ಸೌದಿ ಮೇಲೆ ಹೌತಿ ಬಂಡುಕೋರರ ದಾಳಿ 
ವಿದೇಶ

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಖಮೀಸ್‌ ಮುಶೈತ್‌ ಮತ್ತು ಅಬ್ಹಾ ಪ್ರದೇಶಗಳ ನಿವಾಸಿಗಳಿಗೆ ಸಿವಿಲ್‌ ಡಿಫೆನ್ಸ್‌ ಇಲಾಖೆ ಎಚ್ಚರಿಕೆ ನೀಡಿತ್ತು.

ರಿಯಾದ್‌: ಸೌದಿ ಅರೇಬಿಯಾ ಮೇಲೆ ಹೌತಿ ಉಗ್ರರ ದಾಳಿ ಮುಂದುವರೆದಿದ್ದು, ಸೌದಿ ಅರೇಬಿಯಾದ ದಕ್ಷಿಣ ಭಾಗದಲ್ಲಿ ಹೌತಿ ಬಂಡುಕೋರರು ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಿದ್ದಾರೆ.

ಸೌದಿ ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳ ಸದ್ದು ಕೇಳಿಬಂದಿದೆ.

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿರುವ ಖಮೀಸ್‌ ಮುಶೈತ್‌ ಮತ್ತು ಅಬ್ಹಾ ಪ್ರದೇಶಗಳ ನಿವಾಸಿಗಳಿಗೆ ಸಿವಿಲ್‌ ಡಿಫೆನ್ಸ್‌ ಇಲಾಖೆ ಎಚ್ಚರಿಕೆ ನೀಡಿತ್ತು. ಬಳಿಕ ಒಂದು ಗಂಟೆಯೊಳಗೆ ಆ ಎಚ್ಚರಿಕೆಯನ್ನು ಹಿಂಪಡೆಯಲಾಯಿತು ಎಂದು ಅಲ್‌ ಜಜೀರಾ ವರದಿ ಮಾಡಿದೆ.

ಯೆಮೆನ್‌ ಗಡಿಗೆ ಸಮೀಪದಲ್ಲಿರುವ ಈ ಎರಡು ನಗರಗಳಿಗೆ ಒಂದೇ ಗಂಟೆಯ ಅವಧಿಯಲ್ಲಿ ಎರಡನೇ ಬಾರಿಗೆ ಎಚ್ಚರಿಕೆ ನೀಡಲಾಗಿತ್ತು.

ಯೆಮೆನ್‌ನ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳು ಹಾಗೂ ಉತ್ತರ ಭಾಗದ ದೊಡ್ಡ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿರುವ ಹೌತಿಗಳು ಸೌದಿ ಅರೇಬಿಯಾದತ್ತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ

ಜುಲೈನಲ್ಲಿ ಸೌದಿ ಅರೇಬಿಯಾ ವಿರುದ್ಧ ನೌಕಾ ದಿಗ್ಬಂಧನ ಘೋಷಿಸಿದ ಬಳಿಕ ಹೌತಿಗಳು ಸೌದಿ ಅರೇಬಿಯಾದತ್ತ ದಾಳಿ ನಡೆಸುತ್ತಿವೆ ಎಂದು ಅಲ್‌ ಜಜೀರಾ ವರದಿ ಮಾಡಿದೆ. ಕೆಂಪು ಸಮುದ್ರದಲ್ಲಿ ಸಂಚರಿಸುವ ಸೌದಿ ಹಡಗುಗಳನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ಈ ನಡುವೆ, ಯೆಮೆನ್‌ನ ಪಶ್ಚಿಮ ಕರಾವಳಿಯ ಆಸ್ಪತ್ರೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ನಿರಂತರ ದಾಳಿಗಳು ಹಾಗೂ ವೈದ್ಯಕೀಯ ವ್ಯವಸ್ಥೆಯಲ್ಲಿನ ಅಡಚಣೆಗಳಿಂದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಒದಗಿಸುವುದು ಕಷ್ಟಕರವಾಗಿದೆ. ‘ಡಾಕ್ಟರ್ಸ್‌ ವಿತೌಟ್‌ ಬಾರ್ಡರ್ಸ್‌’ನ ಯೆಮೆನ್‌ ದೇಶದ ನಿರ್ದೇಶಕ ಲೂ ಕಾರ್ಮಾಕ್‌ ಮಾತನಾಡಿ, ಪಶ್ಚಿಮ ಕರಾವಳಿಯ ಆಸ್ಪತ್ರೆ ವ್ಯವಸ್ಥೆಯಲ್ಲಿ “ಭಾರೀ ಕೊರತೆಗಳಿವೆ” ಎಂದು ಹೇಳಿದ್ದಾರೆ.

ವಾರಾಂತ್ಯದಲ್ಲಿ ಹಲವು ಆಸ್ಪತ್ರೆಗಳನ್ನು ಸ್ಥಳಾಂತರಿಸಬೇಕಾಯಿತು. ಕೆಲಕಾಲ ಮೊಚಾ ಜನರಲ್‌ ಆಸ್ಪತ್ರೆಯಲ್ಲಿ ಅಗತ್ಯ ಸೇವೆಗಳನ್ನು ಮಾತ್ರ ಮುಂದುವರಿಸಲು ಸಾಧ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕೆಲವು ಆಸ್ಪತ್ರೆಗಳು ಮತ್ತೆ ಕಾರ್ಯಾರಂಭ ಮಾಡಿದ್ದರೂ, ವೈದ್ಯಕೀಯ ವ್ಯವಸ್ಥೆಯಲ್ಲಿ ಸಿಬ್ಬಂದಿ ಸೇರಿದಂತೆ ಹಲವು ಪ್ರಮುಖ ಕೊರತೆಗಳು ಮುಂದುವರಿದಿವೆ. ಆಸ್ಪತ್ರೆಗಳನ್ನು ನಡೆಸಲು ಅಗತ್ಯ ಸಿಬ್ಬಂದಿಯನ್ನು ಹುಡುಕುವುದೇ ಸವಾಲಾಗಿದೆ ಎಂದು ಕಾರ್ಮಾಕ್‌ ಹೇಳಿದ್ದಾರೆ.

“ಪಶ್ಚಿಮ ಕರಾವಳಿಯಲ್ಲಿ ದೊಡ್ಡ ಸಂಖ್ಯೆಯ ಜನರು ವಾಸಿಸುತ್ತಿದ್ದಾರೆ. ಇತರ ಎಲ್ಲ ಸಮುದಾಯಗಳಂತೆ ಅವರಿಗೂ ಪ್ರತಿದಿನ ಆರೋಗ್ಯ ಸೇವೆಯ ಅಗತ್ಯವಿದೆ. ತಾಯಂದಿರು ಮಕ್ಕಳಿಗೆ ಜನ್ಮ ನೀಡುತ್ತಲೇ ಇರುತ್ತಾರೆ, ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಲೇ ಇರುತ್ತಾರೆ. ಆದರೆ ಚಿಕಿತ್ಸೆ ಪಡೆಯಲು ಸ್ಥಳವಿಲ್ಲದಿದ್ದರೆ ಜನರು ಸಾವನ್ನಪ್ಪುವ ಸಾಧ್ಯತೆಯಿದೆ,” ಎಂದು ಅವರು ಎಚ್ಚರಿಸಿದ್ದಾರೆ.

ಶರೂರಾ ಸೇನಾ ನೆಲೆಯ ಮೇಲೂ ದಾಳಿ

ಇರಾನ್‌ ಬೆಂಬಲಿತ ಹೌತಿಗಳು ಬಾಬ್‌ ಎಲ್‌ ಮಂಡೆಬ್‌ ಜಲಸಂಧಿ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸೌದಿ ಅರೇಬಿಯಾದ ತೈಲ ರಫ್ತು ಸಾಗಣೆಗಾಗಿ ಹಡಗುಗಳು ಬಳಸುವ ಪರ್ಯಾಯ ಮಾರ್ಗವನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ ಎನ್ನಲಾಗಿದೆ.

ಭಾನುವಾರ ಸೌದಿ ಅರೇಬಿಯಾದ ಶರೂರಾ ಪ್ರದೇಶದಲ್ಲಿರುವ ಸೇನಾ ನೆಲೆಯ ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಹಾಗೂ ಕಮಾಂಡ್‌ ಮತ್ತು ಕಂಟ್ರೋಲ್‌ ಕೊಠಡಿಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿ ವಕ್ತಾರ ಯಾಹ್ಯಾ ಸರಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ಸೌದಿ ಗಡಿಯಲ್ಲಿನ ಹೌತಿ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಲ್‌ ಜಜೀರಾ ವರದಿ ಮಾಡಿದೆ.

ಹೌತಿಗಳ ವಿರುದ್ಧ ಅಮೆರಿಕದ ಕ್ರಮಕ್ಕೆ ಸೌದಿ ಮನವಿ?

ಸೌದಿ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಹೌತಿಗಳ ವಿರುದ್ಧ ಸೇನಾ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೇಳಿಕೊಂಡಿದ್ದಾರೆ ಎಂದು ಸಿಬಿಎಸ್‌ ನ್ಯೂಸ್‌ ವರದಿ ಮಾಡಿದೆ. ಆದರೆ, ಟ್ರಂಪ್‌ ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಶಾಂತಿಗೆ ಕರೆ ನೀಡಿದ ಬ್ರಿಕ್ಸ್‌

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಸೌದಿ ಅರೇಬಿಯಾ, ಇರಾನ್‌ ಹಾಗೂ ಯುಎಇ ಸೇರಿದಂತೆ ಬ್ರಿಕ್ಸ್‌ ರಾಷ್ಟ್ರಗಳು ಶಾಂತಿಗೆ ಕರೆ ನೀಡಿವೆ. ಶನಿವಾರ ನವದೆಹಲಿಯಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಘೋಷಣೆಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಬಗ್ಗೆ “ಆಳವಾದ ಕಳವಳ” ವ್ಯಕ್ತಪಡಿಸಲಾಯಿತು.

ಪರಿಸ್ಥಿತಿ ಮತ್ತಷ್ಟು ಹದಗೆಡಿಸುವ ಯಾವುದೇ ಕ್ರಮಗಳಿಂದ ದೂರವಿದ್ದು, ಗರಿಷ್ಠ ಸಂಯಮ ವಹಿಸುವಂತೆ ರಾಷ್ಟ್ರಗಳಿಗೆ ಕರೆ ನೀಡಲಾಗಿದೆ. ನಾಗರಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬ್ರಿಕ್ಸ್‌ ರಾಷ್ಟ್ರಗಳು ಒತ್ತಾಯಿಸಿವೆ.

ಅಲ್ಲದೆ, ದೀರ್ಘಕಾಲೀನ ಶಾಂತಿ, ಭದ್ರತೆ ಮತ್ತು ಸ್ಥಿರತೆಗೆ ದಾರಿ ಮಾಡಿಕೊಡುವಂತೆ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಯತ್ನಗಳಿಗೆ ಒತ್ತು ನೀಡಬೇಕು ಎಂದು ಕರೆ ನೀಡಲಾಗಿದೆ. ಜಾಗತಿಕ ವ್ಯಾಪಾರ, ಪೂರೈಕೆ ಸರಪಳಿ ಹಾಗೂ ಇಂಧನ ಸಾಗಣೆ ಸುಗಮವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನೂ ರಾಷ್ಟ್ರಗಳು ಒತ್ತಿ ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2028 ರ ಚುನಾವಣೆ ಮೇಲೆ ಕಣ್ಣು: 10,000 'ಭಾರತ ಜೋಡೋ' ಯುವ ಸಂಘಗಳತ್ತ ಕಾಂಗ್ರೆಸ್ ಚಿತ್ತ! ಸಿಎಂ ಡಿಕೆಶಿ ಮೆಗಾ ಪ್ಲಾನ್!

ಗಣೇಶನ ವಾಹನವಾಗಿ ಮೂಷಿಕನ ಆಯ್ಕೆ ಏಕೆ? ಇದರ ಹಿಂದಿದೆ ಪುರಾಣದ ಕುತೂಹಲಕಾರಿ ಕಥೆ

'ಟ್ರೋಫಿ ಕಳ್ಳ'; Asia Cup Trophy ಫೈನಲ್ ಪಂದ್ಯ ಬಳಿಕ ಅಭಿಮಾನಿಗಳಿಂದ ಘೋಷಣೆ, ತಿರುಗಿಯೂ ನೋಡದೇ ಓಟಕಿತ್ತ Mohsin Naqvi, ಮತ್ತೆ ಮುಖಭಂಗ!

Mohsin Naqviಗೆ ಮೊದಲೇ ಎಚ್ಚರಿಕೆ ನೀಡಿದ್ದ ಬಿಸಿಸಿಐ! Asia Cup Trophy ವಿವಾದದ ತೆರೆಮರೆಯ ಕಹಾನಿ ಬಟಾ ಬಯಲು

Cricket: ಮಹಿಳಾ Asia Cup ಗೆದ್ದ ಭಾರತಕ್ಕೆ ಪ್ರಧಾನಿ ಮೋದಿ ಅಭಿನಂದನೆ: ‘ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣ’