ಅತಿದೊಡ್ಡ ವೈದ್ಯಕೀಯ ಆಕ್ಸಿಜನ್ ಉತ್ಪಾದಕ ಕಂಪೆನಿ ಎಂಬ ಹೆಗ್ಗಳಿಕೆ ರಿಲಯನ್ಸ್ ಪಾತ್ರ!

ಜಗತ್ತು ಹಿಂದೆಂದೂ ಕಾಣದ ಕೋವಿಡ್-19 ಸಂಕಷ್ಟವನ್ನು ಭಾರತ ಅನುಭವಿಸುತ್ತಿದೆ. ಕೋವಿಡ್ ಎರಡನೆಯ ಅಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ
Updated on

ಮುಂಬೈ: ಜಗತ್ತು ಹಿಂದೆಂದೂ ಕಾಣದ ಕೋವಿಡ್-19 ಸಂಕಷ್ಟವನ್ನು ಭಾರತ ಅನುಭವಿಸುತ್ತಿದೆ. ಕೋವಿಡ್ ಎರಡನೆಯ ಅಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ದೇಶದೆಲ್ಲೆಡೆ ತೀವ್ರ ಅನಾರೋಗ್ಯಕ್ಕೆ ಒಳಗಾದ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಲಭ್ಯತೆಯ ಖಾತರಿಯು ಈ ಸಂಕಷ್ಟದ ಸಮಯದ ತುರ್ತು ಅಗತ್ಯವಾಗಿದೆ. ರಿಲಯನ್ಸ್ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್  ಸಾಂಪ್ರದಾಯಿಕ ಉತ್ಪಾದಕ ಕಂಪೆನಿಯಲ್ಲ. ಆದರೂ ಸಾಂಕ್ರಾಮಿಕ ಪೂರ್ವದ ಶೂನ್ಯ ಉತ್ಪಾದನೆಯಿಂದ, ಪ್ರಸ್ತುತ ಒಂದೇ ಸ್ಥಳದಲ್ಲಿ ಜೀವರಕ್ಷಕವನ್ನು ಉತ್ಪಾದಿಸುವ ಭಾರತದ ಅತಿ ದೊಡ್ಡ ಉತ್ಪಾದಕನಾಗಿ ರಿಲಯನ್ಸ್ ಇಂಡಸ್ಟ್ರೀಸ್ ಬೆಳೆದಿದೆ.

ಜಾಮ್ನಗರ ಮತ್ತು ಇತರೆ ಸ್ಥಳಗಳಲ್ಲಿನ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಗಳಲ್ಲಿ ರಿಲಯನ್ಸ್ ಪ್ರಸ್ತುತ 1000 ಎಂಟಿಯಷ್ಟು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಗಳನ್ನು ಪ್ರತಿದಿನ ಉತ್ಪಾದಿಸುತ್ತಿದೆ. ಇದು ಭಾರತದ ಒಟ್ಟಾರೆ ಉತ್ಪಾದನೆಯ ಶೇ 11ರಷ್ಟು ಪಾಲು ಹೊಂದಿದೆ. ಈ ಮೂಲಕ ದೇಶದ ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರ ಆಕ್ಸಿಜನ್ ಅಗತ್ಯವನ್ನು ಪೂರೈಸುತ್ತಿದೆ.

'ಭಾರತವು ಕೋವಿಡ್-19 ಸಾಂಕ್ರಾಮಿಕದ ಹೊಸ ಅಲೆಯ ವಿರುದ್ಧ ಹೋರಾಡುತ್ತಿರುವಾಗ ನನಗೆ ಹಾಗೂ ರಿಲಯನ್ಸ್ನ ಸಮಸ್ತರಿಗೂ, ಪ್ರತಿ ಜೀವವನ್ನು ಉಳಿಸುವುದಕ್ಕಿಂತ ಮುಖ್ಯವಾಗಿರುವುದು ಬೇರೇನೂ ಇಲ್ಲ. ಭಾರತದ ವೈದ್ಯಕೀಯ ಶ್ರೇಣಿಯ ಆಕ್ಸಿಜನ್ ಗಳ ಉತ್ಪಾದನೆ ಮತ್ತು ಸಾಗಾಣಿಕೆ ಸಾಮರ್ಥ್ಯವನ್ನು ಹೆಚ್ಚಿಸುವುದು ತಕ್ಷಣದ ಅಗತ್ಯವಾಗಿದೆ. ಜಾಮ್ನಗರದಲ್ಲಿರುವ ನಮ್ಮ ಎಂಜಿನಿಯರ್ಗಳು ಈ ಹೊಸ ಸವಾಲನ್ನು ಎದುರಿಸುವ ಸಲುವಾಗಿ, ದೇಶಾಭಿಮಾನದ ಪ್ರಜ್ಞೆಯೊಂದಿಗೆ ದಣಿವಿಲ್ಲದೆ ಕೆಲಸ ಮಾಡುತ್ತಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಭಾರತಕ್ಕೆ ಹೆಚ್ಚಿನ ಅಗತ್ಯಬಿದ್ದ ಸಂದರ್ಭದಲ್ಲಿ ರಿಲಯನ್ಸ್ ಕುಟುಂಬದ ಯುವ ಸದಸ್ಯರು ಮತ್ತೆ ಸಕ್ರಿಯವಾಗಿ ಅದನ್ನು ಪೂರೈಸುವ ಬದ್ಧತೆ ಮತ್ತು ಸಂಕಲ್ಪದ ಪ್ರಜ್ಞೆ ಪ್ರದರ್ಶಿಸುವುದನ್ನು ಕಂಡು ನಾನು ನಿಜಕ್ಕೂ ವಿನೀತನಾಗಿದ್ದೇನೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

'ನಮ್ಮ ದೇಶವು ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸಹಾಯ ಮಾಡಲು ನಮ್ಮ ರಿಲಯನ್ಸ್ ಫೌಂಡೇಷನ್ ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದೆ. ಪ್ರತಿ ಜೀವವೂ ಅಮೂಲ್ಯ. ಜಾಮ್ನಗರದಲ್ಲಿರುವ ನಮ್ಮ ಸಂಸ್ಕರಣಾ ಘಟಕವನ್ನು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆಗಾಗಿ ರಾತ್ರೋರಾತ್ರಿ ಪರಿವರ್ತಿಸಲಾಗಿದೆ. ಅದನ್ನು ಈಗ ಭಾರತದಾದ್ಯಂತ ಪೂರೈಕೆ ಮಾಡಲಾಗುತ್ತಿದೆ. ದೇಶದ ಪುರುಷರು ಮತ್ತು ಮಹಿಳೆಯರ ಒಳಿತಿಗಾಗಿ ನಾವು ಪ್ರಾರ್ಥಿಸುತ್ತೇವೆ. ನಾವು ಜತೆಗೂಡಿ ಈ ಕ್ಲಿಷ್ಟಕರ ಸನ್ನಿವೇಶವನ್ನು ನಿಯಂತ್ರಿಸಬಹುದು' ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ-ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದ್ದಾರೆ.

ರಿಲಯನ್ಸ್ ಸಂಸ್ಥೆಯು ದೇಶದ ವಿವಿಧ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುತ್ತಿದ್ದು, ಇದು ಪ್ರತಿ ದಿನವೂ 1 ಲಕ್ಷಕ್ಕೂ ಅಧಿಕ ರೋಗಿಗಳಿಗೆ ನೆಮ್ಮದಿ ನೀಡುತ್ತಿದೆ. 2020ರ ಮಾರ್ಚ್ನಲ್ಲಿ ಪಿಡುಗು ಆರಂಭವಾದಾಗಿನಿಂದ ದೇಶದಾದ್ಯಂತ 55,000 ಎಂಟಿಗಿಂತಲೂ ಅಧಿಕ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಅನ್ನು ರಿಲಯನ್ಸ್ ಪೂರೈಕೆ ಮಾಡಿದೆ.

ಮತ್ತೊಂದು ಹೊಸ ಆವಿಷ್ಕಾರದಲ್ಲಿ ರಿಲಯನ್ಸ್, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ (ಪಿಇಎಸ್ಒ) ಅನುಮೋದಿತ ವಿನೂತನ ಹಾಗೂ ಸುರಕ್ಷಿತ ಪ್ರಕ್ರಿಯೆಗೆ ಅನುಗುಣವಾಗಿ ತನ್ನ ನೈಟ್ರೋಜನ್ ಟ್ಯಾಂಕರ್ಗಳನ್ನು ವೈದ್ಯಕೀಯ ಶ್ರೇಣಿಯ ಆಕ್ಸಿಜನ್ಗಳನ್ನು ಸರಬರಾಜು ಮಾಡುವ ಆಕ್ಸಿಜನ್ ಟ್ರಕ್ಗಳನ್ನಾಗಿ ಪರಿವರ್ತಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com