ಹೈದರಾಬಾದ್: ಇತ್ತೀಚೆಗಷ್ಟೇ ಆರಂಭವಾದ ತೆಲುಗು ಬಿಗ್ ಬಾಸ್ ಶೋಗೆ ಆರಂಭಿಕ ಆಘಾತ ಎದುರಾಗಿದ್ದು, ಕೆಟ್ಟ ಕಾರಣದಿಂದಾಗಿ ಸ್ಪರ್ಧಿಯೊಬ್ಬರು ಶೋದಿಂದ ಹೊರ ನಡೆದಿದ್ದಾರೆ.
ಖ್ಯಾತ ನಟ ಜೂನಿಯರ್ಎನ್ಟಿಆರ್ನಿರೂಪಣೆಯ ತೆಲುಗು ಬಿಗ್ಬಾಸ್ನಿಂದ ನಟಿ ಮುಮೈತ್ ಖಾನ್ ಹೊರಬಿದಿದ್ದಾರೆ. ಈ ಮೂಲಕ ತೆಲಗು ಬಿಗ್ಬಾಸ್ನಿಂದ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಸಿಸಿದ್ದಾರೆ. ಆದರೆ ಮುಮೈತ್ ಬಿಗ್ಬಾಸ್ನಿಂದ ಹೊರಬಂದಿದ್ದು ಮಾತ್ರ ಕೆಟ್ಟ ಕಾರಣದಿಂದ ಎಂಬುದು ವಿಶೇಷ. ಈ ಹಿಂದೆ ತೆಲುಗು ಚಿತ್ರರಂಗದಲ್ಲಿ ಮಾರ್ಧನಿಸಿದ್ದ ಡ್ರಗ್ಸ್ ಸೇವನೆ ಪ್ರಕರಣ ಇದೀಗ ಬಿಗ್ ಬಾಸ್ ಶೋ ಮೇಲೂ ತನ್ನ ಕರಿ ನೆರಳು ಬೀರಿದೆ. ಹೀಗಾಗಿ ಪ್ರಕರಣದಲ್ಲಿ ನಟಿ ಮುಮೈತ್ ಖಾನ್ ಅವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಮುಮೈತ್ ಖಾನ್ ಅವರ ವಿಚಾರಣೆಗೆ ಮುಂದಾಗಿದ್ದಾರೆ.
ಮಾದಕ ವಸ್ತು ಜಾಲದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮುಮೈತ್ ಖಾನ್ ಗೆ ಎನ್ಡಿಪಿಎಸ್ ಕಾಯಿದೆ ಸೆಕ್ಷನ್ 67ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ. ಹಾಗಾಗಿ ಮುಮೈತ್ ಖಾನ್ ಪುಣೆಯ ಲೋನಾವಲದ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು, ಹೈದರಾಬಾದ್ ಗೆ ತೆರಳಲಿದ್ದಾರೆ. ಹೈದರಾಬಾದ್ ನಲ್ಲಿ ಮುಮೈತ್ ವಿಶೇಷ ತನಿಖಾ ತಂಡದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಮುಮೈತ್ ಗೆ ಸಮನ್ಸ್ ನೀಡುವ ಸಲುವಾಗಿ ಎಸ್ಐಟಿ ತಂಡ ಬಿಗ್ಬಾಸ್ ಆಯೋಜಕರನ್ನು ಸಂಪರ್ಕಿಸಿದ್ದರು.
ಬಿಗ್ಬಾಸ್ ಮನೆಯಲ್ಲಿ ಸಮನ್ಸ್ ಪಡೆದ ಮುಮೈತ್ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಮುಮೈತ್ ಈಗ ಬಿಗ್ಬಾಸ್ನಿಂದ ಹೊರ ಬಂದಿರಬಹುದು. ಮುಂದಿನ ದಿನಗಳಲ್ಲಿ ಅವರು ವಾಪಸ್ಸಾಗುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಇದೇ ಪ್ರಕರಣ ಸಂಬಂಧ ಈಗಾಗಲೇ ನಿರ್ದೇಶಕ ಪುರಿ ಜಗನ್ನಾಥ್, ಕ್ಯಾಮೆರಾಮನ್ ಶ್ಯಾಮ್ ಕೆ. ನಾಯ್ಡು, ನಟ ಸುಬ್ಬರಾಜು, ನಟ ತರುಣ್ ಸೇರಿದಂತೆ ಹಲವು ನಟರು ತನಿಖೆಯಲ್ಲಿ ಪಾಲ್ಗೊಂಡಿದ್ದಾರೆ.
Advertisement