ಮುಂಬೈ: ಬಾಲಿವುಡ್ ನ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ತಮ್ಮದೇ ಚಿತ್ರರಂಗದ ವಿರುದ್ಧ ಗರಂ ಆಗಿದ್ದಾರೆ...ಕಾರಣ ದಿವಂಗತ ನಟ ಓಂಪುರಿ...
ಅಚ್ಚರಿಯಾಗಬೇಡಿ..ಇದು ನಿಜ..ನಟ ಓಂಪುರಿ ವಿಚಾರವಾಗಿ ಬಾಲಿವುಡ್ ನಡೆದುಕೊಂಡ ರೀತಿಯನ್ನು ನವಾಜುದ್ದೀನ್ ಸಿದ್ಧಿಕಿ ಕಟುವಾಗಿ ಟೀಕಿಸಿದ್ದಾರೆ. ಇತ್ತೀಚೆಗೆ ಅಮೆರಿಕದ ಲಾಸ್ ಎಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದ 89ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ನಟ ಓಂಪುರಿ ಅವರ ಸಾಧನೆಯನ್ನು ಸ್ಮರಿಸಿ ಶ್ಲಾಘಿಸಲಾಗಿತ್ತು. ಅಲ್ಲದೆ ಅವರ ನಿಧನಕ್ಕೆ ಸಂತಾಪ ಕೂಡ ಸೂಚಿಸಲಾಗಿತ್ತು. ಗ್ರ್ಯಾಮಿ ಮತ್ತು ಟೋನಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಖ್ಯಾತ ಗೀತರಚನೆಕಾರ ಸಾರಾ ಬರೀಲ್ಲೆ ಅವರು ಕಳೆದ ಜನವರಿಯಲ್ಲಿ ನಿಧವರಾಗಿದ್ದ ಓಂಪುರಿ ಅವರಿಗೆ ತಮ್ಮ ವಿಶಿಷ್ಠ ಸಂಗೀತದ ಮೂಲಕ ಸಂತಾಪ ಸೂಚಿಸಿದ್ದರು. ವಿವಿಧ ದೇಶಗಳ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದ ಆಸ್ಕರ್ ಪ್ರಶಸ್ತಿ ಪ್ರದಾನ ವೇಳೆ ಓಂಪುರಿಯನ್ನು ಸ್ಮರಿಸಲಾಗಿತ್ತು.
ಆದರೆ ನಮ್ಮ ಬಾಲಿವುಡ್ ಮಂದಿಗೆ ಮಾತ್ರ ಓಂಪುರಿ ಮರೆತು ಹೋಗಿದ್ದಾರೆ. ಇತ್ತೀಚೆಗೆ ನಡೆದ ಬಾಲಿವುಡ್ ಪ್ರಶಸ್ತಿ ಪ್ರದಾನ ವೇಳೆ ಬಾಲಿವುಡ್ ಯಾವೊಬ್ಬ ನಟನೂ ಕೂಡ ಓಂಪುರಿ ಅವರನ್ನು ಸ್ಮರಸಲೇ ಇಲ್ಲ. ಕನಿಷ್ಟ ಪಕ್ಷ ದಶಕಗಳ ಕಾಲ ಸಿನಿಮಾರಂಗಕ್ಕೆ ಅಪಾರ ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ ಓಂಪುರಿ ಅವರಿಗೆ ಸಂತಾಪ ಸೂಚಿಸುವ ಕಾರ್ಯ ಕೂಡ ಆಗಲಿಲ್ಲ. ಇದು ನಟ ನವಾಜುದ್ದೀನ್ ಸಿದ್ಧಿಕಿ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ವೇಳೆ ಯಾವೊಬ್ಬ ನಟನೂ ಓಂಪುರಿ ಅವರ ಬಗ್ಗೆ ಒಂದೇ ಒಂದು ಪದ ಕೂಡ ಆಡಲಿಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ನವಾಜುದ್ದೀನ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement