Pushpa-2 ವಿವಾದ: KGF ಅಥವಾ ನಟ ಯಶ್ ಗೆ ಅಪಮಾನ ಮಾಡಿಲ್ಲ; ಚಿತ್ರ ವಿತರಕ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ

'ತೆಲುಗಿನ ಪುಷ್ಪ–2' ಚಿತ್ರದ ವಿತರಕನಾಗಿ ಅದರ ಯಶಸ್ಸು ಬಯಸಿದ್ದೇನೆಯೇ ಹೊರತು, ನಟ ಯಶ್‌ ಅವರನ್ನಾಗಿಲಿ, ಅವರ ಕೆಜಿಎಫ್‌ ಸರಣಿಯ ಚಿತ್ರಗಳನ್ನಾಗಲಿ ಅಪಮಾನಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
Film distributor Laxmikanta Reddy
ಪುಷ್ಪ-2 ಚಿತ್ರದ ವಿತರಕ ಲಕ್ಷ್ಮೀಕಾಂತ ರೆಡ್ಡಿ
Updated on

ಬಳ್ಳಾರಿ: ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ವಿಚಾರವಾಗಿ ಕನ್ನಡ ಕೆಜಿಎಫ್ ಚಿತ್ರ ಅಥವಾ ನಟ ಯಶ್ ಗೆ ಅಪಮಾನವಾಗುವ ರೀತಿಯಲ್ಲಿ ತಾನು ಮಾತನಾಡಿಲ್ಲ ಎಂದು ಚಿತ್ರ ವಿತರಕ ಲಕ್ಷ್ಮೀಕಾಂತ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ನಟರಾಜ’ ಸಿನಿಮಾ ಮಂದಿರಗಳ ಮಾಲೀಕ, ಚಿತ್ರ ವಿತರಕ ಲಕ್ಷ್ಮೀಕಾಂತ ರೆಡ್ಡಿ, 'ತೆಲುಗಿನ ಪುಷ್ಪ–2' ಚಿತ್ರದ ವಿತರಕನಾಗಿ ಅದರ ಯಶಸ್ಸು ಬಯಸಿದ್ದೇನೆಯೇ ಹೊರತು, ನಟ ಯಶ್‌ ಅವರನ್ನಾಗಿಲಿ, ಅವರ ಕೆಜಿಎಫ್‌ ಸರಣಿಯ ಚಿತ್ರಗಳನ್ನಾಗಲಿ ಅಪಮಾನಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಟ ಅಲ್ಲು ಅರ್ಜುನ್‌ ನಟನೆಯ ಚಿತ್ರ ‘ಪುಷ್ಪ–2’ ಸಿನಿಮಾದ ಅಖಿಲ ಕರ್ನಾಟಕ ವಿತರಣೆಯನ್ನು ನಾನೇ ಪಡೆದುಕೊಂಡಿದ್ದೇನೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಗೆ ನಾನೂ ಹೋಗಿದ್ದೆ. ಚಿತ್ರ ಕೆಜಿಎಫ್‌–2 ಸಿನಿಮಾದ ದಾಖಲೆಯನ್ನೂ ಮೀರಿ ಯಶಸ್ಸು ಗಳಿಸಲಿ ಎಂದು ಅಲ್ಲಿ ಆಶಿಸಿದ್ದೆ.

Film distributor Laxmikanta Reddy
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ತುಸು ಬೇಸರ: ಪುಷ್ಪ-2 ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ!

ಇದರಲ್ಲಿ ತಪ್ಪು ಹುಡುಕಿರುವ ಕೆಲ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಸಿನಿಮಾವೊಂದು ದಾಖಲೆಗಳನ್ನೂ ಮೀರಲಿ ಎಂದು ನಿರ್ಮಾಪಕರು, ವಿತರಕರು ಆಶಿಸುವುದು ಸಾಮಾನ್ಯ. ಇಲ್ಲಿ ಯಶ್‌ ಅವರನ್ನಾಗಲಿ, ಅವರ ಸಿನಿಮಾಗಳನ್ನಾಗಲಿ ಅಪಮಾನಿಸುವುದು ಉದ್ದೇಶವಲ್ಲ’ ಎಂದು ಅವರು ಹೇಳಿದರು.

ನಟ ಯಶ್ ಗೆ ಅಪಮಾನ ಮಾಡಿಲ್ಲ

ಅಂತೆಯೇ ನಟ ಯಶ್‌ ಅವರ ಹಲವು ಸಿನಿಮಾಗಳನ್ನು ತೆಲುಗಿನಲ್ಲಿ ನಾನೇ ವಿತರಣೆ ಮಾಡಿದ್ದೇನೆ. ಕನ್ನಡದ ಹಲವು ಸಿನಿಮಾಗಳನ್ನೂ ವಿತರಿಸಿದ್ದೇನೆ. ‘ನಟರಾಜ’ ಸಿನಿಮಾ ಮಂದಿರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದೇನೆ. ಕನ್ನಡವನ್ನಾಗಲಿ, ಕನ್ನಡದ ಸಿನಿಮಾಗಳನ್ನಾಗಲಿ ನಾನು ಕಡೆಗಣಿಸಿಲ್ಲ. ನಟ ಯಶ್ ಅವರನ್ನು ನಾನು ಅಪಮಾನಿಸಿಲ್ಲ’ ಎಂದು ಅವರು ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ದೇಶದ ಚಿತ್ರರಂಗದಲ್ಲಿ ಪಾರಮ್ಯ ಮರೆಯುತ್ತಿವೆ. ಮೊದಲಿಗೆ ‘ಬಾಹುಬಲಿ’ ಯಶಸ್ಸು ಕಂಡಿತು. ಅದರ ದಾಖಲೆ ಯಾರೂ ಮುರಿಯಲಾಗದು ಎಂದು ಹೇಳಲಾಯಿತು. ಯಶ್‌ ಅವರ ‘ಕೆಜಿಎಫ್‌’ ಎಲ್ಲ ದಾಖಲೆಗಳನ್ನು ಮುರಿಯಿತು. ‘ಕಾಂತಾರ’ ಚಿತ್ರ ಮತ್ತೊಂದು ಹಂತ ಮೇಲೇರಿತು. ‘ಪುಷ್ಪ–2’ ಕೂಡ ಪ್ಯಾನ್‌ ಇಂಡಿಯಾ ಚಿತ್ರ. ಅದು ದಾಖಲೆಗಳನ್ನು ಮೀರಲಿ ಎಂಬುದರಲ್ಲಿ ಯಾವ ತಪ್ಪೂ ಇಲ್ಲ’ ಎಂದು ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.

ಒಂದು ಪುಷ್ಪ 10 ಕೆಜಿಎಫ್ ಗೆ ಸಮ ಎಂದಿದ್ದ ಚಿತ್ರತಂಡ

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪುಷ್ಪ ಚಿತ್ರತಂಡ ಒಂದು ಪುಷ್ಪ ಚಿತ್ರ 10 ಕೆಜಿಎಫ್ ಗೆ ಸಮ ಎಂದು ಹೇಳಿತ್ತು. ಇದು ಅಭಿಮಾನಿಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅಂದಹಾಗೆ ತೆಲುಗಿನ ‘ಪುಷ್ಪ–2: ದ ರೂಲ್‌’ ಚಿತ್ರ ಡಿಸೆಂಬರ್‌ 5ರಂದು ಬಿಡುಗಡೆಯಾಗುತ್ತಿದೆ. ಅಲ್ಲು ಅರ್ಜುನ್‌ ನಟನೆಯ ಈ ಚಿತ್ರವನ್ನು ಸುಕುಮಾರ್‌ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com