ನವದೆಹಲಿ: ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಹೊಸ ಷರತ್ತು ಹಾಕಿದ್ದು, ಮಾಜಿ ಪ್ರಧಾನಿ ಶೇಖ್ ಹಸಿನಾರನ್ನು ತಮಗೆ ಹಸ್ತಾಂತರಿಸಿ ಎಂದು ಕೇಳಿದೆ.
ಹೌದು.. ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ತಮಗೆ ಹಸ್ತಾಂತರಿಸದ ಹೊರತು ಬಾಂಗ್ಲಾದೇಶ ಮತ್ತು ಭಾರತ ನಡುವಿನ ಉದ್ದೇಶಿತ ದ್ವಿಪಕ್ಷೀಯ ಮಾತುಕತೆಗಳು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಬಾಂಗ್ಲಾದೇಶ ಹೇಳಿದೆ.
ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಬಾಂಗ್ಲಾದೇಶ ಸರ್ಕಾರ, ತಮ್ಮ ಪ್ರಧಾನಿ ತಾರಿಕ್ ರಹಮಾನ್ ಅವರು ಭಾರತಕ್ಕೆ ಕೈಗೊಳ್ಳಲು ಉದ್ದೇಶಿಸಿರುವ ಪ್ರಸ್ತಾವಿತ ದೆಹಲಿ ಭೇಟಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಢಾಕಾ ಸರ್ಕಾರಕ್ಕೆ ಬೇಕಾಗಿರುವ ಇತರ ಪರಾರಿಯಾಗಿರುವ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯಲ್ಲಿ ಮುಂದುವರಿಯದಿದ್ದರೆ ನಡೆಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.
ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ರಹಮಾನ್ ಅವರ ಭಾರತ ದ್ವಿಪಕ್ಷೀಯ ಭೇಟಿಯ ಸಾಧ್ಯತೆ ಕುರಿತು ಉಭಯ ದೇಶಗಳ ಅಧಿಕಾರಿಗಳು ಕಳೆದ ಹಲವು ವಾರಗಳಿಂದ ಸಂಪರ್ಕದಲ್ಲಿದ್ದಾರೆ. ಆಗಸ್ಟ್ 5ರಂದು ದೆಹಲಿಯಲ್ಲಿ ಶೇಖ್ ಹಸೀನಾ ನಡೆಸಿದ ಸಾರ್ವಜನಿಕ ಸಂವಾದದಿಂದ ಈ ಕುರಿತ ಚರ್ಚೆಗಳ ಮೇಲೆ ಪರಿಣಾಮ ಬೀರಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಎಕೆಎಂ ಶಾಹಿದುಲ್ ಕರೀಂ ತಿಳಿಸಿದ್ದಾರೆ.
“ಭೇಟಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ,” ಎಂದು ಕರೀಂ ಹೇಳಿದ್ದಾರೆ.
“ಈ ನಿಟ್ಟಿನಲ್ಲಿ, ಶೇಖ್ ಹಸೀನಾ ಹಾಗೂ ಇತರ ಪರಾರಿಯಾಗಿರುವ ಆರೋಪಿಗಳನ್ನು ಹಸ್ತಾಂತರಿಸುವ ನಮ್ಮ ಮನವಿಯ ಕುರಿತು ಭಾರತೀಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ನಾವು ಕೋರಿದ್ದೇವೆ. ಅಲ್ಲದೆ, ನಮ್ಮ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅನ್ವಯ ಶಹೀದ್ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ಆರೋಪಿಗಳಾದ ಆರೋಪಿತರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆಯೂ ಮನವಿ ಮಾಡಿದ್ದೇವೆ. ಅವರ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ರಾಜಕೀಯ ಕಾರ್ಯಕರ್ತ ಉಸ್ಮಾನ್ ಹಾದಿ ಅವರ ಹತ್ಯೆ ಆರೋಪ ಎದುರಿಸುತ್ತಿರುವ ಇಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರು ಮಾರ್ಚ್ನಲ್ಲಿ ಉತ್ತರ 24 ಪರಗಣಾಸ್ ಜಿಲ್ಲೆಯ ಗಡಿ ಪಟ್ಟಣ ಬಂಗಾಂವ್ನಲ್ಲಿ ವಿಶೇಷ ಕಾರ್ಯಪಡೆ (STF) ಮೂಲಕ ಬಂಧಿಸಿದ್ದರು.
ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಶೇಖ್ ಹಸೀನಾ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ನಡುವೆಯೂ, ದೆಹಲಿಯಲ್ಲಿ ಅವರು ಬಹಿರಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವುದು ರಹಮಾನ್ ಅವರ ಸಂಭವನೀಯ ಭೇಟಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು “ಕಲುಷಿತಗೊಳಿಸಿದೆ” ಎಂದು ಬಾಂಗ್ಲಾದೇಶ ಹೇಳಿದೆ.
ಆದರೆ ಹಸೀನಾ ಹಾಗೂ ಬಾಂಗ್ಲಾದೇಶದ ಅಧಿಕಾರಿಗಳು ಭಾಗವಹಿಸಿದ್ದ ಪತ್ರಿಕಾಗೋಷ್ಠಿಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶಕ್ಕೆ ಮಾಡಿರುವ ತನ್ನ ಮನವಿ ಇನ್ನೂ “ಪರಿಶೀಲನೆಯಲ್ಲಿದೆ” ಎಂದು ಭಾರತ ಈ ಹಿಂದೆ ತಿಳಿಸಿತ್ತು.