"ರಣಧೀರ" ಮನೋರಂಜನ್ ಗೆ ಪಾದಾರ್ಪಣೆ ಚಿತ್ರವಲ್ಲ..?
ಭಾರಿ ನಿರೀಕ್ಷೆ ಹುಟ್ಟಿಸಿರುವ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಪಾದಾರ್ಪಣೆ ಚಿತ್ರವೆಂದೇ ಪರಿಗಣಿಸ್ಪಟ್ಟಿದ್ದ "ರಣಧೀರ-ಪ್ರೇಮಲೋಕದಲ್ಲಿ" ಚಿತ್ರ ಮನೋರಂಜನ್ ಪಾಲಿಗೆ ಮೊದಲ ಚಿತ್ರವಲ್ಲ ಎಂದು ಹೇಳಲಾಗುತ್ತಿದೆ.
ಗಾಂಧಿನಗರದ ಮೂಲಗಳ ಪ್ರಕಾರ ರಣಧೀರ ಚಿತ್ರಕ್ಕೂ ಮೊದಲು ಮನೋರಂಜನ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕುವ ಸಾಧ್ಯತೆ ಇದ್ದು, ಈಗಾಗಲೇ ಈ ಬಗ್ಗೆ ಚಿತ್ರದ ನಿರ್ಮಾಪಕರೊಂದಿಗೆ ಮಾತುಕತೆ ಕೂಡ ನಡೆದಿದೆ ಎಂದು ತಿಳಿದುಬಂದಿದೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಗಳಂತೆ ಮನೋರಂಜನ್ ಅವರ ಮೊದಲ ಚಿತ್ರಕ್ಕೆ ಖ್ಯಾತ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರು ಬಂಡವಾಳ ಹೂಡಲಿದ್ದಾರೆ. ಈಗಾಗಲೇ ರವಿಚಂದ್ರನ್ ಮತ್ತು ಮನೋರಂಜನ್ ಅವರೊಂದಿಗೆ ನಿರ್ಮಾಪಕರು ಚರ್ಚಿಸಿದ್ದು, ಶೀಘ್ರದಲ್ಲಿಯೇ ಚಿತ್ರವನ್ನು ಕೈಗೆತ್ತಿಕೊಳ್ಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ನಿರ್ಮಾಪಕರಾಗಲಿ ಅಥವಾ ರವಿಚಂದ್ರನ್ ಅವರಾಗಲಿ ಯಾವುದೇ ರೀತಿಯ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಪ್ರಸ್ತುತ ರವಿಚಂದ್ರನ್ ಅವರು ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಷೋ ಮತ್ತು ಕೆಲ ಚಿತ್ರಗಳ ಚಿತ್ರೀಕರಣದಲ್ಲಿ ಬಿಸಿಯಾಗಿದ್ದು, ಇದಲ್ಲದೆ ಅವರದ್ದೇ ನಿರ್ಮಾಣದ ಅಪೂರ್ವ ಚಿತ್ರದ ತಯಾರಿಯ ಹೊಣೆ ಕೂಡ ರವಿಚಂದ್ರನ್ ಅವರ ಮೇಲಿದೆ. ಇದೇ ನವೆಂಬರ್ ಅಂತ್ಯದೊಳಗೆ ಅಪೂರ್ವ ಚಿತ್ರವನ್ನು ತೆರೆಗೆ ತರುವ ಕುರಿತು ರವಿಚಂದ್ರನ್ ಚಿಂತಿಸುತ್ತಿದ್ದಾರೆ. ಹೀಗಾಗಿ ಕಳೆದ ವರ್ಷ ಭರ್ಜರಿಯಾಗಿ ಘೋಷಣೆಯಾದ ರಣಧೀರ ಚಿತ್ರಕ್ಕಾಗಿ ಅವರಿಂದ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ರವಿಚಂದ್ರನ್ ಮತ್ತು ಮನೋರಂಜನ್ ಪರಸ್ಪರ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ರಣಧೀರ-ಪ್ರೇಮಲೋಕದಲ್ಲಿ ರವಿಚಂದ್ರನ್ ಅವರ ಮಹತ್ವಾಕಾಂಕ್ಷಿ ಚಿತ್ರವಾಗಿದ್ದು, ಚಿತ್ರವನ್ನು ಅವರ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಆದರೆ ಸಮಯದ ಅಭಾವದಿಂದಾಗಿ ಚಿತ್ರ ಮುಂದಕ್ಕೆ ಹೋಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಚಿತ್ರರಂಗಕ್ಕೆ ಮನೋರಂಜನ್ ಅವರು ಪಾದಾರ್ಪಣೆ ಮಾಡಲಿದ್ದಾರೆ. ಅದರೆ ಆ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ