ಕಠ್ಮಂಡು: ಭಾರತದ ನೆರೆರಾಷ್ಟ್ರ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಭೀಕರ ಪ್ರವಾಹಕ್ಕೆ ಹಿಮಾಲಯದಲ್ಲಿ ಚೀನಾದ ನಿರ್ಮಾಣ ಚಟುವಟಿಕೆಯೇ ಕಾರಣ ಎಂದು ನೇಪಾಳ ಕರೆಸ್ಪಾಂಡೆನ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಪಾಳಿ ಪತ್ರಕರ್ತರ ಗುಂಪೊಂದು ಗಂಭೀರ ಆರೋಪ ಮಾಡಿದೆ.
ಚೀನಾ-ನೇಪಾಳ ಗಡಿಯುದ್ದಕ್ಕೂ ಹಿಮನದಿ ಪ್ರದೇಶಗಳಲ್ಲಿನ ನಿರ್ಮಾಣ ಕಾರ್ಯವು ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸಿದೆ ಮತ್ತು ಇದು ಪುನರಾವರ್ತಿತ ಹಿಮಪಾತಗಳಿಗೆ ಹಾಗೂ ದಿಢೀರ್ ಪ್ರವಾಹಕ್ಕೆ ಕಾರಣವಾಗಬಹುದು ಎಂದು ನೇಪಾಳಿ ಪತ್ರಕರ್ತ ಸಂಘಟನೆಗಳು ಆರೋಪಿಸಿವೆ.
ಕ್ಸಿನ್ಜಿಯಾಂಗ್-ಟಿಬೆಟ್ ಪ್ರದೇಶದಲ್ಲಿ ಚೀನಾದ ಅವ್ಯಾಹತ ನಿರ್ಮಾಣ ಕಾರ್ಯವೇ ಈ ವಿನಾಶಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಗೈರಾಂಗ್ ಬಳಿ ನಿರ್ಮಾಣ ಕಾರ್ಯ
ಚೀನಾ-ನೇಪಾಳ ಗಡಿಯುದ್ದಕ್ಕೂ ಎತ್ತರದ ಹಿಮನದಿ ಪ್ರದೇಶಗಳಲ್ಲಿ ತನ್ನ "ಕ್ಸಿಯಾಕಾಂಗ್ ವಸಾಹತುಗಳು" ಪರಿಸರ ವಿಕೋಪಕ್ಕೆ ಕಾರಣವಾಗಿವೆ ಮತ್ತು ಚೀನಾ-ನೇಪಾಳ ಗಡಿಯಲ್ಲಿ ಈಗ ಪ್ರತಿ ವರ್ಷ ಹಿಮಪಾತಗಳು ಸಂಭವಿಸುತ್ತಿವೆ ಎಂದು ನೇಪಾಳ ಕರೆಸ್ಪಾಂಡೆನ್ಸ್ X ನಲ್ಲಿ ಪೋಸ್ಟ್ ಮಾಡಿದೆ.
ಟಿಬೆಟ್ನ ಗೈರಾಂಗ್ ಪಟ್ಟಣದ ಬಳಿ ಬುಧವಾರದ ಪ್ರವಾಹ ಉಂಟಾಗಿದೆ ಎಂದು ಪತ್ರಕರ್ತರ ಗುಂಪು ಹೇಳಿದೆ.
ಇನ್ನು ಟಿಬೆಟ್ನ ಕೆರುಂಗ್ನಲ್ಲಿ, ಚೀನಾ ನಿರ್ದಯವಾಗಿ ಬೆಟ್ಟಗಳನ್ನು ಕಡಿದು ತ್ರಿಶೂಲಿ ನದಿಯ ನೈಸರ್ಗಿಕ ಹರಿವನ್ನು ಬದಲಾಯಿಸಿದೆ.
ರಸುವಾ ಗಡಿಯಲ್ಲಿ ಬಂದರು ನಿರ್ಮಾಣ
ರಸುವಾ ಗಡಿಯಲ್ಲಿ ಕೆರುಂಗ್ ಬಂದರನ್ನು ಎರಡು ನದಿಗಳ ಸಂಗಮದಲ್ಲಿ ನಿರ್ಮಿಸಲಾಗಿದೆ. ಈ ರಚನೆಯು ನೇಪಾಳದ ಕಡೆಗೆ ನೀರಿನ ಹರಿವನ್ನು ವೇಗಗೊಳಿಸಲು ಕಾರಣವಾಗುತ್ತದೆ ಮತ್ತು ಹಠಾತ್ ಪ್ರವಾಹವನ್ನು ಉಲ್ಬಣಗೊಳಿಸುತ್ತದೆ ಎಂದು ಆರೋಪಿಸಲಾಗಿದೆ.
ಇದನ್ನು ಪರಿಸರದ ವಿರುದ್ಧ ಚೀನಾದ "ಉದ್ದೇಶಪೂರ್ವಕ ಅಪರಾಧ" ಎಂದು ಕರೆದಿರುವ ಪತ್ರಕರ್ತರ ಗುಂಪು, ನೇಪಾಳ ಪ್ರಧಾನಿ ಬಾಲೆನ್ ಶಾ ಅವರು ಬೀಜಿಂಗ್ ಜೊತೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಬೇಕೆಂದು ಒತ್ತಾಯಿಸಿದೆ.