ಕರಾಚಿ: ಪಾಕಿಸ್ತಾನದಲ್ಲಿ 23 ವರ್ಷದ ಹಿಂದೂ ರೈತನ ಯುವಕನೊಬ್ಬನನ್ನು ಗುಂಡಿಕ್ಕಿ ಕಗ್ಗೊಲೆ ಮಾಡಲಾಗಿದೆ. ಜಮೀನ್ದಾರನ ಜಮೀನಿನಲ್ಲಿ ಮನೆ ನಿರ್ಮಿಸಿದ್ದಕ್ಕಾಗಿ 23 ವರ್ಷದ ಕಲ್ಲೇಶ್ ಕೊಹ್ಲಿ ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ತಲ್ಹಾರ್ ಗ್ರಾಮದಲ್ಲಿ ಜನವರಿ 4 ರಂದು ಈ ಘಟನೆ ನಡೆದಿದೆ. ನಿಜಾಮನಿ ಒಡೆತನದ ಭೂಮಿಯಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಕೊಹ್ಲಿಗೆ ಗುಂಡು ಹಾರಿಸಲಾಗಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಕೊಹ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಆತನ ಸಹೋದರ ಪೂನ್ ಕುಮಾರ್ ಕೊಹ್ಲಿ ಎಫ್ಐಆರ್ ದಾಖಲಿಸಿದ ನಂತರ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಆರೋಪಿಗಳಾದ ಜಮೀನ್ದಾರ ಸರ್ಫರಾಜ್ ನಿಜಾಮನಿ ಮತ್ತು ಆತನ ಸಹಾಯಕ ಜಫರುಲ್ಲಾ ಖಾನ್ ನನ್ನು ಶನಿವಾರ ರಾತ್ರಿ ಪೊಲೀಸರ ವಿಶೇಷ ತಂಡ ಹೈದರಾಬಾದಿನಲ್ಲಿ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಸ್ಥಳದಿಂದ ಪರಾರಿಯಾದ ನಂತರ ಮತ್ತು ಅವರ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೊನೆಗೂ ಅವರನ್ನು ಶನಿವಾರ ರಾತ್ರಿ ಹೈದರಾಬಾದ್ನ ಫತೇ ಚೌಕ್ ಪ್ರದೇಶದಿಂದ ಬಂಧಿಸಿದ್ದೇವೆ ಎಂದು ಎಸ್ಎಸ್ಪಿ ಬದಿನ್ ಕಮರ್ ರೆಜಾ ಜಸ್ಕಾನಿ ಹೇಳಿದರು.
ಕೊಹ್ಲಿ ತನ್ನ ಭೂಮಿಯಲ್ಲಿ ಮನೆ ನಿರ್ಮಿಸಿಕೊಳ್ಳುವುದನ್ನು ಬಯಸದ ನಿಜಾಮಾನಿ ಗುಂಡಿಕ್ಕಿ ಕೊಂದ ನಂತರ ಹಿಂದೂ ಸಮುದಾಯ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದೆ.