ಟೆಹ್ರಾನ್: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ವಿಚಾರದಲ್ಲಿ ಪ್ರಚೋದನಕಾರಿ ಕ್ರಮ ಕೈಗೊಳ್ಳದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಾತನಾಡಿ, “ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ದಾಳಿ ನಡೆಸುವ ದೇಶಗಳು ಮತ್ತು ಅವರ ಬೆಂಬಲಿಗರು, ವಿಶೇಷವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಚೋದನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಲಿದೆ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಮಾರ್ಗದ ಸುರಕ್ಷತೆಗಾಗಿ ರಕ್ಷಣಾ ಪಡೆ ನಿಯೋಜಿಸುವ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಮತದಾನ ನಡೆಯಬೇಕಿತ್ತು. ಆದರೆ, ಈ ಮತದಾನವನ್ನು ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ಘೋಷಿಸಲಾಗಿಲ್ಲ.
ಜಾಗತಿಕ ಇಂಧನ ಸರಬರಾಜಿಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿ ಮಾರ್ಗ ಅಮೆರಿಕಾ ಮತ್ತು ಇಸ್ರೇಲ್ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಬಹುತೇಕ ಸ್ಥಗಿತಗೊಂಡಿದೆ. ಈ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ.
ಬಹ್ರೇನ್ ಮಂಡಿಸಿದ ಕರಡು ನಿರ್ಣಯದಲ್ಲಿ, ಹೋರ್ಮುಜ್ ಜಲಸಂಧಿಯಲ್ಲಿ ಸಾಗಾಣಿಕೆ ಹಡಗುಗಳನ್ನು ರಕ್ಷಿಸಲು “ರಕ್ಷಣಾತ್ಮಕ” ಬಲ ಬಳಸುವ ಪ್ರಸ್ತಾಪವಿತ್ತು. ಅಮೆರಿಕಾ ಮತ್ತು ಕೆಲವು ಗಲ್ಫ್ ದೇಶಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮುಂತಾದ ದೇಶಗಳು ಮೊದಲಿನ ಕರಡುಗಳಿಗೆ ವಿರೋಧ ವ್ಯಕ್ತಪಡಿಸಿದ್ದವು.
ಈ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಭೀತಿ ವ್ಯಕ್ತವಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡಲು ತಕ್ಷಣ ರಾಜತಾಂತ್ರಿಕ ಪರಿಹಾರ ಅಗತ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.