ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಯಶಸ್ವಿಯಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿದೆ. ಇರಾನ್ನ ವಿದೇಶಾಂಗ ವ್ಯವಹಾರಗಳ ಸಚಿವ ಸೆಯದ್ ಅಬ್ಬಾಸ್ ಅರಾಘಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು 'ಡಿಯರ್ ಬ್ರದರ್' ಎಂದು ಕರೆದಿದ್ದು, ಅವರಿಬ್ಬರಿಗೂ ಕೃತಜ್ಞತೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ತಮ್ಮ ಟ್ರೂತ್ ಸೋಶಿಯಲ್ ನಲ್ಲಿ ಅರಾಘ್ಚಿ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ. ಇದು ಶಾಂತಿ ಮಾತುಕತೆಗಳಲ್ಲಿ ಇಸ್ಲಾಮಾಬಾದ್ನ ಪಾತ್ರದ ಮೇಲಿನ ಅಮೆರಿಕದ ನಂಬಿಕೆಯನ್ನು ಸೂಚಿಸುತ್ತದೆ.
ಪಾಕಿಸ್ತಾನ ಮೇಲಿನ ನಂಬಿಕೆಗೆ ಪ್ರಮುಖ ಕಾರಣಗಳು:
ಯಾವುದೇ ದೇಶ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಬೇಕಾದರೆ ಅದನ್ನು ಎರಡೂ ರಾಷ್ಟ್ರಗಳು ನಂಬಬೇಕು. ಯುಎಸ್ ಜೊತೆಗಿನ ಉತ್ತಮ ಒಡನಾಟದಿಂದಾಗಿ ಇರಾನ್ ತನ್ನ ನೆರೆಯ ಅರಬ್ ರಾಷ್ಟ್ರದವರನ್ನು ನಂಬುವುದಿಲ್ಲ. ವಾಸ್ತವವಾಗಿ, ಯುಎಸ್-ಇಸ್ರೇಲ್ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಟೆಹ್ರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಪದೇ ಪದೇ ಕ್ಷಿಪಣಿ ದಾಳಿ ನಡೆಸಿತು.ಪಾಕಿಸ್ತಾನವು ಇರಾನ್ನೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಉಭಯ ದೇಶಗಳು ನಿಕಟ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ. ಷರೀಫ್ ಮತ್ತು ಮುನೀರ್ ಅವರನ್ನು Dear Brother ಎಂದು ಅರಾಘ್ಚಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಪ್ಯಾಲೆಸ್ಟೈನ್ ಸಮಸ್ಯೆಯಿಂದಾಗಿ ಪಾಕಿಸ್ತಾನವು ಇಸ್ರೇಲ್ನೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಮತ್ತು ಟೆಹ್ರಾನ್ ಅದನ್ನು ನಂಬಲು ಇದು ಮತ್ತೊಂದು ಕಾರಣವಾಗಿದೆ.
ಅಮೆರಿಕಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಿಂದ ಪಾಕಿಸ್ತಾನದೊಂದಿಗಿನ ಅದರ ಬಾಂಧವ್ಯ ಸುಧಾರಿಸಿದೆ. ಗಾಜಾ ಶಾಂತಿ ಮಂಡಳಿಗೆ ಇಸ್ಲಾಮಾಬಾದ್ ಕೂಡ ಸೇರಿದೆ. ಟ್ರಂಪ್ ಈಗಾಗಲೇ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮುನೀರ್ ಅವರನ್ನು ತಮ್ಮ ನೆಚ್ಚಿನ ಫೀಲ್ಡ್ ಮಾರ್ಷಲ್ ಎಂದು ಉಲ್ಲೇಖಿಸಿದ್ದಾರೆ. ಯುಎಸ್ ಮತ್ತು ಇರಾನ್ ಮಿಲಿಟರಿಯೊಂದಿಗೆ ಮುನೀರ್ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಜೊತೆಗೆ ಪಾಕಿಸ್ತಾನವು ಇತರ ಗಲ್ಫ್ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಹೀಗಾಗಿ ಸಂಘರ್ಷ ಕೊನೆಗಾಣಿಸುವಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಲ್ಲಾ ಸಾಮರ್ಥ್ಯವನ್ನು ಪಾಕಿಸ್ತಾನ ಹೊಂದಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನಕ್ಕೆ ಕದನ ವಿರಾಮ ಅಗತ್ಯವೇಕೆ?
ಪಾಕಿಸ್ತಾನಕ್ಕೆ ಕದನ ವಿರಾಮವೂ ಅಗತ್ಯವಾಗಿದೆ. ಏಕೆಂದರೆ, ಅದು ತನ್ನ ಹೆಚ್ಚಿನ ತೈಲವನ್ನು ಮಧ್ಯಪ್ರಾಚ್ಯದಿಂದ ಪಡೆಯುತ್ತದೆ. ಅಲ್ಲದೇ ಅನೇಕ ಪಾಕಿಸ್ತಾನಿಗಳು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಹಣವನ್ನು ಕಳುಹಿಸುತ್ತಾರೆ. ಈ ಪ್ರದೇಶದಲ್ಲಿನ ಉದ್ವಿಗ್ನತೆ ಮತ್ತು ಹಾರ್ಮುಜ್ ಜಲಸಂಧಿಯ ಇರಾನ್ನ ದಿಗ್ಬಂಧನವು ಜಾಗತಿಕ ಇಂಧನ ಬೆಲೆಗಳನ್ನು ಹೆಚ್ಚಿಸಿತ್ತು. ಅಲ್ಲದೇ ಪಾಕಿಸ್ತಾನದಲ್ಲಿಯೂ ಬೆಲೆಗಳು ಹೆಚ್ಚಾಗುವುದರೊಂದಿಗೆ ಶೆಹಬಾಜ್ ಷರೀಫ್ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಪಾಕಿಸ್ತಾನದಲ್ಲಿ ಆರ್ಥಿಕ ತೊಂದರೆಗಳು ಜೊತೆಗೆ ನೆರೆಯ ಅಫ್ಘಾನಿಸ್ತಾನ ಹಾಗೂ ಭಾರತದೊಂದಿಗೆ ಸಂಘರ್ಷವೂ ಇದೆ. ಹೀಗಾಗಿ ಮತ್ತೊಂದು ನೆರೆಯ ರಾಷ್ಟ್ರವಾದ ಇರಾನ್ ನಲ್ಲಿ ಅಸ್ಥಿರತೆ ಪಾಕಿಸ್ತಾನಕ್ಕೆ ಇಷ್ಟವಿರಲಿಲ್ಲ.
ದೇಶದಲ್ಲಿ ಅಸ್ಥಿರತೆಯ ಕಾರಣಗಳು: ಯುಎಸ್-ಇಸ್ರೇಲ್ ಆಕ್ರಮಣದಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯು ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಇದರಿಂದ ಹಲವು ಮಂದಿ ಸಾವನ್ನಪ್ಪಿದ್ದರು. ಕದನ ವಿರಾಮದಲ್ಲಿ ಪಾಕಿಸ್ತಾನದ ಸ್ವಂತ ಹಿತಾಸಕ್ತಿಯು ಮಧ್ಯಸ್ಥಿಕೆಯಲ್ಲಿ ಎರಡೂ ರಾಷ್ಟ್ರಗಳ ನಂಬಿಕೆ ಗಳಿಸುವಲ್ಲಿ ನೆರವಾಗಿದೆ. ಜೊತೆಗೆ ಚೀನಾದ ಬೆಂಬಲವು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.
ಪಾಕಿಸ್ತಾನ ಇನ್ನೂ ಯಾಕೆ ಸಂಭ್ರಮಾಚರಣೆ ಮಾಡಿಲ್ಲ:
ಯುಎಸ್ ಮತ್ತು ಇರಾನ್ ನಡುವಿನ ಕದನ ವಿರಾಮ ತಾತ್ಕಾಲಿಕವಷ್ಟೇ. ಮುಂದಿನ ದಿನಗಳಲ್ಲಿ ವಾಷಿಂಗ್ಟನ್ ಮತ್ತು ಟೆಹ್ರಾನ್ ಮಾತುಕತೆಗಳನ್ನು ಪಾಕಿಸ್ತಾನ ಹೇಗೆ ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬುದು ಪ್ರಮುಖವಾಗಿದೆ. ಆದ್ದರಿಂದ ಪಾಕಿಸ್ತಾನ ಮಧ್ಯಸ್ಥಿಕೆ ರಾಷ್ಟ್ರವಾಗಿ ಹೊರಹೊಮ್ಮುವ ಮೂಲಕ ರಾಜತಾಂತ್ರಿಕವಾಗಿ ಹೆಸರು ಗಳಿಸಬಹುದು. ಆದರೆ ಈ ಒಪ್ಪಂದದಲ್ಲಿ ಏನೇ ವಿಫಲವಾದರೂ ಅದರ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೆ, ಯುಎಸ್ ಮತ್ತು ಇರಾನ್ - ತಪ್ಪಿಲ್ಲದಿದ್ದರೂ ಇಸ್ಲಾಮಾಬಾದ್ ಅನ್ನು ದೂಷಿಸಬಹುದು.