'ಸ್ವಾತಿ ಮುತ್ತಿನ ಮಳೆ ಹನಿಯೇ' ಯಶಸ್ಸಿನ ಅಲೆಯಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ; ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಶುಭಾಶಯ!

2003ರಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಮ್ಯಾ ಅವರು, ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಬಹುತೇಕ ಹಿಟ್ ಸಿನಿಮಾಗಳನ್ನು ನೀಡಿ ದಶಕಗಳ ಕಾಲ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆದವರು. ನಟಿ ರಮ್ಯಾಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. 
ನಟಿ ರಮ್ಯಾ
ನಟಿ ರಮ್ಯಾ

ಬೆಂಗಳೂರು: 2003ರಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಮ್ಯಾ ಅವರು, ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. ಬಹುತೇಕ ಹಿಟ್ ಸಿನಿಮಾಗಳನ್ನು ನೀಡಿ ದಶಕಗಳ ಕಾಲ ಸ್ಯಾಂಡಲ್‌ವುಡ್ ಕ್ವೀನ್ ಆಗಿ ಮೆರೆದವರು. ನಟಿ ರಮ್ಯಾಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ. ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ರಮ್ಯಾಗೆ, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ರಮ್ಯಾ ಅವರು ಇತ್ತೀಚೆಗೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಚಿತ್ರರಂಗದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮೋಹಕತಾರೆ ನಟನೆಯಿಂದ ವರ್ಷಾನುಗಟ್ಟಲೆ ದೂರ ಉಳಿದಿದ್ದರು. ತಮ್ಮ ನೆಚ್ಚಿನ ನಟಿ ಯಾವಾಗ ಸಿನಿಮಾ ರಂಗಕ್ಕೆ ರೀಎಂಟ್ರಿ ನೀಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆ ವೇಳೆಯಲ್ಲೇ ನಟಿ ರಮ್ಯಾ ಆ್ಯಪಲ್ ಬಾಕ್ಸ್ ಸ್ಟುಡಿಯೋ ಮೂಲಕ ನಿರ್ಮಾಪಕಿಯಾಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು.

ಅಷ್ಟೇ ಅಲ್ಲದೆ, ಬೆಳ್ಳೆ ಪರದೆಯಲ್ಲಿ ತಮ್ಮನ್ನು ನೋಡಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ತಾವು ಡಾಲಿ ಧನಂಜಯ್ ಅಭಿನಯದ ಉತ್ತರಕಾಂಡ ಸಿನಿಮಾದಲ್ಲಿ ನಟಿಸುವು ವಿಚಾರವನ್ನು ಹಂಚಿಕೊಂಡರು. ಸದ್ಯ ಆ ಚಿತ್ರದಲ್ಲಿ ರಮ್ಯಾ ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದರೂ, ಇಂದು ಅವರ ಜನ್ಮದಿನದಂದು ಹೆಚ್ಚಿ ಅಪ್‌ಡೇಟ್ಸ್ ನೀಡುತ್ತಾರಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟಿ ರಮ್ಯಾ, ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ಅಭಿನಯದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಿನಿ ಪ್ರೇಮಿಗಳು ಮತ್ತು ವಿಮರ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಲಭ್ಯವಾಗಿದ್ದು, ರಮ್ಯಾ ಅವರು ಸದ್ಯ ಆ ಗುಂಗಿನಲ್ಲಿದ್ದಾರೆ. ಮೊದಲಿಗೆ ರಮ್ಯಾ ಅವರೇ ಚಿತ್ರದ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ರಮ್ಯಾ ಅವರ ಜಾಗಕ್ಕೆ ಸಿರಿ ರವಿಕುಮಾರ್ ಅವರ ಆಯ್ತೆಯಾಗಿತ್ತು.

ಸದ್ಯ ‘ಉತ್ತರಕಾಂಡ’ ಚಿತ್ರದ ಮೂಲಕ ರಮ್ಯಾ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದು, ಚಿತ್ರವು ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ರಮ್ಯಾ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷನ್‌ನ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಸದ್ಯ ಈ ಸಿನಿಮಾವನ್ನು ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದು, ಕೆಆರ್​ಜಿ ಸ್ಟುಡಿಯೋಸ್​ ಮೂಲಕ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com