ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಭುಗಿಲೆದ್ದಿದ್ದು, ಕದನ ವಿರಾಮದ ಹೊರತಾಗಿಯೂ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ರಾತ್ರೋರಾತ್ರಿ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಜನ ಮೃತಪಟ್ಟಿದ್ದಾರೆ.
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದ ರೊಚ್ಚಿಗೆದ್ದ ಇರಾನ್ನ ಕೇಂದ್ರ ಮಿಲಿಟರಿ ಕಮಾಂಡ್, ಶನಿವಾರ ಮತ್ತೊಮ್ಮೆ ಪ್ರಮುಖ ತೈಲ ಮಾರ್ಗ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದಾಗಿ ಘೋಷಿಸಿದೆ. ಇಸ್ರೇಲ್ ದಾಳಿ, ಅಮೆರಿಕದೊಂದಿಗಿನ ಟೆಹ್ರಾನ್ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇರಾನ್ ವಿವರಿಸಿದೆ.
"ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಚ್ಚಲಾಗುವುದು ಎಂದು ಈ ಮೂಲಕ ಘೋಷಿಸಲಾಗಿದೆ; ಶತ್ರುಗಳು ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇದು ಮೊದಲ ಹೆಜ್ಜೆ ಎಂದಿರುವ ಇರಾನ್, ಆಕ್ರಮಣ ಮುಂದುವರಿದರೆ, ಶತ್ರು ತನ್ನ ಬಾಧ್ಯತೆಗಳನ್ನು ಪಾಲಿಸುವಂತೆ ಒತ್ತಾಯಿಸಲು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಲೆಬನಾನ್ ಸರ್ಕಾರಿ ಮಾಧ್ಯಮವು, ಸುಮಾರು 20 ಸ್ಥಳಗಳ ಮೇಲೆ ಇಸ್ರೇಲಿ ವಾಯುದಾಳಿಗಳನ್ನು ವರದಿ ಮಾಡಿದೆ. ದೇಶದ ನಾಗರಿಕ ರಕ್ಷಣಾ ಸಂಸ್ಥೆ ನಬತಿಹ್ ಪ್ರದೇಶದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಈ ವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಸಂಘರ್ಷ ಪೀಡಿತ ಎಲ್ಲಾ ಪ್ರದೇಶಗಳಲ್ಲಿ ತಕ್ಷಣವೇ ಕದನ ವಿರಾಮ ಜಾರಿಯಾಗಬೇಕು ಹಾಗೂ ಲೆಬನಾನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದು ಉಲ್ಲೇಖಿಸಲಾಗಿದೆ.
ಆದರೆ ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ ಮಹತ್ವದ ಶಾಂತಿ ಒಪ್ಪಂದದ ನಂತರ ಆರಂಭವಾಗಬೇಕಿದ್ದ ರಾಜತಾಂತ್ರಿಕ ಮಾತುಕತೆಗಳು ದಿಢೀರ್ ರದ್ದಾಗಿದ್ದು, ಇದರಿಂದ ಆತಂಕಗೊಂಡ ಪ್ಯಾಲೆಸ್ಟೈನ್, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದೆ.