ಪ್ಯಾರಿಸ್: ಭಾರತ ತನ್ನ ಪರಮಾಪ್ತ ರಾಷ್ಟ್ರ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ ಖಂಡಿತಾ ನಾವು ಅದರ ನೆರವಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
52ನೇ ಜಿ 7 ಶೃಂಗಸಭೆಯ ಅಂಗವಾಗಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಟ್ರಂಪ್, ಭಾರತ-ಅಮೆರಿಕ ರಕ್ಷಣಾ ಸಂಬಂಧಗಳನ್ನು ಶ್ಲಾಘಿಸಿ, ಮೋದಿ ನೇತೃತ್ವದ ಭಾರತಕ್ಕೆ ಸಂಘರ್ಷದ ಸಂದರ್ಭಗಳಲ್ಲಿ ಅಮೆರಿಕ ಬೆಂಬಲ ನೀಡಲಿದೆ ಎಂದು ಹೇಳಿದರು.
ಭಾರತದ ಮೇಲಿನ ತನ್ನ ದೃಢ ಬೆಂಬಲವನ್ನು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇದ್ದರೆ, ದೇಶದ ಮೇಲೆ ಯಾವುದೇ ದಾಳಿ ನಡೆದ ಸಂದರ್ಭದಲ್ಲಿ ಅಮೆರಿಕ ನೆರವಿಗೆ ನಿಲ್ಲಲಿದೆ ಎಂದು ಹೇಳಿದ್ದಾರೆ.
"ಇದು ಅತ್ಯುತ್ತಮ ಸಂಬಂಧವಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತದ ಮೇಲೆ ದಾಳಿ ನಡೆದರೆ ನಾವು ಅವರಿಗೆ ಸಹಾಯ ಮಾಡಲು ಇರುತ್ತೇವೆ. ನಮ್ಮ ನಡುವೆ ಯಾವುದೇ ಅಧಿಕೃತ ಒಪ್ಪಂದ ಇಲ್ಲ. ಆದರೆ ಅವರ ಮೇಲೆ ದಾಳಿ ನಡೆದರೆ ಮತ್ತು ಆ ಸಂದರ್ಭದಲ್ಲಿ ಪ್ರಧಾನಿ ಮೋದಿ ನಾಯಕತ್ವ ವಹಿಸಿಕೊಂಡಿದ್ದರೆ, ನಾವು ಖಂಡಿತ ನೆರವಿಗೆ ಬರುತ್ತೇವೆ.
ಯಾರಾದರೂ ಆ ವ್ಯಕ್ತಿಯ ಮೇಲೆ ದಾಳಿ ಮಾಡಿದರೆ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಬೇರೆ ನಾಯಕ ಇದ್ದರೆ ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅವರ ಮೇಲೆ ದಾಳಿ ನಡೆದಾಗ ಮೋದಿ ನಾಯಕತ್ವದಲ್ಲಿದ್ದರೆ ನಾವು ಖಂಡಿತಾ ಸಹಾಯ ಮಾಡುತ್ತೇವೆ" ಎಂದು ಟ್ರಂಪ್ ಹೇಳಿದರು.
ಈ ಹೇಳಿಕೆಯ ಬಳಿಕ ಇಬ್ಬರು ನಾಯಕರು ಪರಸ್ಪರ ಹಸ್ತಲಾಘವ ಮಾಡಿಕೊಂಡು ಆತ್ಮೀಯತೆ ಪ್ರದರ್ಶಿಸಿದರು.
ಭಾರತ ಆಪ್ತ ಸ್ನೇಹಿತ
ಮುಂದುವರಿದು ಮಾತನಾಡಿದ ಟ್ರಂಪ್, ತಾವು ಭಾರತದ "ಆಪ್ತ ಸ್ನೇಹಿತ" ಎಂದು ಹೇಳಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾಷಿಂಗ್ಟನ್ನಲ್ಲಿ ಅಪಾರ ಗೌರವವಿದೆ ಎಂದು ತಿಳಿಸಿದರು. "ನಾನು ಅಧ್ಯಕ್ಷನಾಗಿರುವವರೆಗೆ ಭಾರತಕ್ಕೆ ಶ್ವೇತಭವನದಲ್ಲಿ ಒಬ್ಬ ಉತ್ತಮ ಸ್ನೇಹಿತ ಇರುತ್ತಾನೆ. ಇಲ್ಲಿರುವ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಈ ವ್ಯಕ್ತಿಗೆ (ಪ್ರಧಾನಿ ಮೋದಿ) ಅಪಾರ ಗೌರವ ನೀಡುತ್ತಾರೆ," ಎಂದು ಅವರು ಹೇಳಿದರು.
16 ತಿಂಗಳ ಬಳಿಕ ಟ್ರಂಪ್-ಮೋದಿ ಮುಖಾಮುಖಿ ಭೇಟಿ
ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದು, ಕಳೆದ 16 ತಿಂಗಳಿಗಿಂತಲೂ ಹೆಚ್ಚು ಅವಧಿಯ ನಂತರ ಮೊದಲ ಬಾರಿಗೆ ಇಬ್ಬರು ನಾಯಕರು ಮುಖಾಮುಖಿಯಾಗಿ ಮಾತುಕತೆ ನಡೆಸಿದರು.
ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದಿದೆ.
ಮಂಗಳವಾರ ನಡೆದ ಜಿ 7 ಔಟ್ರೀಚ್ ಕಾರ್ಯಕ್ರಮದಲ್ಲಿ ಆತ್ಮೀಯ ಹಸ್ತಲಾಘವದೊಂದಿಗೆ ಆರಂಭವಾದ ಭೇಟಿ, ಬುಧವಾರ ಗಂಭೀರ ಮಾತುಕತೆಯಾಗಿ ಮುಂದುವರಿಯಿತು. ಈ ವೇಳೆ ಟ್ರಂಪ್ ಅವರು ಪ್ರಧಾನಿ ಮೋದಿಯನ್ನು "ಶಾಂತ ಮತ್ತು ಸಮತೋಲನದ ನಾಯಕ" ಎಂದು ಬಣ್ಣಿಸಿದರು.
ಅಂತೆಯೇ ಭಾರತ-ಅಮೆರಿಕ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಮುಂದಕ್ಕೆ ಕೊಂಡೊಯ್ಯುವ ವಿಚಾರವೇ ಈ ಸಭೆಯ ಪ್ರಮುಖ ಅಂಶವಾಗಲಿದೆ ಎಂದು ಈ ಹಿಂದೆ ಶ್ವೇತಭವನ ತಿಳಿಸಿತ್ತು.