ಚೆನ್ನೈ: ತಮಿಳುನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಸಂಪನ್ನ ನಾಗರಿಕರನ್ನೇ ಅಲುಗಾಡಿಸಿದ್ದು ಇನ್ನು ಬಡವರ ಪಾಡೇನು ಎಂಬುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೇ ಧ್ವನಿಸಿರುವ 'ಜಿಗರ್ಥಂಡಾ' ಸಿನೆಮಾ ಖ್ಯಾತಿಯ ತಮಿಳು ನಟ ಸಿದ್ಧಾರ್ಥ್ "ನನ್ನಂತಹ ಸಂಪನ್ನ ನಟನ ಮನೆಯಲ್ಲೇ ಹೀಗೆ ನೀರು ತುಂಬಿ ತುಳುಕುತ್ತಿದೆ. ಶೌಚಾಲಯಗಳು ಅರ್ಧ ಮುಳುಗಿವೆ. ಇನ್ನು ಉಳಿದ ತಮಿಳುನಾಡನ್ನು ಊಹಿಸಿಕೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ.
"ಬಾಂಬೆಯಲ್ಲಿ ಪ್ರವಾಹ ಬಂದಾಗ ಹಲಾವರು ಜನ ಮುರಿದ ಕಾರುಗಳಲ್ಲಿ ಕುಳಿತು ಮೃತಪಟ್ಟರು. ದಯವಿಟ್ಟು ಕಾರುಗಳಲ್ಲಿ ರಕ್ಷಣೆ ಪಡೆಯಬೇಡಿ" ಎಂದು ಕೂಡ ಮನವಿ ಮಾಡಿಕೊಂಡಿದ್ದಾರೆ.
ನಾಳೆ ಮನೆಯಿಂದ ಹೊರಬಿದ್ದು ಜನರನ್ನು ಮುಳುಗಿದ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಕರೆತರಲು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಕೂಡ ಸಿದ್ಧಾರ್ಥ್ ತಿಳಿಸಿದ್ದಾರೆ. ಪ್ರವಾಹದಲ್ಲಿ ಸಿಳುಕಿರುವವರು ತಮ್ಮನ್ನು ಮತ್ತು ಆರ್ ಜೆ ಬಾಲಾಜಿಯವರನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.
ಭಾರಿ ಮಳೆ ತಮಿಳುನಾಡಿನಾದ್ಯಂತ ಮಂಗಳವಾರವೂ ಮುಂದುವರೆದಿದ್ದು ಪ್ರವಾಹದ ಭೀತಿಯನ್ನು ಸೃಷ್ಟಿಸಿದೆ.
Advertisement