ಬೆಂಗಳೂರು: ನಟ ವಿಜಯ್, ಸುದೀಪ್ ಮತ್ತು ನಟಿ ಶ್ರೀದೇವಿ ಅಭಿನಯದ ಬಹುಕೋಟಿ ವೆಚ್ಚದ ಚಿತ್ರ ಪುಲಿ ವಿತರಣೆಯಿಂದ ತಮಗೆ 4.5 ಕೋಟಿ ರು.ನಷ್ಟವಾಗಿದೆ ಎಂದು ನಿರ್ದೇಶಕ, ನಟ ಮತ್ತು ಪುಲಿ ಚಿತ್ರದ ಕರ್ನಾಟಕದ ವಿತರಕ ಎಸ್ ನಾರಾಯಣ್ ಅವರು ಆರೋಪಿಸಿದ್ದಾರೆ.
ಸುಮಾರು ನೂರು ಕೋಟಿ ವೆಚ್ಚದ ದುಬಾರಿ ಚಿತ್ರ ಪುಲಿ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಹೀಗಾಗಿ ಪುಲಿ ಚಿತ್ರ ನೆಲಕಚ್ಚಿತು. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರದ ವಿತರಕರಿಗೆ ಪುಲಿ ನಿರ್ಮಾಪಕರು ನಷ್ಟ ತುಂಬಿಕೊಟ್ಟಿದ್ದಾರೆ. ತಮ್ಮ ನಷ್ಟವನ್ನು ಮಾತ್ರ ಈ ವರೆಗೂ ಭರಿಸಿಲ್ಲ ಎಂದು ನಾರಾಯಣ್ ಆರೋಪಿಸಿದ್ದಾರೆ. ಪುಲಿ ಚಿತ್ರವನ್ನು ನಿರ್ಮಾಪಕರಾದ ಶಿಬು ಥಮಿನ್ಸ್ ಮತ್ತು ಪಿಟಿ ಸೆಲ್ವಕುಮಾರ್ ಅವರು ನಿರ್ಮಾಣ ಮಾಡಿದ್ದು, ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಎಸ್ ನಾರಾಯಣ್ ಅವರು 7.5 ಕೋಟಿ ರು. ನೀಡಿ ಖರೀದಿಸಿದ್ದರು.
ಆದರೆ ವಿತರಣೆಯಲ್ಲಿ ನಾರಾಯಣ್ ಅವರಿಗೆ ಭಾರಿ ನಷ್ಟವಾಗಿದ್ದು, ನಷ್ಟಪರಿಹಾರವನ್ನು ಪುಲಿ ಚಿತ್ರದ ನಿರ್ಮಾಪಕರು ಭರಿಸಿಲ್ಲ. ಹೀಗಾಗಿ ಫಿಲ್ಮ ಚೇಂಬರ್ ಗೆ ನಾಲ್ಕು ತಿಂಗಳ ಹಿಂದೆಯೇ ದೂರು ನೀಡಿದ್ದೇನೆ. ಪ್ರಕರಣ ಈಗಾಗಲೇ ದಕ್ಷಿಣ ಭಾರತದ ಫಿಲ್ಮಂ ಛೇಂಬರ್ ತಲುಪಿದೆ. ಆದರೂ ಚಿತ್ರ ನಿರ್ಮಾಪಕರು ಸೌಜನ್ಯಕ್ಕಾದರೂ ಯಾವುದೇ ಪೋನ್ ಕರೆ ಮಾಡಿಲ್ಲ ಎಂದು ಎಸ್.ನಾರಾಯಣ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮಗೆ ನ್ಯಾಯ ಸಿಗದಿದ್ದರೆ ವಾಣಿಜ್ಯ ಮಂಡಳಿ ಎದುರು ಎದುರು ಧರಣಿ ಮಾಡುವುದಾಗಿ ಎಸ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.
Advertisement