ಅಬುದಾಬಿ: ಪದೇ ಪದೇ ಇರಾನ್ ದಾಳಿ ನಡುವೆ UAE ರಾಜಧಾನಿ ಅಬುಧಾಬಿಯ ರಸ್ತೆಯೊಂದರಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ ರಕ್ಷಣಾ ಸಚಿವಾಲಯವು ಇರಾನ್ನಿಂದ ನಿರಂತರ ವೈಮಾನಿಕ ಬೆದರಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಮುಂದುವರೆಸಿದೆ. ಹೀಗಾಗಿ ಕ್ಷಿಪಣಿ ಅವಶೇಷಗಳು ಬಿದ್ದು ಈ ದುರಂತ ಸಂಭವಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ಪ್ರಜೆಗಳ ಸಾವಿನ ಸಂಖ್ಯೆ ಈಗ ಏಳಕ್ಕೆ ಏರಿದೆ.
ಸ್ವೀಹಾನ್ ಸ್ಟ್ರೀಟ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳಿಂದ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಹೊಡೆದು ಉರುಳಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಅಬುಧಾಬಿ ಮಾಧ್ಯಮ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ. ಕ್ಷಿಪಣಿ ಅವಶೇಷಗಳು ಬಿದ್ದರಿಂದ ಭಾರತೀಯ ಮತ್ತು ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದಾರೆ. ಇತರ ಎಮಿರಾಟಿ, ಜೋರ್ಡಾನ್ ಮತ್ತು ಭಾರತೀಯ ಪ್ರಜೆಗಳು ಗಾಯಗೊಂಡಿದಿದ್ದಾರೆ ಎಂದು ಮಾಹಿತಿ ನೀಡಿದೆ.
ಈ ಘಟನೆಯಿಂದ ಹಲವು ವಾಹನಗಳಿಗೆ ಹಾನಿಯಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ಮಾಹಿತಿ ನೀಡಲಾಗುವುದು, ಜನರು ಯಾವುದೇ ರೀತಿಯ ಅನಧಿಕೃತ ಮೂಲಗಳ ಮಾಹಿತಿಯನ್ನು ನಂಬದಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಸಾವನ್ನಪ್ಪಿರುವವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಹಿಂದೆ ಹತ್ಯೆಯಾದವರಲ್ಲಿ ಮೂವರು ಸಶಸ್ತ್ರ ಪಡೆಗಳ ಸದಸ್ಯರಾಗಿದ್ದರೆ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಪ್ಯಾಲೆಸ್ತೀನ್ನ ಪ್ರಜೆಗಳು ಸೇರಿದಂತೆ ಆರು ನಾಗರಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇರಾನ್ ದಾಳಿಯಿಂದ ಯುಎಇ ವಾಯು ರಕ್ಷಣೆಯು 357 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 15 ಕ್ರೂಸ್ ಕ್ಷಿಪಣಿಗಳು ಮತ್ತು 1,815 ಮಾನವರಹಿತ ವೈಮಾನಿಕ ವಾಹನಗಳನ್ನು ತಡೆದಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿತ್ತು.
ಬುಧವಾರದವರೆಗೆ ಒಟ್ಟು 166 ಜನರು ಗಾಯಗೊಂಡಿದ್ದಾರೆ. ಯುಎಇ, ಭಾರತ, ಈಜಿಪ್ಟ್, ಸುಡಾನ್, ಇಥಿಯೋಪಿಯಾ, ಫಿಲಿಪೈನ್ಸ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇತರ ದೇಶಗಳ ನಾಗರಿಕರಲ್ಲಿ ಸಾವುನೋವುಗಳು ವರದಿಯಾಗಿವೆ. ಕೆಲವರು ತೀವ್ರತರದ ಗಾಯಗಳಿಂದ ಬಳಲುತ್ತಿದ್ದು, ದಾಳಿಯ ವ್ಯಾಪಕ ಪರಿಣಾಮವನ್ನು ಒತ್ತಿ ತೋರಿಸುತ್ತಿದೆ.
ಈ ಮಧ್ಯೆ ಯಾವುದೇ ಬೆದರಿಕೆಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ದೇಶದ ಸಾರ್ವಭೌಮತೆ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಯುಎಇ ಸಚಿವಾಲಯ ಪುನರುಚ್ಚರಿಸಿದೆ. ರಿಯಾದ್ನಲ್ಲಿ ಶಂಕಿತ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ 26 ವರ್ಷದ ಭಾರತೀಯನ ಕುಟುಂಬವು ಪರಿಹಾರ ಮತ್ತು ಸರ್ಕಾರದ ಸಹಾಯವನ್ನು ಕೋರಿದೆ. ಉತ್ತರ ಪ್ರದೇಶದ ಸಿತಾಪುರ ಜಿಲ್ಲೆಯ ರವಿ ಗೋಪಾಲ್ ಈ ವಾರದ ಆರಂಭದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದರು.