ಮುಂಬೈ: ಭಾರೀ ಸಂಚಲ ಮೂಡಿಸಿದ್ದ ಕಿರುತೆರೆ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಪ್ರತ್ಯುಷಾ ಪೋಷಕರು ಶನಿವಾರ ಆಗ್ರಹಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರಿದ್ದು, ಪ್ರಮುಖ ಸಾಕ್ಷ್ಯಾಧಾರಗಳನ್ನೇ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರತ್ಯುಷಾ ಪೋಷಕರು ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆಂದು ಪರ ವಕೀಲರಾದ ನೀರಜ್ ಗುಪ್ತಾ ಅವರು ಹೇಳಿದ್ದಾರೆ.
ಪ್ರತ್ಯುಷಾ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆಯನ್ನು ನಡೆಸಿಲ್ಲ. ಸಾಕಷ್ಟು ಪ್ರಮುಖ ವಿಚಾರಗಳ ಬಗ್ಗೆ ತನಿಖಾಧಿಕಾರಿಗಳು ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ಪ್ರಸ್ತುತ ನಮ್ಮ ಬಳಿ ಸಂಪೂರ್ಣ ಚಾರ್ಜ್ ಶೀಟ್ ಇಲ್ಲ. ಜಾರ್ಜ್ ಶೀಟ್ ಬಂದ ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ತನಿಖಾಧಿಕಾರಿಗಳು ಯಾವ ಸಾಕ್ಷ್ಯಾಧಾರವನ್ನು ನಿರ್ಲಕ್ಷಿಸಿದ್ದಾರೆಂಬ ಪ್ರಶ್ನೆಗೆ ಉತ್ತರಿಸುವ ನೀರಜ್ ಗುಪ್ತಾ ಅವರು, ಆತ್ಮಹತ್ಯೆಗೂ ಮುನ್ನ ಪ್ರತ್ಯೂಷ ತನ್ನ ಗೆಳೆಯ ರಾಹುಲ್ ಜೊತೆಗೆ ಫೋನಿನಲ್ಲಿ ಮಾತನಾಡಿದ್ದಳು. ಸಂಭಾಷಣೆ ವೇಳೆ ಮೂರನೇ ವ್ಯಕ್ತಿಯ ಬಗ್ಗೆ ಮಾತನಾಡಿದ್ದಳು. ವ್ಯಕ್ತಿಯೊಬ್ಬ ತನಗೆ ಜೀವ ಬೆದರಿಕೆ ಹಾಕುತ್ತಿದ್ದಾನೆಂದು ಹೇಳಿದ್ದರು. ಆ ಮೂರನೇ ವ್ಯಕ್ತಿ ಯಾರು? ಆತ ಪ್ರತ್ಯುಷಾಳಿಗೆ ಯಾವ ಕಾರಣಕ್ಕೆ ಜೀವ ಬೆದರಿಕೆಯನ್ನು ನೀಡಿದ್ದ? ಪೊಲೀಸರೇಕೆ ಈ ಅಂಶವನ್ನು ನಿರ್ಲಕ್ಷಿಸುತ್ತಾರೆಂದು ಪ್ರಶ್ನಿಸಿದ್ದಾರೆ.
Advertisement