ದುನಗಿರಿಯಲ್ಲಿ ರಜನಿ ನಿರ್ಮಾಣ ಮಾಡುತ್ತಿರುವ ಆಶ್ರಮ
ಸಿನಿಮಾ ಸುದ್ದಿ
ಹಿಮಾಲಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಆಧ್ಯಾತ್ಮಿಕ ಆಶ್ರಮ ನಿರ್ಮಾಣ!
ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಿಮಾಲಯದಲ್ಲಿ ಆಧ್ಯಾತ್ಮಿಕ ಆಶ್ರಮ ನಿರ್ಮಾಣ ಮಾಡುತ್ತಿದ್ದು, ಸುಮಾರು 1 ಕೋಟಿ ರು. ವೆಚ್ಚದಲ್ಲಿ ಈ ಆಶ್ರಮ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹಿಮಾಲಯದಲ್ಲಿ ಆಧ್ಯಾತ್ಮಿಕ ಆಶ್ರಮ ನಿರ್ಮಾಣ ಮಾಡುತ್ತಿದ್ದು, ಸುಮಾರು 1 ಕೋಟಿ ರು. ವೆಚ್ಚದಲ್ಲಿ ಈ ಆಶ್ರಮ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಆಂಗ್ಲ ದೈನಿಕವೊಂದು ವರದಿ ಮಾಡಿದ್ದು, ಅಧ್ಯಾತ್ಮಿಕ ಜೀವಿಯೂ ಆಗಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಕೆಲವು ಸ್ನೇಹಿತರೊಡನೆ ಸೇರಿ ಹಿಮಾಲಯದ ದುನಗಿರಿಯಲ್ಲಿ ಆಶ್ರಮವನ್ನು ನಿರ್ಮಿಸುತ್ತಿದ್ದಾರಂತೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಶ್ರಮದಲ್ಲಿ, ಧ್ಯಾನ, ಯೋಗಗಳನ್ನು ಅರಸಿ ಬರುವ ಸಾಧಕರು ಎಷ್ಟು ದಿನ ಬೇಕೋ ಅಷ್ಟು ದಿನ ಉಚಿತವಾಗಿ ಅಲ್ಲಿ ನೆಲೆಯೂರಲು ಅವಕಾಶ ನೀಡಲಾಗುತ್ತದೆಯಂತೆ.
ರಜನೀಕಾಂತ್ ಅವರ ಅಧ್ಯಾತ್ಮಿಕ ಗುರುವಾದ ಪರಮಹಂಸ ಯೋಗಾನಂದ ಸ್ಥಾಪಿಸಿದ್ದ ಯೊಗೋದಾ ಸತ್ಸಂಗ ಸೊಸೈಟಿಗೆ (ವೈಎಸ್ಎಸ್) ಈ ವರ್ಷ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಇದರ ನೆನಪಿಗಾಗಿ ಹಿಮಾಲಯದಲ್ಲಿ ಆಶ್ರಮ ನಿರ್ಮಾಣಕ್ಕೆ ಕೈ ಹಾಕಲಾಗಿದೆ ಎಂದು ಹೇಳಲಾಗಿದೆ. ವರದಿಯಲ್ಲಿರುವಂತೆ ಈ ಆಶ್ರಮ ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಜನಿಕಾಂತ್ ಅವರ ಆಪ್ತರೂ ಕೂಡ ಆಗಿರುವ ವಿ. ವಿಶ್ವನಾಥನ್ ಅವರು, ರಜನೀಕಾಂತ್ ಗೂ ಹಿಮಾಲಯಕ್ಕೂ ಇರುವ ನಂಟು ಸುಮಾರು 10- 15 ವರ್ಷಗಳ ಹಿಂದಿನದ್ದು. ಹಿಮಾಚಲ ಪ್ರದೇಶದ ದುನಗಿರಿಯಲ್ಲಿರುವ ಗುಹೆಗಳಲ್ಲಿ ಅವರು ಆಗಾಗ್ಗೆ ಹೋಗಿ ಧ್ಯಾನದಲ್ಲಿ ಮುಳುಗುತ್ತಾರೆ. ಇದೇ ಪ್ರಾಂತ್ಯದಲ್ಲೇ ಪರಮಹಂಸ ಯೋಗಾನಂದರ ಗುಗ್ಗುರು ಮಹಾವತಾರ್ ಬಾಬಾಜೀ ಅವರು ಸೂಕ್ಷ್ಮರೂಪದಲ್ಲಿ ನೆಲೆಸಿದ್ದಾರೆಂದು ಹೇಳಲಾಗುತ್ತಿದೆ. ಅವರೊಮ್ಮೆ ರಜನಿಯವರಿಗೆ ದರ್ಶನ ನೀಡಿದ್ದರೆಂದೂ ಹೇಳಲಾಗುತ್ತಿದೆ. ಇಂಥ ತಪೋಭೂಮಿಯಲ್ಲಿ ಒಂದು ಶಾಶ್ವತ ಸೇವೆ ಮಾಡಬೇಕೆಂಬ ಆಸೆ ರಜನಿಕಾಂತ್ ಅವರಲ್ಲಿತ್ತು. ಇದೇ ಕಾರಣಕ್ಕೆ ಸ್ನೇಹಿತರೊಂದಿಗೆ ಸೇರಿ ಈ ಆಶ್ರಮ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ