ಗಡಿಯಾಚೆಗಿನ ಶೆಲ್ ದಾಳಿಯ ನಂತರ ಸಂಘರ್ಷವು ಕದನ ವಿರಾಮದಲ್ಲಿ ಕೊನೆಗೊಂಡಿತು. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಸರ್ಕಾರ, ಅಂತಾರಾಷ್ಟ್ರೀಯ ಸಮುದಾಯವು ಅಪ್ರಚೋದಿತ ಮತ್ತು ಕಾನೂನುಬಾಹಿರ ಭಾರತೀಯ ಆಕ್ರಮಣಕ್ಕೆ ಸಾಕ್ಷಿಯಾಗಿದೆ, ಇದು ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಗಂಭೀರ ಉಲ್ಲಂಘನೆಯಾಗಿದೆ, ಇದರ ಪರಿಣಾಮವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಮುಗ್ಧ ಜೀವಗಳು ಬಲಿಯಾಗಿವೆ.
ಭಾರತದ ಆಕ್ರಮಣದ ನಂತರ, ಪಾಕಿಸ್ತಾನ ಆಪರೇಷನ್ ಬನ್ಯಾನಮ್ ಮಾರ್ಸೂಸ್ ನ್ನು ಪ್ರಾರಂಭಿಸಿತು. ಅದು ದೃಢನಿಶ್ಚಯದ ಮತ್ತು ನಿಖರವಾದ ಮಿಲಿಟರಿ ಪ್ರತಿಕ್ರಿಯೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದೆ.
ದೇಶದ ಸ್ವ-ರಕ್ಷಣೆಯ ಮೂಲಭೂತ ಹಕ್ಕನ್ನು ಚಲಾಯಿಸಲು ಮತ್ತು ಎಚ್ಚರಿಕೆಯಿಂದ ಶಾಂತಿ ಮರುಸ್ಥಾಪಿಸಲು ನಾಗರಿಕ ಹಾನಿಯನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುವಾಗ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಈ ಪ್ರತಿಕ್ರಿಯೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಪ್ರಾದೇಶಿಕ ಪ್ರಕ್ಷುಬ್ಧತೆಯ ಈ ಕ್ಷಣದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ "ಪಾಕಿಸ್ತಾನ ಮತ್ತು ಭಾರತ ಎರಡರೊಂದಿಗಿನ ಬಲವಾದ ರಾಜತಾಂತ್ರಿಕ ಸಂಬಂಧದ ಮೂಲಕ ಉತ್ತಮ ಕಾರ್ಯತಂತ್ರದ ದೂರದೃಷ್ಟಿ ಮತ್ತು ಅದ್ಭುತ ರಾಜತಾಂತ್ರಿಕತೆಯನ್ನು ಪ್ರದರ್ಶಿಸಿದರು ಎಂದು ಪಾಕ್ ಸರ್ಕಾರ ಹೇಳಿದೆ.
ಡಾನ್ ವರದಿ ಮಾಡಿದಂತೆ, ಅಮೆರಿಕ ಅಧ್ಯಕ್ಷರು ವೇಗವಾಗಿ ಹದಗೆಡುತ್ತಿದ್ದ ಪರಿಸ್ಥಿತಿಯನ್ನು ಶಮನಗೊಳಿಸಿದರು, ಅಂತಿಮವಾಗಿ ಕದನ ವಿರಾಮವನ್ನು ಭದ್ರಪಡಿಸಿಕೊಂಡರು. ಎರಡು ಪರಮಾಣು ರಾಷ್ಟ್ರಗಳ ನಡುವಿನ ಸಂಘರ್ಷವನ್ನು ತಪ್ಪಿಸಿದರು. ಈ ಹಸ್ತಕ್ಷೇಪವು ನಿಜವಾದ ಶಾಂತಿ ಸ್ಥಾಪಕರಾದ ಡೊನಾಲ್ಡ್ ಟ್ರಂಪ್ ಪಾತ್ರ ಮತ್ತು ಸಂವಾದದ ಮೂಲಕ ಸಂಘರ್ಷ ಪರಿಹಾರಕ್ಕೆ ಅವರ ಬದ್ಧತೆಗೆ ಸಾಕ್ಷಿಯಾಗಿದೆ.