ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ನೆತನ್ಯಾಹು 
ವಿದೇಶ

Israel-Lebanon ಸಂಘರ್ಷಕ್ಕೆ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ ತ್ರಿಪಕ್ಷೀಯ ಒಪ್ಪಂದ, Hezbollah ಮಣಿಸುವವರೆಗೆ ಹಿಂದೆ ಸರಿಯಲ್ಲ ಎಂದ ನೆತನ್ಯಾಹು..!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ, "ಈ ಒಪ್ಪಂದವು ಶಾಶ್ವತ ಶಾಂತಿ ಮತ್ತು ಭದ್ರತೆಗೆ ಅಗತ್ಯವಾದ ಚೌಕಟ್ಟನ್ನು ರೂಪಿಸುವ ಮಹತ್ವದ ಮೈಲಿಗಲ್ಲಾಗಿದೆ" ಎಂದು ಹೇಳಿದ್ದಾರೆ.

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಅಮೆರಿಕ ಮಹತ್ವದ ರಾಜತಾಂತ್ರಿಕ ಹೆಜ್ಜೆಯಿಟ್ಟಿದೆ. ಅಮೆರಿಕ, ಇಸ್ರೇಲ್ ಮತ್ತು ಲೆಬನಾನ್ ನಡುವೆ ತ್ರಿಪಕ್ಷೀಯ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಒಪ್ಪಂದವನ್ನು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆ ಎಂದು ಮೂರು ರಾಷ್ಟ್ರಗಳೂ ಬಣ್ಣಿಸಿವೆ.

ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿನ ಇಸ್ರೇಲ್ ರಾಯಭಾರಿ ಯೆಚಿಯೇಲ್ ಲೈಟರ್, ಲೆಬನಾನ್ ರಾಯಭಾರಿ ನಡಾ ಹಮಾದೆ ಮೊವಾದ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಉಪಸ್ಥಿತರಿದ್ದರು. ಒಪ್ಪಂದಕ್ಕೆ ಸಹಿ ಹಾಕಲಾದರೂ ಅದರ ಸಂಪೂರ್ಣ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ, "ಈ ಒಪ್ಪಂದವು ಶಾಶ್ವತ ಶಾಂತಿ ಮತ್ತು ಭದ್ರತೆಗೆ ಅಗತ್ಯವಾದ ಚೌಕಟ್ಟನ್ನು ರೂಪಿಸುವ ಮಹತ್ವದ ಮೈಲಿಗಲ್ಲಾಗಿದೆ" ಎಂದು ಹೇಳಿದ್ದಾರೆ.

ಲೆಬನಾನ್ ರಾಯಭಾರಿ ನಡಾ ಹಮಾದೆ ಮೊವಾದ್, "ಈ ಒಪ್ಪಂದವು ಲೆಬನಾನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪುನಃಸ್ಥಾಪಿಸುವ ಮೊದಲ ಹೆಜ್ಜೆಯಾಗಿದೆ. ಶಾಶ್ವತ ಕದನ ವಿರಾಮ, ಜನರು ತಮ್ಮ ಮನೆಗಳಿಗೆ ಮರಳುವ ಅವಕಾಶ ಹಾಗೂ ದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿ ನೆಲೆಸಲು ಇದು ನೆರವಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇಸ್ರೇಲ್ ರಾಯಭಾರಿ ಯೆಚಿಯೇಲ್ ಲೈಟರ್, "ಈ ಚೌಕಟ್ಟು ಒಪ್ಪಂದವು ಮುಂದೆ ಇಸ್ರೇಲ್ ಮತ್ತು ಲೆಬನಾನ್ ನಡುವೆ ಸಂಪೂರ್ಣ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡಬಹುದು. ಎರಡೂ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ವ್ಯವಸ್ಥೆ ನಿರ್ಮಾಣವಾಗಲಿದೆ. ಈ ಒಪ್ಪಂದದಲ್ಲಿ ಇರಾನ್‌ಗೆ ಹಾಗೂ ಹೆಜ್ಬೊಲ್ಲಾಗೆ ಯಾವುದೇ ಪಾತ್ರವಿಲ್ಲ. ಶಾಂತಿಯ ಮಾರ್ಗ ಈಗ ತೆರೆದಿದೆ" ಎಂದು ಹೇಳಿದರು.

ಈ ಒಪ್ಪಂದಕ್ಕೂ ಮುನ್ನ ವಾಷಿಂಗ್ಟನ್‌ನಲ್ಲಿ ಐದು ಸುತ್ತಿನ ಮಾತುಕತೆಗಳು ನಡೆದಿದ್ದವು. ಮಾರ್ಚ್ ಆರಂಭದಲ್ಲಿ ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ನಂತರ ಇಸ್ರೇಲ್ ಲೆಬನಾನ್‌ನಲ್ಲಿ ಭಾರೀ ವೈಮಾನಿಕ ದಾಳಿ ಮತ್ತು ಭೂ ಕಾರ್ಯಾಚರಣೆ ಆರಂಭಿಸಿತ್ತು. ಇದರ ಪರಿಣಾಮ ಸಾವಿರಾರು ಮಂದಿ ಸಾವನ್ನಪ್ಪಿದ್ದು, ಎರಡೂ ಕಡೆಯೂ ಭಾರೀ ಹಾನಿಯಾಗಿದೆ.

ಲೆಬನಾನ್ ಅಧಿಕಾರಿಗಳ ಪ್ರಕಾರ, ಇಸ್ರೇಲ್ ದಾಳಿಗಳಲ್ಲಿ 4,200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಗಡಿ ಸಂಘರ್ಷದಲ್ಲಿ ಹಲವು ಇಸ್ರೇಲಿ ಸೈನಿಕರೂ ಸಾವನ್ನಪ್ಪಿದ್ದಾರೆ. ಈ ಹಿಂದೆ ಘೋಷಿಸಲಾದ ಹಲವು ಕದನ ವಿರಾಮಗಳು ವಿಫಲವಾಗಿದ್ದವು. ಎರಡೂ ದೇಶಗಳು ಪರಸ್ಪರ ಒಪ್ಪಂದ ಉಲ್ಲಂಘನೆಯ ಆರೋಪ ಮಾಡಿದ್ದವು. ಈ ಹೊಸ ಚೌಕಟ್ಟು ಒಪ್ಪಂದದ ಮಾತುಕತೆಯಲ್ಲಿ ಹಿಜ್ಬುಲ್ಲಾ ನೇರವಾಗಿ ಭಾಗಿಯಾಗಿರಲಿಲ್ಲ.

ಲೆಬನಾನ್ ಸರ್ಕಾರವು ದಕ್ಷಿಣ ಲೆಬನಾನ್‌ನಿಂದ ಇಸ್ರೇಲಿ ಪಡೆಗಳು ಸಂಪೂರ್ಣ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದೆ. ಮತ್ತೊಂದೆಡೆ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಪೂರ್ಣ ನಿಶಸ್ತ್ರೀಕರಣಗೊಳ್ಳಬೇಕು ಎಂಬುದು ಇಸ್ರೇಲ್‌ನ ಪ್ರಮುಖ ಷರತ್ತಾಗಿದೆ.

ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಈ ವಾರದ ಆರಂಭದಲ್ಲಿ, ಇಸ್ರೇಲಿ ಪಡೆಗಳು ಹಿಂತೆಗೆದ ಪ್ರದೇಶಗಳಲ್ಲಿ ಲೆಬನಾನ್ ಸೇನೆ ಸಂಪೂರ್ಣ ನಿಯಂತ್ರಣ ವಹಿಸುವ "ಪೈಲಟ್ ವಲಯ"ಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದರು.

ಇದರ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಹಿಜ್ಬುಲ್ಲಾ ಸಂಪೂರ್ಣ ನಿಶಸ್ತ್ರೀಕರಣಗೊಳ್ಳುವವರೆಗೆ ಇಸ್ರೇಲ್ ದಕ್ಷಿಣ ಲೆಬನಾನ್‌ನ ಭದ್ರತಾ ವಲಯದಿಂದ ಹಿಂದೆ ಸರಿಯುವುದಿಲ್ಲ" ಎಂದು ಘೋಷಿಸಿದ್ದಾರೆ.

"ದಕ್ಷಿಣ ಲೆಬನಾನ್‌ನಲ್ಲಿ ಭದ್ರತಾ ವಲಯವನ್ನು ಕಾಯ್ದುಕೊಳ್ಳುವುದು ನಮ್ಮ ದೊಡ್ಡ ಸಾಧನೆ. ಹಿಜ್ಬುಲ್ಲಾ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವವರೆಗೆ ನಾವು ಅಲ್ಲಿಯೇ ಉಳಿಯುತ್ತೇವೆ. ಸೇನೆಯ ಶಿಫಾರಸಿನ ಮೇರೆಗೆ ಎರಡು ಪೈಲಟ್ ಪ್ರದೇಶಗಳಲ್ಲಿ ಲೆಬನಾನ್ ಸೇನೆಗೆ ನಿಯಂತ್ರಣ ವಹಿಸಲು ಅವಕಾಶ ನೀಡಲಾಗುತ್ತದೆ. ಒಂದು ಪ್ರದೇಶ ಲಿಟಾನಿ ನದಿಯ ದಕ್ಷಿಣ ಭಾಗದಲ್ಲಿ ಭದ್ರತಾ ವಲಯದ ಹೊರಗಿದ್ದು, ಮತ್ತೊಂದು ಉತ್ತರ ಭಾಗದಲ್ಲಿದೆ," ಎಂದು ತಿಳಿಸಿದ್ದಾರೆ.

ಇದಲ್ಲದೆ, ದಕ್ಷಿಣ ಲೆಬನಾನ್‌ನ ಭದ್ರತಾ ವಲಯದಿಂದ ಸ್ಥಳಾಂತರಗೊಂಡಿರುವ ಲೆಬನಾನ್ ನಾಗರಿಕರಿಗೆ ಸದ್ಯಕ್ಕೆ ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡುವುದಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ನಾವು ಭದ್ರತಾ ವಲಯವನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳುತ್ತಿದ್ದೇವೆ. ಹಿಜ್ಬುಲ್ಲಾ ಮಾತ್ರವಲ್ಲ, ನಾಗರಿಕರ ಪ್ರವೇಶವನ್ನೂ ಸದ್ಯಕ್ಕೆ ಅನುಮತಿಸುವುದಿಲ್ಲ" ಎಂದು ಹೇಳಿದ್ದಾರೆ.

ಈ ತ್ರಿಪಕ್ಷೀಯ ಚೌಕಟ್ಟು ಒಪ್ಪಂದವು ತಕ್ಷಣವೇ ಶಾಶ್ವತ ಶಾಂತಿಯನ್ನು ಖಚಿತಪಡಿಸುವುದಿಲ್ಲ. ಆದರೆ, ಹಲವು ದಶಕಗಳಿಂದ ಸಂಘರ್ಷದಲ್ಲಿದ್ದ ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಬಂಧ ಸುಧಾರಣೆಗೆ ಇದು ಮಹತ್ವದ ರಾಜತಾಂತ್ರಿಕ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಮುಂದಿನ ದಿನಗಳಲ್ಲಿ ಕದನ ವಿರಾಮವನ್ನು ಶಾಶ್ವತಗೊಳಿಸುವುದು, ಇಸ್ರೇಲಿ ಪಡೆಗಳ ಹಿಂತೆಗೆತ, ಲೆಬನಾನ್ ಸೇನೆಯ ನಿಯಂತ್ರಣ ವಿಸ್ತರಣೆ ಹಾಗೂ ಹಿಜ್ಲುಲ್ಲಾ ನಿಶಸ್ತ್ರೀಕರಣದಂತಹ ಬೆಳವಣಿಗೆಗಳು ಈ ಒಪ್ಪಂದದ ಯಶಸ್ಸನ್ನು ನಿರ್ಧರಿಸಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ದೆಹಲಿಗೆ ತಮಿಳುನಾಡು ವಿಶೇಷ ಪ್ರತಿನಿಧಿಯಾಗಿ ಜನ ನಾಯಗನ್ ನಿರ್ಮಾಪಕನ ನೇಮಕ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು