ಕಠ್ಮಂಡು: ನೇಪಾಳದಲ್ಲಿ ಮತ್ತೊಂದು ಪ್ರವಾಹದ ಆತಂಕ ಎದುರಾಗಿದ್ದು, ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹೌದು.. ನೇಪಾಳದ ಪರ್ವತ ಪ್ರದೇಶವಾದ ಗೋರ್ಖಾದಲ್ಲಿ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ಬುಧಿಗಂಡಕಿ ನದಿ ಜಲಾನಯನ ಪ್ರದೇಶದ ಜನರಿಗೆ ಅಧಿಕಾರಿಗಳು ಪ್ರವಾಹದ ಎಚ್ಚರಿಕೆ ನೀಡಿದ್ದಾರೆ. ಗೋರ್ಖಾ ಜಿಲ್ಲೆಯ ಪರ್ವತ ಪ್ರದೇಶದ ಚುಮಾನುಬ್ರಿ ಗ್ರಾಮೀಣ ಪುರಸಭೆಯ 4 ಮತ್ತು 2ನೇ ವಾರ್ಡ್ಗಳ ಮೂಲಕ ಹರಿಯುವ ಥೆರಾಂಗ್ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಭಾನುವಾರ ಬೆಳಗ್ಗೆ ಸಂಭವಿಸಿದ ಪ್ರವಾಹದ ರಭಸಕ್ಕೆ ನಾಲ್ಕು ಮನೆಗಳು ಹಾಗೂ ತೂಗು ಸೇತುವೆಯೊಂದು ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಚುಮಾನುಬ್ರಿ ಗ್ರಾಮೀಣ ಪುರಸಭೆಯ 4ನೇ ವಾರ್ಡ್ನಲ್ಲಿ ವಾಸಿಸುತ್ತಿದ್ದ ನಮ್ರುಂಗ್ಕುರ್ಬು ಓಂಗ್ಯಾಲ್ (ನೂರ್ಬು ತ್ಶಿರಿಂಗ್), ಉರ್ಗೆನ್ ಛಾಯೊಡೆನ್, ಲಕ್ಪಾ ಭುತಿ ಹಾಗೂ ದೋರ್ಜೆ ಗ್ಯಾಲ್ಜೆನ್ ಅವರ ಮನೆಗಳು ಪ್ರವಾಹಕ್ಕೆ ಕೊಚ್ಚಿಹೋಗಿವೆ.
ನದಿಯಲ್ಲಿ ನೀರಿನ ಮಟ್ಟ ದಿಢೀರ್ ಏರಿಕೆ
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಮುಖ್ಯಸ್ಥ ಹಾಗೂ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜ್ಕುಮಾರ್ ಶ್ರೇಷ್ಠ ಅವರು ತಿಳಿಸಿದ್ದಾರೆ. "ಪ್ರವಾಹದ ನೀರು ಏರುತ್ತಿರುವುದನ್ನು ಗಮನಿಸಿದ ನಿವಾಸಿಗಳು ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಈ ಪ್ರದೇಶದಲ್ಲಿದ್ದ ತೂಗು ಸೇತುವೆಯನ್ನೂ ನದಿ ಕೊಚ್ಚಿಕೊಂಡು ಹೋಗಿದೆ" ಎಂದು ಶ್ರೇಷ್ಠ ತಿಳಿಸಿದ್ದಾರೆ.
ಸೇತುವೆ ಕೊಚ್ಚಿಹೋಗಿರುವುದರಿಂದ ಮನಾಸ್ಲು ಪ್ರದೇಶದಲ್ಲಿ ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಪ್ರದೇಶದ ಕೆಳಭಾಗದ ಹಸಿರಿನ ಕಣಿವೆಗಳು ಹಾಗೂ ಭತ್ತದ ಗದ್ದೆಗಳಿಂದ ಆರಂಭವಾಗಿ, ಹಿಮದಿಂದ ಆವೃತವಾದ ಪರ್ವತ ದಾರಿಗಳು ಮತ್ತು ಹಿಮಚಿರತೆಗಳಿರುವ ಪ್ರದೇಶಗಳವರೆಗೆ ವ್ಯಾಪಿಸಿರುವ ಮನಾಸ್ಲು ಚಾರಣ ಮಾರ್ಗ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಟಿಬೆಟಿಯನ್ ಸಂಸ್ಕೃತಿ ಮತ್ತು ಮಠಗಳಿಂದ ಸಮೃದ್ಧವಾಗಿರುವ ಕಣಿವೆಗಳು, ಹಿಮನದಿಗಳು, ಬೇಸ್ ಕ್ಯಾಂಪ್ಗಳು ಹಾಗೂ ಗೊಂಪಾಗಳು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಾಗಿವೆ. 1990ರ ದಶಕದ ಆರಂಭದವರೆಗೂ ಈ ಚಾರಣ ಪ್ರದೇಶ ವಿದೇಶಿ ಪ್ರವಾಸಿಗರಿಗೆ ಮುಕ್ತವಾಗಿರಲಿಲ್ಲ. ಬಳಿಕ ಕಠಿಣ ಹಾಗೂ ಹೆಚ್ಚು ಅಭಿವೃದ್ಧಿಯಾಗದ ಚಾರಣ ಮಾರ್ಗವನ್ನು ಬಯಸುವ ಪ್ರವಾಸಿಗರಲ್ಲಿ ಇದು ಜನಪ್ರಿಯವಾಯಿತು.
ಸ್ಥಳೀಯರಲ್ಲಿ ಮತ್ತೆ ಆತಂಕ
ಚುಮಾನುಬ್ರಿ ಗ್ರಾಮೀಣ ಪುರಸಭೆಯ ಅಧ್ಯಕ್ಷ ನಿಮಾ ಲಾಮಾ, ಈ ಪ್ರದೇಶದಲ್ಲಿ ಪಾದಚಾರಿಗಳ ಸಂಚಾರವನ್ನು ಪುನಃ ಆರಂಭಿಸಲು ಸ್ಥಳೀಯ ಆಡಳಿತ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಪ್ರವಾಹದ ನೀರು ಕೆಸರು ಮತ್ತು ಅವಶೇಷಗಳನ್ನು ಹೊತ್ತು ತಂದಿದ್ದು, ನದಿಯ ಹೊರಹರಿವಿನ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿ ಸಂಭವಿಸಿದೆ ಎಂದು ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ನೇತ್ರ ಪ್ರಸಾದ್ ಶರ್ಮಾ ತಿಳಿಸಿದ್ದಾರೆ.
ಥೆರಾಂಗ್ ನದಿ ಅಂತಿಮವಾಗಿ ಬುಧಿ ಗಂಡಕಿ ನದಿಯನ್ನು ಸೇರುವುದರಿಂದ, ಬುಧಿ ಗಂಡಕಿ ನದಿ ತೀರದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.