ರಂಗಿತರಂಗ ಸಿನಿಮಾ ನೋಡುವಾಗ ಹೃದಯಾಘಾತ!

ರಂಗಿತರಂಗ ಸಿನಿಮಾ ವೀಕ್ಷಣೆ ವೇಳೆ ಚಿತ್ರ ಮಂದಿರದಲ್ಲಿ ಹೃದಯಾಘಾತವಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೃತಪಟ್ಟಿದ್ದಾರೆ.
ಹೃದಯಾಘಾತ(ಸಾಂಕೇತಿಕ ಚಿತ್ರ)
ಹೃದಯಾಘಾತ(ಸಾಂಕೇತಿಕ ಚಿತ್ರ)

ಬೆಂಗಳೂರು: ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿರುವ ರಂಗಿತರಂಗ ಸಿನಿಮಾ ವೀಕ್ಷಣೆ ವೇಳೆ ಚಿತ್ರ ಮಂದಿರದಲ್ಲಿ ಹೃದಯಾಘಾತವಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೃತಪಟ್ಟಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ದಾವಣಗೆರೆ ಮೂಲದ ಸುಜಿತ್ ಹುಲಿಮನೆ ಮೃತರು. ಬನಶಂಕರಿ 3 ನೇ ಹಂತದಲ್ಲಿರುವ ಕಾಮಾಕ್ಯ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ ಜೆಪಿ ನಗರದಲ್ಲಿ ಪತ್ನಿ ಮೇಘನಾ ಜತೆ ವಾಸವಿದ್ದ ಸುಜಿತ್, ಪತ್ನಿ ಜತೆ ಕಾಮಾಕ್ಯ ಚಿತ್ರಮಂದಿರಕ್ಕೆ ರಂಗಿತರಂಗ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ನೋಡುತ್ತಿದ್ದಾಗಲೇ ಅವರು ಕುಳಿತ ಸ್ಥಿತಿಯಲ್ಲಿ ಯಾವುದೇ ಚಲನೆ ಇಲ್ಲದಿರುವುದನ್ನು ಗಮನಿಸಿದ ಪತ್ನಿ ಎಚ್ಚರಿಸಲು ಯತ್ನಿಸಿದ್ದಾರೆ. ಆದರೆ ಸುಜಿತ್ ರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಗಾಬರಿಗೊಂಡ ಅವರು ಚಿತ್ರಮಂದಿರದಲ್ಲಿದ್ದ ಇತರೆ ಪ್ರೇಕ್ಷಕರ ನೆರವಿನೊಂದಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ  ಸುಜಿತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನಿಸಿದ್ದು ತೀವ್ರ ಹೃದಯಾಘಾತದಿಂದ ಸುಜಿತ್ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com