ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಚಮನ್ ಫಾಟಕ್ ಸಮೀಪ ಕ್ಯಾಂಟ್ ಕಡೆಗೆ ತೆರಳುತ್ತಿದ್ದ ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ವಾಹನದ ಮೂಲಕ ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟದ ತೀವ್ರತೆಗೆ ರೈಲು ಬೋಗಿಗಳು ಹಳಿ ತಪ್ಪಿದ್ದು, ಸ್ಥಳದಲ್ಲಿ ಭಾರೀ ಅಗ್ನಿ ಕಾಣಿಸಿಕೊಂಡಿದೆ. ಸ್ಫೋಟದ ಬಳಿಕ ಗುಂಡಿನ ಸದ್ದುಗಳೂ ಕೇಳಿಬಂದಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಆಂಬುಲೆನ್ಸ್ಗಳು ಮತ್ತು ಭದ್ರತಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಸಂಪೂರ್ಣ ಪ್ರದೇಶವನ್ನು ಭದ್ರತಾ ವಲಯವಾಗಿ ಘೋಷಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಗೆ ಸಂಬಂಧಿಸಿದಂತೆ ಬಿಡುಗಡೆಗೊಂಡ ಸ್ಥಳೀಯ ಪತ್ರಿಕಾ ಪ್ರಕಟಣೆಯಲ್ಲಿ, “ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಭದ್ರತಾ ಪಡೆಗಳಿಂದ ಭಾರೀ ನಷ್ಟ ಅನುಭವಿಸಿದ ನಂತರ ಬಿಎಲ್ಎ ಉಗ್ರರು ಈ ಕೃತ್ಯ ಎಸಗಿದ್ದಾರೆ” ಎಂದು ಹೇಳಲಾಗಿದೆ. ಆದರೆ, ದಾಳಿಯ ಹೊಣೆಗಾರಿಕೆಯನ್ನು ಅಧಿಕೃತವಾಗಿ ಯಾರೂ ಇನ್ನೂ ಹೊತ್ತುಕೊಂಡಿಲ್ಲ.
ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನದ ಕ್ವೆಟ್ಟಾ-ತಾಫ್ತಾನ್ ಹೆದ್ದಾರಿ (N-40) ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಅತ್ಯಂತ ಉದ್ವಿಗ್ನಗೊಂಡಿದೆ.
ಮಾಸ್ತುಂಗ್, ನುಶ್ಕಿ, ದಲ್ಬಂದಿನ್, ಖಾರನ್ ಮತ್ತು ವಾಶುಕ್ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ದಾಳಿಗಳು, ರಸ್ತೆ ತಡೆಗಳು ಹಾಗೂ ಹೆದ್ದಾರಿಗಳ ಮೇಲಿನ ತಾತ್ಕಾಲಿಕ ನಿಯಂತ್ರಣ ಘಟನೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
ಮೇ 15ರಂದು ನುಶ್ಕಿ ಸಮೀಪದ ಶೇಖ್ ವಾಸಿಲ್ ಪ್ರದೇಶದಲ್ಲಿನ ಪ್ರಮುಖ ಸೇತುವೆಯನ್ನು ಸ್ಫೋಟಿಸಿ ಧ್ವಂಸಗೊಳಿಸಲಾಗಿತ್ತು.
ಅದೇ ದಿನ ಖನಿಜ ಸಾಗಣೆ ವಾಹನಗಳು, ಕ್ರೋಮೈಟ್ ಲಾರಿಗಳು ಹಾಗೂ ಪಾಕಿಸ್ತಾನ ಸೇನಾ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.
ಮೇ 16ರಂದು ದಲ್ಬಂದಿನ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಗುಂಪುಗಳು ಕೆಲ ಹೊತ್ತು ಪೊಲೀಸ್ ಠಾಣೆ ಸೇರಿದಂತೆ ನಗರದ ಹಲವು ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದ್ದವು ಎಂದು ವರದಿಗಳು ತಿಳಿಸಿವೆ. ಈ ವೇಳೆ ಭಾರೀ ಗುಂಡಿನ ಚಕಮಕಿ, ರಸ್ತೆ ತಡೆ ಹಾಗೂ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳೂ ವರದಿಯಾಗಿದ್ದವು.
ಬಲೂಚ್ ಲಿಬರೇಶನ್ ಆರ್ಮಿ ಈ ಕಾರ್ಯಾಚರಣೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಎನ್-40 ಕ್ವೆಟ್ಟಾ-ತಫ್ತಾನ್ ಹೆದ್ದಾರಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಿದೆ ಎಂದು ಹೇಳಿಕೊಂಡಿದೆ.
ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ರೈಲು ಸ್ಫೋಟದ ಬಳಿಕ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ.