ವಾಷಿಂಗ್ಟನ್: ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ವಾಷಿಂಗ್ಟನ್'ನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ಮಾತುಕತೆಗಳು ನಡೆದಿದ್ದು, ವ್ಯಾಪಾರ, ರಕ್ಷಣಾ ಸಹಕಾರ ಮತ್ತು ಕ್ವಾಡ್ ಸಹಭಾಗಿತ್ವ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ವಾಷಿಂಗ್ಟನ್ನಲ್ಲಿ ನಡೆದ ಈ ಸಭೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಭಾಗವಹಿಸಿದ್ದರು.
ವಿಕ್ರಮ್ ಮಿಸ್ರಿ ಅವರ ಮೂರು ದಿನಗಳ ಕಾಲದ ಅಮೆರಿಕ ಭೇಟಿ ವೇಳೆ ಈ ಸಭೆ ನಡೆದಿದ್ದು, ಇದು ಭಾರತ–ಅಮೆರಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
ವಿಶೇಷವಾಗಿ ವ್ಯಾಪಾರ ವೃದ್ಧಿ, ರಕ್ಷಣಾ ಸಹಕಾರ, ಅಪರೂಪದ ಖನಿಜ ಸಂಪನ್ಮೂಲಗಳ (critical minerals) ಪೂರೈಕೆ ಹಾಗೂ ಕ್ವಾಡ್ ವೇದಿಕೆಯಲ್ಲಿ ಸಹಕಾರವನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗಿದೆ.
ಈ ಸಭೆಯಲ್ಲಿ ಹಾಜರಿದ್ದ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು, ಈ ಮಾತುಕತೆಯನ್ನು ಫಲಪ್ರದ ಎಂದು ವಿವರಿಸಿದ್ದು, ಮಾರ್ಕೋ ರೂಬಿಯೊ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇದರಿಂದ ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕಗಳು ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಇದಕ್ಕೂ ಮೊದಲು, ವಿಕ್ರಮ್ ಮಿಸ್ರಿ ಅವರು ಅಮೆರಿಕ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಹಾಗೂ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಆಲಿಸನ್ ಹೂಕರ್ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.
ಈ ಸಭೆಗಳಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳು, ವಿಶೇಷವಾಗಿ ಪರ್ಷಿಯನ್ ಗಲ್ಪ್ ಪ್ರದೇಶದ ಪರಿಸ್ಥಿತಿ ಹಾಗೂ ಭದ್ರತಾ ವಿಚಾರಗಳು ಚರ್ಚೆಗೆ ಬಂದವು ಎಂದು ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಟಾಮಿ ಪಿಗೋಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತ್ತೊಂದೆಡೆ, ಅಮೆರಿಕದ ರಾಜಕೀಯ ವ್ಯವಹಾರಗಳ ಉಪ ಕಾರ್ಯದರ್ಶಿ ಆಲಿಸನ್ ಹೂಕರ್ ಅವರು, ಭದ್ರತೆ, ರಕ್ಷಣಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವುದೇ ಈ ಮಾತುಕತೆಗಳ ಪ್ರಮುಖ ಅಂಶವಾಗಿತ್ತು ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಭಾರತ ದೇಶಗಳ ನಾಗರಿಕರು ಹೆಚ್ಚು ಸುರಕ್ಷಿತವಾಗಿಯೂ ಸಮೃದ್ಧವಾಗಿಯೂ ಇರಲು ಪ್ರಾಯೋಗಿಕ ಮಾರ್ಗಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ. Quad ವೇದಿಕೆಯ ಮೂಲಕವೂ ಈ ಸಹಕಾರವನ್ನು ವಿಸ್ತರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದಂತೆ, ಕಳೆದ ಡಿಸೆಂಬರ್ನಲ್ಲಿ ನಡೆದ ವಿದೇಶಾಂಗ ಕಚೇರಿ ಸಲಹಾ ಸಭೆಗಳ ನಂತರದ ಪ್ರಗತಿಯನ್ನು ಉಭಯ ದೇಶಗಳು ಪರಿಶೀಲಿಸಿವೆ. ಮಧ್ಯಪ್ರಾಚ್ಯ ಬೆಳವಣಿಗೆಗಳು ಸೇರಿದಂತೆ ಪರಸ್ಪರ ಆಸಕ್ತಿ ಹೊಂದಿರುವ ಹಲವು ಪ್ರಾದೇಶಿಕ ವಿಚಾರಗಳ ಬಗ್ಗೆ ಸಹ ಅಭಿಪ್ರಾಯ ವಿನಿಮಯ ನಡೆದಿದೆ ಎಂದು ಹೇಳಿದೆ.
ಇದರ ನಡುವೆ, ಅಮೆರಿಕ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಅವರು ತಮ್ಮ ತಂಡದೊಂದಿಗೆ ಇಸ್ಲಾಮಾಬಾದ್'ಗೆ ಭೇಟಿ ನೀಡಿ, ಇರಾನ್ ನಾಯಕರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯದ ನಂತರ ಈ ಮಾತುಕತೆಗಳು ನಡೆಯುತ್ತಿರುವುದು ಗಮನಾರ್ಹವಾಗಿದೆ.