ಇಸ್ಲಾಮಾಬಾದ್: ಭಾರತದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ವೇಳೆ ದಾಳಿಗೊಳಗಾಗಿ ಬಹುತೇಕ ನಾಶವಾಗಿದ್ದ ಮುರಿದ್ ವಾಯು ನೆಲೆ ಕಟ್ಟಡವನ್ನು ಪಾಕಿಸ್ತಾನ ಸಂಪೂರ್ಣ ನೆಲಸಮ ಮಾಡಿ ತೆರವು ಮಾಡಿದೆ ಎಂದು ತಿಳಿದುಬಂದಿದೆ.
ಹೌದು.. ಪಾಕಿಸ್ತಾನದ ಚಕ್ವಾಲ್ ಬಳಿಯ ತನ್ನ ಪ್ರಧಾನ ಮುರಿಯದ್ ವಾಯುನೆಲೆಯಲ್ಲಿ ಪ್ರಮುಖ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ದುರಸ್ತಿ ಮಾಡಲು ಮತ್ತು ಪುನಃಸ್ಥಾಪಿಸಲು ಪಾಕಿಸ್ತಾನ ವಾಯುಪಡೆಯ ಪ್ರಯತ್ನಗಳು ವಿಫಲವಾಗಿದ್ದು, ಹೀಗಾಗಿ ಬೇರೆ ದಾರಿಯಿಲ್ಲದೇ ಪಾಕಿಸ್ತಾನ ಸೇನೆ ಆ ಇಡೀ ಕಟ್ಟಡವನ್ನು ತೆರವು ಮಾಡಿದೆ ಎನ್ನಲಾಗಿದೆ.
ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ಹಾಲಿ ಲಭ್ಯವಿರುವ ಅದರೆ ಫೆಬ್ರವರಿ 28ರಂದು ಸೆರೆಹಿಡಿಯಲಾಗಿದ್ದ ಸ್ಯಾಟಲೈಟ್ ಚಿತ್ರಗಳಲ್ಲಿ ಮುರಿದ್ ವಾಯುನೆಲೆ ಕಟ್ಟಡವನ್ನು ಸಂಪೂರ್ಣವಾಗಿ ತೆರವು ಮಾಡಲಾಗಿದೆ ಎಂದು ವರದಿ ಮಾಡಿದೆ. ಭಾರತದ ಸೇನಾದಾಳಿ ಬಳಿಕ ಈ ಕಟ್ಟಡವನ್ನು ಟಾರ್ಪೌಲಿನ್ಗಳಿಂದ ಮುಚ್ಚಲಾಗಿತ್ತು.
ಬಳಿಕ ಅಲ್ಲಿ ದುರಸ್ತಿ ಕಾರ್ಯ ನಡೆದಿತ್ತು. ಆದರೆ 10 ತಿಂಗಳ ಬಳಿಕವೂ ದುರಸ್ತಿ ಕಾರ್ಯ ಯಶಸ್ವಿಯಾಗದ ಹಿನ್ನಲೆಯಲ್ಲಿ ಇಡೀ ಕಟ್ಟಡವನ್ನು ಪಾಕಿಸ್ತಾನ ಸೇನೆಯೇ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಉಪಗ್ರಹ ಚಿತ್ರಣ ವಿಶ್ಲೇಷಕ ಡೇಮಿಯನ್ ಸೈಮನ್ ಅವರು, "ಇತ್ತೀಚಿನ ಚಿತ್ರಣವು ರಚನೆಯನ್ನು ಸಂಪೂರ್ಣವಾಗಿ ಕೆಡವಲಾಗಿದೆ ಎಂದು ಈಗ ಖಚಿತಪಡಿಸುತ್ತದೆ" ಎಂದು ಹೇಳಿದ್ದಾರೆ.
ಹಾಲಿ ಚಿತ್ರಗಳನ್ನುಅವಲೋಕಿಸಿದರೆ ಭಾರತ ನಡೆಸಿದ್ದ ಕ್ಷಿಪಣಿದಾಳಿ ಕಟ್ಟಡದ ತೀರಾ ಆಳಕ್ಕೆ ಹೋಗಿ ಸಾಕಷ್ಟು ಹಾನಿ ಮಾಡಿದಂತೆ ತೋರುತ್ತಿದೆ. ಹೀಗಾಗಿ ಅಲ್ಲಿ ದುರಸ್ತಿಕಾರ್ಯ ಅಸಾಧ್ಯವಾಗಿರಬಹುದು.
ಸೌಲಭ್ಯವನ್ನು ಕೆಡವುವ ನಿರ್ಧಾರವು ವಾಯುದಾಳಿಯು ಕಟ್ಟಡದೊಳಗೆ ಗಮನಾರ್ಹ ರಚನಾತ್ಮಕ ವೈಫಲ್ಯವನ್ನು ಉಂಟುಮಾಡಿದೆ ಎಂದು ಬಲವಾಗಿ ಸೂಚಿಸುತ್ತದೆ. ಅಂತಿಮವಾಗಿ ಈ ಸ್ಥಳವು ಅಸುರಕ್ಷಿತ ಮತ್ತು ದುರಸ್ತಿಗೆ ಅನರ್ಹವಾಗಿದೆ" ಎಂದು ಅವರು ಹೇಳಿದರು.
ಅಂದಹಾಗೆ ಪಾಕಿಸ್ತಾನವು ಕದನ ವಿರಾಮ ಒಪ್ಪಂದಕ್ಕೆ ಬರುವ ಮೂಲಕ ಯುದ್ಧವನ್ನು ಕೊನೆಗೊಳಿಸಲು ಮುಂದಾದ ಕೆಲವು ಗಂಟೆಗಳ ಮೊದಲು, 2025 ರ ಮೇ 10 ರಂದು ಬೆಳಗಿನ ಜಾವ 2 ರಿಂದ ಬೆಳಗಿನ ಜಾವ 5 ರ ನಡುವೆ ಭಾರತೀಯ ವಾಯುಪಡೆಯು ದಾಳಿ ಮಾಡಿದ ಹತ್ತು ಪಾಕಿಸ್ತಾನಿ ವಾಯುನೆಲೆಗಳಲ್ಲಿ ಮುರಿದ್ ಸೇನಾನೆಲೆ ಕೂಡ ಒಂದಾಗಿದೆ.
ಇಲ್ಲಿ ಪಾಕಿಸ್ತಾನ ಮಾನವರಹಿತ ವೈಮಾನಿಕ ವಾಹನಗಳಿಗೆ (UAV ಗಳು) ಕಮಾಂಡ್-ಅಂಡ್-ಕಂಟ್ರೋಲ್ ನೋಡ್ ಆಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ನಂಬಲಾಗಿದೆ. ಭಾರತೀಯ ವಾಯುಪಡೆಯು ಅದೇ ನೆಲೆಯಲ್ಲಿ ಭೂಗತ ಸೌಲಭ್ಯ ಎಂದು ನಂಬಲಾದ ಸ್ಥಳದ ಮೇಲೆ ದಾಳಿ ಮಾಡಿತ್ತು.