ಡೊನಾಲ್ಡ್ ಟ್ರಂಪ್  
ವಿದೇಶ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಕಳೆದ ತಿಂಗಳಿನಿಂದ ಇರಾನ್ ಮತ್ತು ಅಮೆರಿಕದ ನಡುವೆ ನೇರ ಮಾತುಕತೆ ನಡೆದಿಲ್ಲ. ಆದರೆ, ಈ ವಾರ ಎರಡೂ ದೇಶಗಳು ಮತ್ತೆ ಪರಸ್ಪರ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ, ಮಧ್ಯವರ್ತಿಯಾಗಿರುವ ಕತಾರ್‌ನ ನಿಯೋಗವು ಟೆಹ್ರಾನ್‌ಗೆ ಭೇಟಿ ನೀಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆ ಶುಕ್ರವಾರ, ಇರಾನ್‌ನೊಂದಿಗೆ ಮತ್ತಷ್ಟು ಮಾತುಕತೆ ನಡೆಸಲು ಒಪ್ಪಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ದಶಕಗಳಿಂದ ವೈರಾಗ್ಯ ಹೊಂದಿರುವ ಈ ಎರಡು ರಾಷ್ಟ್ರಗಳ ನಡುವಿನ ಕದನ ವಿರಾಮ (Ceasefire) ಈಗಾಗಲೇ ಅಂತ್ಯಗೊಂಡಿದೆ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದರು.

ಕಳೆದ ತಿಂಗಳಿನಿಂದ ಇರಾನ್ ಮತ್ತು ಅಮೆರಿಕದ ನಡುವೆ ನೇರ ಮಾತುಕತೆ ನಡೆದಿಲ್ಲ. ಆದರೆ, ಈ ವಾರ ಎರಡೂ ದೇಶಗಳು ಮತ್ತೆ ಪರಸ್ಪರ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ, ಮಧ್ಯವರ್ತಿಯಾಗಿರುವ ಕತಾರ್‌ನ ನಿಯೋಗವು ಟೆಹ್ರಾನ್‌ಗೆ ಭೇಟಿ ನೀಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ಮತ್ತು ಇರಾನ್ ಸುಮಾರು ಮೂರು ವಾರಗಳ ಹಿಂದೆ ಹಲವು ತಿಂಗಳುಗಳ ಕಾಲ ಜಾರಿಯಲ್ಲಿದ್ದ ಕದನ ವಿರಾಮವನ್ನು ಶಾಶ್ವತ ಶಾಂತಿ ಒಪ್ಪಂದವಾಗಿ ಪರಿವರ್ತಿಸುವ ಉದ್ದೇಶದಿಂದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ಮೊನ್ನೆ ಗುರುವಾರ ಸತತ ಎರಡನೇ ದಿನವೂ ನಡೆದ ಪರಸ್ಪರ ದಾಳಿಗಳು ಮತ್ತೆ ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧದ ಭೀತಿಯನ್ನು ಹುಟ್ಟುಹಾಕಿವೆ.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಮ್ಮನ್ನು ಮತ್ತೆ 'ಮಾತುಕತೆ' ಮುಂದುವರಿಸಲು ಕೇಳಿದೆ. ಅದಕ್ಕೆ ನಾವು ಒಪ್ಪಿದ್ದೇವೆ. ಆದರೆ, ಅಮೆರಿಕವು ಅವರಿಗೆ ಯಾವುದೇ ಸಂದೇಹಕ್ಕೆ ಅವಕಾಶವಿಲ್ಲದಂತೆ, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಬರೆದಿದ್ದಾರೆ.

ಈ ವಾರದ ಆರಂಭದಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಲ್ಲಿಯೂ ಡೊನಾಲ್ಡ್ ಟ್ರಂಪ್ ಕದನ ವಿರಾಮ ಮುಗಿದಿದೆ ಎಂದು ಘೋಷಿಸಿದ್ದರು. ಅಲ್ಲದೆ, ಇರಾನ್‌ನೊಂದಿಗೆ ವ್ಯವಹರಿಸುವುದು ಸಮಯ ವ್ಯರ್ಥ ಎಂದೂ ಹೇಳಿದ್ದರು. ಅವರು ಇರಾನ್ ಅಧಿಕಾರಿಗಳನ್ನು "ನೀಚರು" ಮತ್ತು "ಅಸ್ವಸ್ಥ ಮನಸ್ಥಿತಿಯ ಜನರು" ಎಂದೂ ಟೀಕಿಸಿದ್ದರು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ತಿಳುವಳಿಕೆ ಒಪ್ಪಂದಕ್ಕೆ (Memorandum of Understanding) ಸಹಿ ಹಾಕಿದ ಬಳಿಕ ಅಮೆರಿಕ ಮತ್ತು ಇರಾನ್ ನಿಯೋಗಗಳು ಒಂದು ಸುತ್ತಿನ ನೇರ ಮಾತುಕತೆ ನಡೆಸಿದ್ದವು. ಜೊತೆಗೆ ಕತಾರ್‌ನಲ್ಲಿ ಪರೋಕ್ಷ ಮಾತುಕತೆಗಳೂ ನಡೆದಿದ್ದರೂ, ಇದುವರೆಗೆ ಯಾವುದೇ ರಾಜತಾಂತ್ರಿಕ ಪ್ರಗತಿ ಕಂಡುಬಂದಿಲ್ಲ.

ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಆಸ್ತಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೊಂಡಿದ್ದರೂ ಮತ್ತು ಕತಾರ್ ತನ್ನ ದ್ರವೀಕೃತ ನೈಸರ್ಗಿಕ ಅನಿಲ (LNG) ಟ್ಯಾಂಕರ್‌ಗಳಲ್ಲೊಂದರ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದರೂ, ದೋಹಾ ಸರ್ಕಾರ ಶುಕ್ರವಾರವೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವ ನಿಲುವಿಗೆ ಬೆಂಬಲ ನೀಡಿತು.

ಇದೇ ವೇಳೆ, ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ, ಮಂಗಳವಾರದ ಘಟನೆಗಳ ಬಳಿಕ ಮಧ್ಯವರ್ತಿಯಾಗಿ ಕತಾರ್‌ನ ಪಾತ್ರವನ್ನು ಬಲಪಡಿಸಲು ಕತಾರ್ ನಿಯೋಗ ಟೆಹ್ರಾನ್‌ಗೆ ಭೇಟಿ ನೀಡಿದೆ ಎಂದು ವರದಿ ಮಾಡಿದೆ. ಮಂಗಳವಾರ ಕತಾರ್ ತನ್ನ ಎಲ್‌ಎನ್‌ಜಿ ಟ್ಯಾಂಕರ್ ಮೇಲಿನ ದಾಳಿಯನ್ನು ಸ್ವೀಕಾರಾರ್ಹವಲ್ಲದ ದಾಳಿ ಎಂದು ಖಂಡಿಸಿತ್ತು. ಆದರೆ, ಇರಾನ್ ಈ ಆರೋಪವನ್ನು ತಳ್ಳಿಹಾಕಿದೆ.

ನಿನ್ನೆ ಕತಾರ್ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಈಜಿಪ್ಟ್ ವಿದೇಶಾಂಗ ಸಚಿವ ಬದರ್ ಅಬ್ದೆಲಾತ್ತಿ, "ಮತ್ತೆ ಮಾತುಕತೆ ಮೇಜಿನತ್ತ ಮರಳಬೇಕು ಎಂದು ಕರೆ ನೀಡಿದರು.

ಇದೇ ವೇಳೆ, ಇರಾನ್‌ನ ಮುಖ್ಯ ಮಾತುಕತೆಗಾರ ಹಾಗೂ ಸಂಸತ್ತಿನ ಸ್ಪೀಕರ್ ಆಗಿರುವ ಮೊಹಮ್ಮದ್ ಬಾಘರ್ ಘಾಲಿಬಾಫ್, ಅಮೆರಿಕದೊಂದಿಗೆ ನಡೆಯುತ್ತಿರುವ ಸಂಘರ್ಷವು ಇರಾನ್ ಶರಣಾಗುವುದರಿಂದ ಕೊನೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯುದ್ಧ ಅಂತ್ಯಗೊಳ್ಳುವುದು ಜಗತ್ತಿನ ಎಲ್ಲ ರಾಷ್ಟ್ರಗಳ ಆದ್ಯತೆಯಾಗಿದೆ. ಆದರೆ, ಈ ಸಂಘರ್ಷ ಇರಾನ್ ಶರಣಾಗುವುದರೊಂದಿಗೆ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಅವರು ಇರಾನ್‌ನ ಐಎಸ್‌ಎನ್‌ಎ (ISNA) ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಮತ್ತೊಮ್ಮೆ ಒಪ್ಪಂದಕ್ಕೆ ದ್ರೋಹ ಮಾಡಿದರೆ, ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ಅಮೆರಿಕದ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಹಾಗೂ ಇರಾನ್ ಜನರ ಹಕ್ಕುಗಳನ್ನು ಕಾಪಾಡುತ್ತೇವೆ ಎಂದು ಇಂಡೋನೇಷ್ಯಾದ ಪೀಪಲ್ಸ್ ಕನ್ಸಲ್ಟೇಟಿವ್ ಅಸೆಂಬ್ಲಿಯ ಸ್ಪೀಕರ್ ಅವರೊಂದಿಗೆ ನಡೆದ ಸಭೆಯಲ್ಲಿ ಅವರು ಹೇಳಿದರು.

ವಾಷಿಂಗ್ಟನ್‌ನೊಂದಿಗೆ ನಡೆದ ಮಾತುಕತೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೆ "ನಮಗೆ ನಿಮ್ಮ ಮೇಲೆ ಯಾವುದೇ ವಿಶ್ವಾಸವಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದಾಗಿ ಘಾಲಿಬಾಫ್ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮತ್ತೆ ಉದ್ವಿಗ್ನತೆ

ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿ 28ರಂದು ನಡೆಯುತ್ತಿದ್ದ ರಾಜತಾಂತ್ರಿಕ ಪ್ರಯತ್ನಗಳ ನಡುವೆಯೇ ಇರಾನ್ ಮೇಲೆ ಭಾರಿ ಅನಿರೀಕ್ಷಿತ ದಾಳಿಗಳನ್ನು ನಡೆಸುವುದರೊಂದಿಗೆ ಯುದ್ಧ ಆರಂಭವಾಯಿತು. ಈ ದಾಳಿಗಳಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಉನ್ನತ ನಾಯಕರು ಮೃತಪಟ್ಟರು ಎಂದು ವರದಿಯಾಗಿದೆ.

ಇದಕ್ಕೆ ಪ್ರತಿಯಾಗಿ ಇರಾನ್, ವಿಶ್ವದ ಸುಮಾರು ಐದನೇ ಒಂದು ಭಾಗದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಾಟ ನಡೆಯುವ ಹೋರ್ಮುಜ್ ಜಲಸಂಧಿಯನ್ನು ಪರಿಣಾಮಕಾರಿಯಾಗಿ ಮುಚ್ಚಿ, ಇಸ್ರೇಲ್ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿತು.

ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ನಂತರ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ್ದರಿಂದ ಯುದ್ಧ ಅಲ್ಲಿಗೂ ವಿಸ್ತರಿಸಿತು.

ನಂತರ ಏಪ್ರಿಲ್ 8ರಂದು ಕದನ ವಿರಾಮ ಒಪ್ಪಂದದ ಮೂಲಕ ವ್ಯಾಪಕ ಯುದ್ಧಕ್ಕೆ ತೆರೆ ಬಿದ್ದರೂ, ಅಂದಿನಿಂದಲೂ ಆಗಾಗ ಹಿಂಸಾಚಾರ ಮರುಕಳಿಸುತ್ತಿದೆ.

ಈ ಹೆಚ್ಚಿನ ಉದ್ವಿಗ್ನತೆಗಳಿಗೆ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವೇ ಪ್ರಮುಖ ಕಾರಣವಾಗಿದೆ. ಈ ಜಲಸಂಧಿಯ ಮೇಲೆ ತನ್ನ ನಿಯಂತ್ರಣ ಇರಬೇಕು ಹಾಗೂ ಅದರ ಮೂಲಕ ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಹಕ್ಕು ತನಗಿರಬೇಕು ಎಂದು ಇರಾನ್ ಒತ್ತಾಯಿಸುತ್ತಿದೆ.

ಯುದ್ಧಕ್ಕೂ ಮೊದಲು ಇರಾನ್‌ಗೆ ಅಂತಹ ಅಧಿಕಾರ ಇರಲಿಲ್ಲ. ಹಾರ್ಮುಜ್ ಜಲಸಂಧಿ ಒಮಾನ್ ಮತ್ತು ಇರಾನ್ ಎರಡೂ ರಾಷ್ಟ್ರಗಳ ಪ್ರಾದೇಶಿಕ ಜಲಪ್ರದೇಶದಲ್ಲಿದ್ದರೂ, ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಯಾವುದೇ ದೇಶವು ಸಾಮಾನ್ಯವಾಗಿ ಹಡಗುಗಳ ಸಂಚಾರವನ್ನು ತಡೆಯಲು ಅಥವಾ ಸುಂಕ ವಿಧಿಸಲು ಸಾಧ್ಯವಿಲ್ಲ.

ಮಂಗಳವಾರ ಅಮೆರಿಕ ಮತ್ತು ಕತಾರ್, ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್‌ಗಳನ್ನು ಇರಾನ್ ಗುರಿಯಾಗಿಸಿದೆ ಎಂದು ಆರೋಪಿಸಿದವು. ಇದಕ್ಕೆ ಪ್ರತಿಯಾಗಿ ಅಮೆರಿಕ ಬುಧವಾರ ಮತ್ತು ಗುರುವಾರ ಇರಾನ್‌ನ ಹಲವು ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿತು.

ಇದಕ್ಕೆ ಉತ್ತರವಾಗಿ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾಗಿ ಇರಾನ್ ಹೇಳಿಕೊಂಡಿದೆ. ಇದೇ ವೇಳೆ, ತನ್ನ ವಾಯುಪ್ರದೇಶದಲ್ಲಿ ಹಾರಿಬಂದ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾಗಿ ಜೋರ್ಡನ್ ತಿಳಿಸಿದೆ.

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ