ಕತಾರ್: ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಸಂಘರ್ಷ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಈ ಮಧ್ಯೆ ಕತಾರ್ ಅನಿಲ ಸ್ಥಾವರದಲ್ಲಿ ಭಾನುವಾರ ಭಾರಿ ಸ್ಫೋಟ ಸಂಭವಿಸಿದ್ದು, ಭಾರತ ಮತ್ತು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 66 ಜನರು ಗಾಯಗೊಂಡಿದ್ದಾರೆ ಎಂದು ಕತಾರ್ ಇಂಧನ ಸಚಿವ ಸಾದ್ ಅಲ್-ಕಾಬಿ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಂದಿಗೂ ಆಗಬಾರದು ಅಂತಾ ಯಾವಾಗಲೂ ಆಶಿಸುತ್ತಿದ್ದ ಕೆಲಸವನ್ನು ಇಂದು ಮಾಡಬೇಕಾಗಿದೆ. ಅದು ಭಾರತೀಯ ಮತ್ತು ಪಾಕ್ ಪ್ರಜೆಗಳು ಸೇರಿದಂತೆ 13 ಜನರ ದುರಂತವನ್ನು ಘೋಷಿಸುವುದಾಗಿದೆ. 66 ಜನರು ಗಾಯಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಯಾರಿಗೂ ಜೀವಕ್ಕೆ ಅಪಾಯ ಇಲ್ಲ ಎಂಬುದು ತಿಳಿದುಬಂದಿದೆ ಎಂದರು.
ಸ್ಫೋಟದ ಪರಿಣಾಮ ಈ ಮಾರಕ ದುರಂತ ಸಂಭವಿಸಿದೆ. ಇದು ದೇಶದ ರಫ್ತಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜಾಗತಿಕ ರಫ್ತುಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಇದು ವಿಧ್ವಂಸಕ ಅಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.
ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿರುವ ಬರ್ಜಾನ್ ಅನಿಲ ಪೂರೈಕೆ ಕೇಂದ್ರವು ದಿನಕ್ಕೆ ಸುಮಾರು 1.4 ಬಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಅನಿಲ ಮಾರಾಟದ ಸಾಮರ್ಥ್ಯವನ್ನು ಹೊಂದಿತ್ತು. ಇದನ್ನು ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಮತ್ತು ಅರೇಬಿಯನ್ ಪರ್ಯಾಯ ದ್ವೀಪದ ಮರುಭೂಮಿ ಪ್ರದೇಶಗಳಲ್ಲಿನ ಉಪ್ಪುನೀರಿನ ಸಂಸ್ಕರಣಾ ಘಟಕಗಳಿಗೆ ವಿದ್ಯುತ್ ನೀಡಲು ಕತಾರ್ ಬಳಸುತಿತ್ತು. ಕತಾರ್ ಬಹುತೇಕ ಎಲ್ಲಾ ಸ್ಥಾವರವನ್ನು ಹೊಂದಿದೆ. ಈ ದುರಂತ ಕುರಿತು ಕಂಪನಿ ಇಲ್ಲಿಯವರೆಗೂ ಏನನ್ನೂ ಹೇಳಿಲ್ಲ.
ಮಾರ್ಚ್ನಲ್ಲಿ ಇರಾನಿನ ಕ್ಷಿಪಣಿ ರಾಸ್ ಲಫಾನ್ಗೆ ಅಪ್ಪಳಿಸಿದಾಗ ಬೆಂಕಿ ಹೊತ್ತಿಕೊಂಡಿತು. ಅದು ಹತೋಟಿಗೆ ಬರುವ ಮುನ್ನಾ ವ್ಯಾಪಕ ಹಾನಿಯನ್ನುಂಟುಮಾಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನಿನ ದಾಳಿಯಿಂದಾಗಿ ಕತಾರ್ ಅಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.