ಟೆಲ್ ಅವಿವ್: ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರು ಮಂಗಳವಾರ ಇರಾನ್, ಹಾರ್ಮುಜ್ ಜಲಸಂಧಿ ಮತ್ತು ಲೆಬನಾನ್ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಚರ್ಚಿಸಿದರು.
ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್, ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡುತ್ತಿದೆ. ಹೀಗಾಗಿ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಕ್ರಮದ ಅಗತ್ಯವಿದೆ ಎಂದು ಸಾರ್ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಸಾರ್, "ನನ್ನ ಸ್ನೇಹಿತ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಭಾಷಣೆ ನಡೆಸಿದೆ. ನಾವು ಇಬ್ಬರೂ ಇರಾನ್, ಹಾರ್ಮುಜ್ ಜಲಸಂಧಿ ಮತ್ತು ಲೆಬನಾನ್ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವ ಪರಿಸ್ಥಿತಿಗಳ ಕುರಿತು ಚರ್ಚಿಸಿದ್ದೇವೆ. ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಇದು ನಿರ್ಣಾಯಕವಾಗಿದೆ ಎಂದು ನಾನು ಹೇಳಿದೆ" ಎಂದು ಸಾರ್ ತಿಳಿಸಿದ್ದಾರೆ.
"ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್ ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಮತ್ತು ಜಾಗತಿಕ ಆರ್ಥಿಕತೆಗೆ ಹಾನಿ ಉಂಟು ಮಾಡುವುದರಿಂದ ಭಾರತ ಮತ್ತು ಕೊಲ್ಲಿಯಲ್ಲಿರುವ ನಮ್ಮ ಸ್ನೇಹಿತರು ಸೇರಿದಂತೆ ಎಲ್ಲಾ ದೇಶಗಳಿಗೆ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸುವ ಕ್ರಮದ ಅಗತ್ಯವಿದೆ ಎಂದು ನಾನು ಹೇಳಿದ್ದೇನೆ" ಎಂದು ಸಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೈಶಂಕರ್ ಅವರು ಯುಎಇಗೆ ತಮ್ಮ ಅಧಿಕೃತ ಭೇಟಿಯ ನಂತರ ಸಾರ್ ಅವರು ಈ ಪೋಸ್ಟ್ ಹಾಕಿದ್ದಾರೆ.