ನಟ ಸುದೀಪ್ ದಾಪಂತ್ಯದಲ್ಲಿ ಬಿರುಕು, ವಿಚ್ಛೇದನಕ್ಕೆ ಮುಂದಾದ ದಂಪತಿ

ಸ್ಯಾಂಡಲ್‌ ವುಡ್‌ನ ಖ್ಯಾತ ನಟ ಹಾಗೂ ಬಹುಭಷಾ ನಟ ಕಿಚ್ಚ ಸುದೀಪ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಮ್ಮ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ನೀಡಲು...
ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ರಾಧಾಕೃಷ್ಣನ್ (ಸಂಗ್ರಹ ಚಿತ್ರ)
ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ರಾಧಾಕೃಷ್ಣನ್ (ಸಂಗ್ರಹ ಚಿತ್ರ)

ಬೆಂಗಳೂರು: ಸ್ಯಾಂಡಲ್‌ ವುಡ್‌ನ ಖ್ಯಾತ ನಟ ಹಾಗೂ ಬಹುಭಷಾ ನಟ ಕಿಚ್ಚ ಸುದೀಪ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಮ್ಮ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೂಲಕ ಸುದೀಪ್ ಮತ್ತು ಪ್ರಿಯಾರಾಧಾಕೃಷ್ಣನ್ ಅವರ 14 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಪರಸ್ಪರ ಒಪ್ಪಿಗೆಯ ಮೇಲೆ ಅಂತ್ಯವಾಗುತ್ತಿದೆ. ಮೂಲಗಳ ಪ್ರಕಾರ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣನ್ ಅವರು ಪರಸ್ಪರ ಸಮ್ಮತಿಯ ಮೇರೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಸುದೀಪ್‌ ಅವರು 2001ರಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರಿಯಾ ರಾಧಾಕೃಷ್ಣನ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಮೂಲತಃ ಕೇರಳ ನಾಯರ್ ಕುಟುಂಬ ಮೂಲದವರಾದ ಪ್ರಿಯಾ ರಾಧಾಕೃಷ್ಣನ್ ಅವರನ್ನು ನಟ ಸುದೀಪ್ ಅವರು 2001ರಲ್ಲಿ ಮದುವೆಯಾಗಿದ್ದರು. ಸುದೀಪ್ ಮತ್ತು ಪ್ರಿಯಾ ದಂಪತಿಗೆ 11 ವರ್ಷ ವಯಸ್ಸಿನ ಓರ್ವ ಪುತ್ರಿಯಿದ್ದು, ಆಕೆಯನ್ನು ಪ್ರಿಯಾ ಅವರ ಸುಪರ್ದಿಗೆ ಒಪ್ಪಿಸಲು ನಟ ಸುದೀಪ್‌ ಅವರು ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ಜೀವನಾಂಶವಾಗಿ ಪ್ರಿಯಾ ಅವರಿಗೆ 19 ಕೋಟಿ ರೂಪಾಯಿಗಳನ್ನೂ ಸಹ ಸುದೀಪ್‌ ಅವರು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ 2013ರಲ್ಲಿ ನಟ ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾ ಅವರಿಗೆ "ಸ್ಟೇಜ್ 360" ಎಂಬ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಟ್ಟಿದ್ದರು.

ವಾದ ಮಂಡಿಸಲು ಸಹೋದರಿಗೆ ಜಿಪಿ ನೀಡಿದ ಕಿಚ್ಚ
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಸುದೀಪ್‌ ಅವರ ಪತ್ನಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಪ್ರಿಯಾ ಅವರೊಂದಿಗೆ ಸುದೀಪ್‌ ಪರವಾಗಿ ಅವರ ಸಹೋದರಿಯೂ ಅಲ್ಲಿ ಹಾಜರಿದ್ದರು ಎಂದು ತಿಳಿದುಬಂದಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿ ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಕಿಚ್ಚ ಸುದೀಪ್‌ ಅವರು ತಮ್ಮ ಸಹೋದರಿಗೆ ಜನರಲ್‌ ಪವರ್‌ ಆಫ್ ಅಟಾರ್ನಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಸುದೀಪ್‌ ಅವರು ಕಳೆದ ಕೆಲವು ವರ್ಷಗಳಿಂದ ನಮ್ಮ ನಡುವೆ ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಪರಸ್ಪರ ಸಮ್ಮತಿಯ ಮೂಲಕ ಈ ವಿಚ್ಚೇದನ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಇದು ತಮ್ಮ ತೀರಾ ವೈಯಕ್ತಿಕ ವಿಚಾರವಾಗಿರುವ ಕಾರಣ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com