ಬೆಂಗಳೂರು: ವಿಚ್ಛೇಧನಕ್ಕೆ ಮುಂದಾಗಿದ್ದ ದಕ್ಷಿಣ ಭಾರತದ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಪ್ರಿಯಾ ದಂಪತಿ ಮತ್ತೆ ಒಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗಾಂಧಿನಗರದಲ್ಲಿ ಇಂತಹುದೊಂದು ಮಾತು ಕೇಳಿಬರುತ್ತಿದ್ದು, ಕಾರಣಾಂತರಗಳಿಂದ ಪತ್ನಿ ಪ್ರಿಯರೊಂದಿಗಿನ ಸಂಬಂಧ ಕಡಿದುಕೊಂಡು ವಿಚ್ಛೇಧನಕ್ಕೆ ಮುಂದಾಗಿದ್ದ ನಟ ಕಿಚ್ಚ ಸುದೀಪ್ ಇದೀಗ ಮತ್ತೆ ಒಂದಾಗಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ಕನ್ನಡದ ಹಲವು ಸಿನಿಮಾ ಪತ್ರಿಕೆಗಳು ವರದಿ ಮಾಡಿದ್ದು, ಸುದೀಪ್ ಮತ್ತು ಪ್ರಿಯಾ ಜೋಡಿ ಪರಸ್ಪರ ಮಾತುಕತೆ ಮೂಲಕ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದು, ಮತ್ತೆ ಒಂದಾಗುವ ಮುನ್ಸೂಚನೆ ನೀಡಿದ್ದಾರಂತೆ.
ಪ್ರಮುಖವಾಗಿ ತಮ್ಮ ಅಚ್ಚುಮೆಚ್ಚಿನ ಪುತ್ರಿ ಸಾನ್ವಿಗಾಗಿ ಸುದೀಪ್ ಮತ್ತು ಪ್ರಿಯಾ ಜೋಡಿ ಒಂದಾಗುತ್ತಿದ್ದು, ಕೂಡಿ ಬಾಳುವ ನಿರ್ಧಾರಕ್ಕೆ ಬಂದಿದ್ದಾರಂತೆ. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ವಿಚ್ಧೇದನ ಅರ್ಜಿಯ ನ್ಯಾಯಾಲಯದ ವಿಚಾರಣೆಗೆ ಇಬ್ಬರೂ ಗೈರಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟ ಸುದೀಪ್ ಆಗಲಿ ಅಥವಾ ಪ್ರಿಯಾ ಅವರಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಖ್ಯಾತ ನಟ ರವಿಚಂದ್ರನ್ ನಟ ಸುದೀಪ್ ಹಾಗೂ ಪ್ರಿಯಾ ಅವರ ನಡುವೆ ಸಂಧಾನ ನಡೆಸಿ ಇಬ್ಬರನ್ನೂ ಒಂದಾಗಿಸಿದ್ದರು ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು. ಈ ಸುದ್ದಿ ಪ್ರಸಾರವಾದ ಕೆಲವೇ ದಿನಗಳಲ್ಲಿ ಅಂದರೆ 2016ರ ಮೇ ತಿಂಗಳಲ್ಲಿ ನಡೆದ ಜಿಗರ್ ತಂಡ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು.
Advertisement