ನೇಪಾಳ: ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿಬಿದ್ದ ಪರಿಣಾಮ 18 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಪೋಖರಾದಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ ಬಸ್ ತ್ರಿಶೂಲಿ ನದಿಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಬಸ್ ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಬೆಳಗಿನ ಜಾವ 1:15ರ ಸುಮಾರಿಗೆ (ಸ್ಥಳೀಯ ಕಾಲಮಾನ) ಬೇನಿಘಾಟ್ ರೋರಂಗ್ ಗ್ರಾಮಾಂತರ ಪುರಸಭೆಯ ವಾರ್ಡ್ 3 ರಲ್ಲಿರುವ ಚರೌಂಡಿ ಬಳಿಯ ಚೈನಾಧಾರ ಎಂಬ ಸ್ಥಳಕ್ಕೆ ಬಸ್ ತಲುಪಿದಾಗ ನದಿಗೆ ಬಿದ್ದಿದೆ.
ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಸಂಚಾರ ಪೊಲೀಸ್ ಕಛೇರಿಯ ಮುಖ್ಯಸ್ಥ ಧಾಡಿಂಗ್ ಶಿಶಿರ್ ಥಾಪಾ ತಿಳಿಸಿದ್ದಾರೆ.
ಗಾಯಗೊಂಡಿರುವ 25 ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೆದ್ದಾರಿ ರಕ್ಷಣಾ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಜ್ಕುಮಾರ್ ಠಾಕುರಿ ತಿಳಿಸಿದ್ದಾರೆ.
ನೇಪಾಳಿ ಸೇನೆಯ ಸಿಬ್ಬಂದಿ, ಸಶಸ್ತ್ರ ಪೊಲೀಸ್ ಪಡೆ, ನೇಪಾಳ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕಠ್ಮಂಡು ಪೋಸ್ಟ್ ತಿಳಿಸಿದೆ. ರಾತ್ರಿಯ ಘಟನೆಯು ರಕ್ಷಣಾ ಪ್ರಯತ್ನಗಳನ್ನು ಕಷ್ಟಕರವಾಗಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.