'ಕಪ್ಪು ಬಿಳುಪಿನ ನಡುವೆ' ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟ ವಸಂತ ವಿಷ್ಣು

ವಸಂತ್ ವಿಷ್ಣು ಅವರು ನಟನೆಯಿಂದ ನಿರ್ದೇಶನದತ್ತ ಹೊರಳಿದ್ದು, 'ಕಪ್ಪು ಬಿಳುಪಿನ ನಡುವೆ' ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಪ್ಪು ಬಿಳುಪಿನ ನಡುವೆ ಚಿತ್ರದ ಸ್ಟಿಲ್
ಕಪ್ಪು ಬಿಳುಪಿನ ನಡುವೆ ಚಿತ್ರದ ಸ್ಟಿಲ್

ತಮಿಳು ನಟ ವಿಜಯ್ ಸೇತುಪತಿ ನಟನೆಯ ಅಖಾಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ವಸಂತ್ ವಿಷ್ಣು ಅವರು ನಂತರ ತಾಂಡವ ಮತ್ತು ಪವಿತ್ರ ಎಂಬ ತುಳು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇದೀಗ ವಸಂತ್ ವಿಷ್ಣು ಅವರು ನಟನೆಯಿಂದ ನಿರ್ದೇಶನದತ್ತ ಹೊರಳಿದ್ದು, 'ಕಪ್ಪು ಬಿಳುಪಿನ ನಡುವೆ' ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರವನ್ನು ಹಾರರ್ ಥ್ರಿಲ್ಲರ್ ಎಂದು ಹೇಳಲಾಗಿದೆ.

ನಿರ್ದೇಶಕರ ಪ್ರಕಾರ, 'ಸಿನಿಮಾ ಕತ್ತಲೆ ಮತ್ತು ಬೆಳಕಿನ ನಡುವೆ, ಮಾನವ ಮತ್ತು ಅತಿಮಾನುಷ ಶಕ್ತಿಗಳ ನಡುವೆ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವಿವಿಧ ಆಯಾಮಗಳನ್ನು ತೆರೆದಿಡುತ್ತದೆ. ಕಪ್ಪು ಮತ್ತು ಬಿಳಿಯು ಎಲ್ಲಾ ಬಣ್ಣಗಳನ್ನು ಒಳಗೊಳ್ಳುತ್ತದೆ ಮತ್ತು ಪ್ರತಿಯೊಬ್ಬರ ಜೀವನಕ್ಕೆ ಸಂಬಂಧಿಸಿದೆ. ಆದರೂ, ದೃಷ್ಟಿಕೋನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ಎಲ್ಲ ಅಂಶಗಳೊಂದಿಗೆ ಈ ಚಿತ್ರ ಕನೆಕ್ಟ್ ಆಗಲಿದೆ' ಎಂದು ವಿವರಿಸುತ್ತಾರೆ.

ಈ ಕಥೆಯು ದೇವಗಿರಿ ಎಂಬ ಹಳ್ಳಿಯೊಂದರಲ್ಲಿ ನಡೆಯುವ ನೈಜ ಘಟನೆಗಳನ್ನು ಆಧರಿಸಿದೆ. ಈ ಹಳ್ಳಿಯನ್ನು ಹೊರಜಗತ್ತಿಗೆ ಸಂಪರ್ಕಿಸುವ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಹಲವಾರು ಅಶುಭ ಘಟನೆಗಳು ಸಂಭವಿಸುತ್ತವೆ. ಈ ಹಳ್ಳಿಯಲ್ಲಿ ಮೂಲಸೌಕರ್ಯಗಳ ಕೊರತೆಯ ಮೇಲೆಯೂ ಚಿತ್ರ ಬೆಳಕು ಚೆಲ್ಲುತ್ತದೆ. ಮೂಢನಂಬಿಕೆಯು ಆಳವಾಗಿ ಬೇರೂರಿರುವ ಗ್ರಾಮಸ್ಥರು ಈ ಸಮಸ್ಯೆಯನ್ನು ಬಗೆಹರಿಸಲು ಹಿಂದೇಟು ಹಾಕುತ್ತಿರುತ್ತಾರೆ. ಇಂತಹ ಸಮಯದಲ್ಲಿ 'ಯೂಟ್ಯೂಬರ್‌ಗಳು ಈ ಹಳ್ಳಿ ಮತ್ತು ಅದರ ರಸ್ತೆಗಳಲ್ಲಿನ ರಹಸ್ಯಗಳನ್ನು ಹೇಗೆ ಬಯಲಿಗೆಳೆಯುತ್ತಾರೆ ಎಂಬುದನ್ನು ಕಪ್ಪು ಬಿಳುಪಿನ ನಡುವೆ ಚಿತ್ರದಲ್ಲಿ ಹೇಳಲಾಗಿದೆ' ಎಂದು ನಿರ್ದೇಶಕರು ಹೇಳುತ್ತಾರೆ.

ಕಪ್ಪು ಬಿಳುಪಿನ ನಡುವೆ ಚಿತ್ರದ ಸ್ಟಿಲ್
'ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ, ಹೌದು ನಾನು ಬ್ಯಾಡ್ ಬಾಯ್, ನಂಗೆ ನನ್ನ ಕೆಲಸ ಮುಖ್ಯ': ನಟ ದರ್ಶನ್

ಚಿತ್ರವು ಫೆಬ್ರುವರಿ 23 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಬಿಡುಗಡೆಗೂ ಮೊದಲು ವಿಷ್ಣು ಅವರು ನಟ ವಿಜಯ್ ಸೇತುಪತಿ ಅವರನ್ನು ಭೇಟಿಯಾಗಿದ್ದು, ಅವರೂ ವೈಯಕ್ತಿಕವಾಗಿ ಶುಭ ಹಾರೈಸಿದ್ದಾರೆ.

ವಸಂತ್ ವಿಷ್ಣು ನಿರ್ದೇಶನದ ಹೊರತಾಗಿ ಕಪ್ಪು ಬಿಳುಪಿನ ನಡುವೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ವಿದ್ಯಾಶ್ರೀ ಗೌಡ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಬಿರಾದಾರ್, ಕಾಮಿಡಿ ಟೈಮ್ ಹರೀಶ್ ಮತ್ತು ನವೀನ್ ರಘುನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗೋಲ್ಡನ್ ಶೈನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಧರ್ಮೇಂದ್ರ ಡಿಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಎಕೆ ರಿಶಾಲ್ ಸಾಯಿ ಅವರ ಸಂಗೀತ ಮತ್ತು ಪ್ರವೀಣ್ ಶೆಟ್ಟಿ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com