ಜೈಶ್ ಉಗ್ರ ನೆಲೆಗಳ ಮರು ನಿರ್ಮಾಣ 
ವಿದೇಶ

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

ಕ್ಷಿಪಣಿ ದಾಳಿಯಿಂದ ಹಾನಿಗೊಳಗಾಗಿದ್ದ ಕಟ್ಟಡದಲ್ಲಿ ಇದೀಗ ಹೊಸ ನಿರ್ಮಾಣ, ಪ್ಲಾಸ್ಟರಿಂಗ್, ಬಣ್ಣ ಹಾಗೂ ಮಾರ್ಬಲ್ ಕೆಲಸಗಳು ನಡೆದಿರುವುದು ಕಂಡುಬಂದಿದೆ.

ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಭಾರತದ ನಿಖರ ದಾಳಿಯಿಂದ ಭಾರೀ ಹಾನಿಗೊಳಗಾಗಿದ್ದ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (JeM)ನ ಬಹಾವಲ್ಪುರದಲ್ಲಿರುವ ಮುಖ್ಯ ಕಚೇರಿಯನ್ನು ಮತ್ತೆ ಭರ್ಜರಿಯಾಗಿ ಮರುನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿದ್ದು, ವರದಿಯಲ್ಲಿರುವಂತೆ ಲಭ್ಯವಾಗಿರುವ ವಿಶೇಷ ದೃಶ್ಯಗಳು ಹಾಗೂ ಗುಪ್ತಚರ ಮಾಹಿತಿಗಳ ಪ್ರಕಾರ, ಬಹಾವಲ್ಪುರದ ಮರ್ಕಜ್ ಸುಭಾನಲ್ಲಾ ಸಂಕೀರ್ಣದಲ್ಲಿ ಭಾರೀ ಪ್ರಮಾಣದ ಪುನರ್‌ನಿರ್ಮಾಣ ಕಾಮಗಾರಿ ನಡೆದಿದೆ.

ಕ್ಷಿಪಣಿ ದಾಳಿಯಿಂದ ಹಾನಿಗೊಳಗಾಗಿದ್ದ ಕಟ್ಟಡದಲ್ಲಿ ಇದೀಗ ಹೊಸ ನಿರ್ಮಾಣ, ಪ್ಲಾಸ್ಟರಿಂಗ್, ಬಣ್ಣ ಹಾಗೂ ಮಾರ್ಬಲ್ ಕೆಲಸಗಳು ನಡೆದಿರುವುದು ಕಂಡುಬಂದಿದೆ.

ಭಾರತದ ದಾಳಿಯಿಂದ ಉಂಟಾಗಿದ್ದ ಹಾನಿಯ ಬಹುತೇಕ ಗುರುತುಗಳನ್ನು ಅಳಿಸಿ, ಕಟ್ಟಡವನ್ನು ಮತ್ತೆ ಬಳಕೆಗೆ ಸಿದ್ಧಪಡಿಸಿರುವಂತೆ ಕಾಣುತ್ತಿದೆ.

ಉಗ್ರ ಸಂಘಟನೆಗಳಿಗೆ ಪಾಕ್ ಸರ್ಕಾರದಿಂದ ಕೋಟಿ ಕೋಟಿ ಹಣದ ನೆರವು

ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿರುವ ವರದಿ ಪ್ರಕಾರ, ಪಾಕಿಸ್ತಾನದ ಆಡಳಿತ ವ್ಯವಸ್ಥೆಯಿಂದ ಜೈಶ್-ಎ-ಮೊಹಮ್ಮದ್‌ಗೆ 25 ಕೋಟಿ ಪಾಕಿಸ್ತಾನಿ ರೂಪಾಯಿ ಹಣವನ್ನು ಕಂತುಗಳ ರೂಪದಲ್ಲಿ ನೀಡಲಾಗಿದೆ ಎನ್ನಲಾಗಿದೆ.

ಈ ಪೈಕಿ ಸುಮಾರು 11 ಕೋಟಿ ಪಾಕಿಸ್ತಾನಿ ರೂಪಾಯಿಯನ್ನು ಕೇಂದ್ರ ಸಭಾಂಗಣದ ಪುನರ್‌ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ವರದಿಯಾಗಿದೆ. ಈ ಮಾಹಿತಿ ದೃಢಪಟ್ಟರೆ, ವಿಶ್ವಸಂಸ್ಥೆ ಹಾಗೂ ಅಮೆರಿಕ ಉಗ್ರ ಸಂಘಟನೆ ಎಂದು ಘೋಷಿಸಿರುವ ಜೈಶ್‌ಗೆ ಪಾಕಿಸ್ತಾನದಿಂದ ದೊರೆಯುತ್ತಿರುವ ಬೆಂಬಲದ ಕುರಿತು ಮತ್ತಷ್ಟು ಗಂಭೀರ ಪ್ರಶ್ನೆಗಳು ಎದುರಾಗಲಿವೆ.

ಮದರಸಾ, ವಸತಿ ಕಟ್ಟಡಗಳಿಗೂ ಹೊಸ ರೂಪ

ಆಪರೇಷನ್ ಸಿಂಧೂರ್ ವೇಳೆ ಹಾನಿಗೊಳಗಾಗಿದ್ದ ಮದ್ರಸಾ ಅಲ್-ಸಬೀರ್ ಸೇರಿದಂತೆ ಹಲವು ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಅವುಗಳ ಜಾಗದಲ್ಲಿ ಹೊಸ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಮದ್ರಸಾವನ್ನು ಜೈಶ್‌ನ ಸಿದ್ಧಾಂತ ಬೋಧನಾ ಕೇಂದ್ರವಾಗಿ ಬಳಸಲಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜೈಶ್ ಕಮಾಂಡರ್‌ಗಳಿಗೆ ಸಂಬಂಧಿಸಿದ ವಸತಿ ಕಟ್ಟಡಗಳಲ್ಲೂ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

ಮಸೂದ್ ಅಝರ್ ಅಸ್ವಸ್ಥ; ಸಹೋದರರ ಕೈಗೆ ಹೊಣೆ?

ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಅನಾರೋಗ್ಯದಿಂದ ಅಸಮರ್ಥರಾಗಿದ್ದಾರೆ ಎನ್ನಲಾಗಿದ್ದು, ಸಂಘಟನೆಯ ಕಾರ್ಯಾಚರಣೆಯ ಜವಾಬ್ದಾರಿ ಅವರ ಸಹೋದರರಾದ ತಲ್ಹಾ ಅಲ್-ಸೈಫ್ ಹಾಗೂ ಮೊಹಿನುದ್ದೀನ್ ಔರಂಗಜೇಬ್ ಅಲಿಯಾಸ್ ಅಮ್ಮರ್ ಅಲ್ವಿ ಅವರತ್ತ ವರ್ಗಾವಣೆಯಾಗಿದೆ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.

ಮಸೂದ್ ಅಝರ್ ಹಾಗೂ ಅವರ ಸಹೋದರ ರೌಫ್ ಅಸ್ಗರ್ ಇನ್ನೂ ಪಾಕಿಸ್ತಾನದಲ್ಲೇ ಇದ್ದು, ಅಲ್ಲಿನ ರಕ್ಷಣೆಯನ್ನು ಪಡೆಯುತ್ತಿದ್ದಾರೆ ಎಂಬುದು ಭಾರತದ ಹಿಂದಿನ ಆರೋಪವಾಗಿದೆ. ಅವರು ಸಿಂಧ್ ಪ್ರಾಂತ್ಯದ ನವಾಬ್‌ಶಾ ಪ್ರದೇಶದಲ್ಲಿ ಇರುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ವರದಿಯಲ್ಲಿದೆ.

ಮತ್ತೆ ತಲೆ ಎತ್ತುತ್ತಿರುವ ಜೈಶ್ ಮೂಲಸೌಕರ್ಯ?

ಬಹಾವಲ್ಪುರದ ಮರ್ಕಜ್ ಸುಭಾನಲ್ಲಾ ಸಂಕೀರ್ಣದ ಮರುನಿರ್ಮಾಣವು ಕೇವಲ ಕಟ್ಟಡಗಳ ಪುನರ್‌ನಿರ್ಮಾಣದ ವಿಚಾರವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಆಪರೇಷನ್ ಸಿಂಧೂರ್ ಮೂಲಕ ಜೈಶ್‌ನ ಮೂಲಸೌಕರ್ಯಕ್ಕೆ ಭಾರೀ ಹೊಡೆತ ನೀಡಲಾಗಿದ್ದರೂ, ಆ ಸಂಘಟನೆಯನ್ನು ಬೆಂಬಲಿಸುವ ವ್ಯವಸ್ಥೆ ಇನ್ನೂ ಮುಂದುವರಿದಿದೆ ಎಂಬ ಆರೋಪಗಳಿಗೆ ಈ ಬೆಳವಣಿಗೆ ಮತ್ತಷ್ಟು ಬಲ ನೀಡಬಹುದು.

ಜೈಶ್-ಎ-ಮೊಹಮ್ಮದ್‌ನಂತಹ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನು ಭಾರತ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ಇದೀಗ ಧ್ವಂಸವಾಗಿದ್ದ ಬಹಾವಲ್ಪುರದ ನೆಲೆ ಮತ್ತೆ ಭರ್ಜರಿಯಾಗಿ ಮರುನಿರ್ಮಾಣವಾಗಿರುವುದು ಪಾಕಿಸ್ತಾನದ ಭಯೋತ್ಪಾದನೆ ವಿರೋಧಿ ಬದ್ಧತೆಯ ಮೇಲೆಯೇ ಹೊಸ ಪ್ರಶ್ನೆಗಳನ್ನು ಎತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!

ಮಂಡ್ಯದಲ್ಲಿ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫೆರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!