ಬಿಡುಗಡೆಗೂ ಮುನ್ನವೇ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಿರುವ ಕೆಂಡ ಚಿತ್ರ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಛಾಯಾಗ್ರಾಹಕರಾಗಿದ್ದ ಸಹದೇವ್ ಕೆಲವಡಿ ಇದೀಗ ನಿರ್ದೇಶಕನಾಗಿ ಬಡ್ತಿ ಪಡೆದಿದ್ದು, ಕೆಂಡ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಕೆಲವಡಿ ಅವರಿಗೆ ಪ್ರಶಸ್ತಿ ಲಭಿಸಿದೆ. ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಪ್ರವೇಶ ಪಡೆದಿದ್ದ ಕೆಂಡ ಸಿನಿಮಾ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ‘ಬೆಸ್ಟ್ ಡೆಬ್ಯು ಡೈರೆಕ್ಟರ್ ಜ್ಯೂರಿ ಅವಾರ್ಡ್’ ಬಂದಿದೆ.
ಕಠಿಣ ಪೈಪೋಟಿಯ ಹೊರತಾಗಿಯೂ, ಚಿತ್ರೋತ್ಸವದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಂಡ ಸಿನಿಮಾ ವಿಜಯಶಾಲಿಯಾಗಿದೆ. ವಿವಿಧ ಭಾಷೆಗಳ ಚಿತ್ರಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ಸಹದೇವ್ ಕೆಲವಡಿ ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಜ್ಯೂರಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇಂತಹ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದಿರುವುದು ಮಹತ್ವದ ಸಾಧನೆ ಎಂದು ನಿರ್ದೇಶಕರು ಹೇಳುತ್ತಾರೆ.
ಕೆಂಡ ಸಿನಿಮಾವನ್ನು ಅಮೆಯುಕ್ತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರೂಪ ರಾವ್ (ಗಂಟುಮೂಟೆ ಚಿತ್ರದ ಬರಹಗಾರ್ತಿ, ನಿರ್ದೇಶಕಿ ಮತ್ತು ನಿರ್ಮಾಪಕಿ) ಅವರು ನಿರ್ಮಾಣ ಮಾಡಿದ್ದಾರೆ.
ಕೆಂಡ ಚಿತ್ರ ಜೂನ್ನಲ್ಲಿ ಬಿಡುಗಡೆಯಾಗಲಿದ್ದು, ಋತ್ವಿಕ್ ಕಾಯ್ಕಿಣಿ ಅವರ ಸಂಗೀತ, ಪ್ರದೀಪ್ ನಾಯಕ್ ಅವರ ಛಾಯಾಗ್ರಹಣ ಮತ್ತು ಲಕ್ಷ್ಮೀಕಾಂತ್ ಜೋಶಿ ಅವರ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಬಿವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ್, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿತ್, ಶರತ್ ಗೌಡ, ಸತೀಶ್ ಕುಮಾರ್, ಅರ್ಚನಾ ಶ್ಯಾಮ್, ಪೃಥ್ವಿ ಬನವಾಸಿ ಮತ್ತು ದೀಪ್ತಿ ನಾಗೇಂದ್ರ ಪ್ರಮುಖ ಪಾತ್ರಗಳಲ್ಲಿದ್ದಾರೆ.
Advertisement