ಕಠ್ಮಂಡು: ಜಗತ್ತಿನಲ್ಲಿ ಕಂಡು ಕೇಳರಿಯದ ರೀತಿಯ ಜಲ ಪ್ರಳಯಕ್ಕೆ ತುತ್ತಾಗಿರುವ ನೇಪಾಳದಲ್ಲಿ ಬಲಿಯಾದವರ ಸಂಖ್ಯೆ 600ಕ್ಕೂ ಮೀರಿದ್ದು, ಸಹಸ್ರಾರು ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವಂತೆಯೇ ಸಾರ್ವಜನಿಕ, ವಾಣಿಜ್ಯ ಮತ್ತು ಖಾಸಗಿ ಆಸ್ತಿಗಳ ಕಳ್ಳತನ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ರಸುವಾ ಮತ್ತು ಸುತ್ತಮುತ್ತಲಿನ ಮೇಲ್ಭಾಗದ ಜಲಾನಯನ ಪ್ರದೇಶಗಳಿಂದ ಉಗಮವಾಗುವ ತ್ರಿಶೂಲಿ ನದಿಯ ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬ್ಯಾಂಕ್ ಲಾಕರ್ ಒಡೆದು ತೆರೆದ ಆರೋಪದ ಮೇಲೆ ನೇಪಾಳದ ಭದ್ರತಾ ಪಡೆಗಳು ಧಾಡಿಂಗ್ನಲ್ಲಿ 29 ಮಂದಿಯನ್ನು ಬಂಧಿಸಿವೆ.
ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಜಂಟಿ ಗಸ್ತು ತಂಡವು, ಹಾನಿಗೊಳಗಾದ ಬ್ಯಾಂಕ್ ಲಾಕರ್ ನಿಂದ ಅಕ್ರಮವಾಗಿ ಹಣವನ್ನು ಹೊರತೆಗೆಯುತ್ತಿದ್ದ ಶಂಕಿತರನ್ನು ಸೆರೆಹಿಡಿದಿದೆ. ಅಧಿಕಾರಿಗಳು ಸ್ಥಳದಿಂದ 92, 68,505 ರೂ. ನೇಪಾಳಿ ನಗದು (ಸುಮಾರು 57ಲಕ್ಷ) ವಶಪಡಿಸಿಕೊಂಡಿದ್ದಾರೆ.
ಬಂಧಿತ 29 ಶಂಕಿತರನ್ನು ಪ್ರಸ್ತುತ ಧಾಡಿಂಗ್ನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇರಿಸಲಾಗಿದ್ದು, ಅಲ್ಲಿ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನೇಪಾಳ ಪೊಲೀಸ್ ವಕ್ತಾರ ಹಾಗೂ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (DIG) ಅಭಿ ನಾರಾಯಣ್ ಕಫ್ಲೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಪತ್ತು ನಿರ್ವಹಣಾ ಕಾರ್ಯಗಳ ನಡುವೆ ಸಾರ್ವಜನಿಕ, ವಾಣಿಜ್ಯ ಮತ್ತು ಖಾಸಗಿ ಆಸ್ತಿಗಳ ಮೇಲಿನ ಕಳ್ಳತನ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ತಡೆಯಲು ಭದ್ರತಾ ಸಂಸ್ಥೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಣ್ಗಾವಲು ಮತ್ತು ಗಸ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.