ಸಿಯಾಟಲ್: 2023ರಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಪೊಲೀಸ್ ಅಧಿಕಾರಿ ಚಾಲನೆ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಭಾರತ ಮೂಲದ ಪದವಿ ವಿದ್ಯಾರ್ಥಿನಿ ಮೃತಪಟ್ಟಿದ್ದರು.
ಇದೀಗ, ಅವರ ಕುಟುಂಬಕ್ಕೆ ಸಿಯಾಟೆಲ್ನ ಸ್ಥಳೀಯಾಡಳಿತ 29 ಮಿಲಿಯನ್ ಡಾಲರ್ (ಸುಮಾರು ₹ 262 ಕೋಟಿ) ಪರಿಹಾರ ಘೋಷಿಸಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸ್ ಕಾರಿನ ಡಿಕ್ಕಿ ರಭಸಕ್ಕೆ ಜಾಹ್ನವಿ ಕಂದುಲಾ ಅವರು 137 ಅಡಿ ಎತ್ತರಕ್ಕೆ ಹಾರಿ ರಸ್ತೆಬದಿ ಬಿದ್ದಿದ್ದರು. ವೇಗವಾಗಿ ಕಾರು ಓಡಿಸಿಕೊಂಡು ಬಂದಿದ್ದ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ಸೌತ್ ಲೇಕ್ ಯೂನಿಯನ್ ಕ್ರಾಸ್ವಾಕ್ ಬಳಿಯ ವೇಗ ಮೀತಿಯನ್ನು ಮೀರಿದ್ದರು. ಗಂಟೆಗೆ 25 ಮೈಲು ವೇಗವಾಗಿ ಬರಬೇಕಿದ್ದ ಕಾರು, ಗಂಟೆಗೆ 74 ಮೈಲಿ ವೇಗದಲ್ಲಿ ಚಲಿಸುತ್ತಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿತ್ತು.
ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು. ಈ ಆರ್ಥಿಕ ಪರಿಹಾರವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿಯನ್ನು ತರುತ್ತದೆ ಎಂದು ಆಶಿಸುತ್ತೇವೆ ಎಂಬುದಾಗಿ ಸಿಯಾಟೆಲ್ ನಗರದ ಸ್ಥಳೀಯಾಡಳಿತ ಹೇಳಿದೆ.
ಈ ಸಂಬಂಧ ವಕೀಲ ಎರಿಕಾ ಇವಾನ್ಸ್ ಬುಧವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಜಾಹ್ನವಿ ಕಂದುಲಾ ಅವರ ಜೀವ ಅತ್ಯಂತ ಮುಖ್ಯವಾಗಿತ್ತು. ಈ ಪರಿಹಾರವು ಅವರ ಕುಟುಂಬ, ಅವರ ಸ್ನೇಹಿತರು ಮತ್ತು ನಮ್ಮ ಸಮುದಾಯಕ್ಕೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಕಂದುಲಾ ಅವರು ಸಿಯಾಟಲ್ ನಾರ್ಥ್ ಈಸ್ಟರ್ನ್ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಮಾಹಿತಿ ವ್ಯವಸ್ಥೆಗಳ ಸಂಬಂಧಿತ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.
ಅಪಘಾತದ ತೀವ್ರ ಗಾಯಗಳಿಂದ ರಸ್ತೆಯಲ್ಲಿ ನರಳುತ್ತಿದ್ದ ಜಾಹ್ನವಿ ಕಂದುಲಾ ಬಳಿ ನಿಂತಿದ್ದ ಪೊಲೀಸ್ ಅಧಿಕಾರಿಗಳು ಜಾಹ್ನವಿ ಅವರ ನೋವನ್ನು ಅಪಹಾಸ್ಯ ಮಾಡಿದ್ದರು. ಈ ಪೈಕಿ ಓರ್ವಾಧಿಕಾರಿ ಡೇನಿಯಲ್ ಆಡೆರರ್ ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರಿಗೆ ತಮ್ಮ ಬಾಡಿ ಕ್ಯಾಮೆರಾದಿಂದ ರೆಕಾರ್ಡ್ ಮಾಡಲಾದ ದೂರವಾಣಿ ಕರೆಯಲ್ಲಿ, "ಜಾಹ್ನವಿ ಕಂದುಲಾ ಅವರ ಜೀವ ಸೀಮಿತ ಮೌಲ್ಯ ಹೊಂದಿದ್ದು, ನಗರ ಆಡಳಿತ ಅವರಿಗೆ ಪರಿಹಾರವಾಗಿ 11,000 ಡಾಲರ್ ಚೆಕ್ ನೀಡಬೇಕು" ಎಂದು ವ್ಯಂಗ್ಯವಾಡಿದ್ದರು.
ಆದರೆ ಈ ಇಬ್ಬರೂ ಆಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡದಿರುವುದನ್ನು ಪ್ರಶ್ನಿಸಿ, ಜಾಹ್ವನಿ ಕಂದುಲಾ ಅವರ ಕುಟುಂಬವು ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯವು ಸಿಯಾಟಲ್ ನಗರ ಆಡಳಿತವು ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ 29 ಮಿಲಿಯನ್ ಡಾಲರ್ ಪರಿಹಾರ ನೀಡಬೇಕು ಎಂದು ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.