ಯೋಗರಾಜ್ ಭಟ್ ನಿರ್ದೇಶನದ, ಸುಮುಖ ನಟನೆಯ 'ಮನದ ಕಡಲು' ಬಿಡುಗಡೆಗೆ ದಿನಾಂಕ ನಿಗದಿ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಅಭಿನಯದ 'ಮುಂಗಾರು ಮಳೆ' ಚಿತ್ರ ವ್ಯಾಪಕ ಯಶಸ್ಸು ಕಂಡಿತ್ತು. ಅದಾದ 18 ವರ್ಷಗಳ ನಂತರ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಇ ಕೃಷ್ಣಪ್ಪ ಇದೀಗ 'ಮನದ ಕಡಲು' ಎಂಬ ಮತ್ತೊಂದು ರೊಮ್ಯಾಂಟಿಕ್ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ.
EK ಎಂಟರ್ಟೈನರ್ಸ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವು ಮಾರ್ಚ್ 28 ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ವಿಡಿಯೋ ಮೂಲಕ ಅಧಿಕೃತವಾಗಿ ಘೋಷಿಸಲಾಗಿದೆ. ವಿಡಿಯೋದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಮತ್ತು ಅನಂತ್ ನಾಗ್ ನಟಿಸಿದ ಮುಂಗಾರು ಮಳೆಗೆ ತಮಾಷೆಯ ದೃಶ್ಯವನ್ನು ಒಳಗೊಂಡಿದೆ.
2019ರಲ್ಲಿ ತೆರೆಕಂಡ ಯಾನ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ನಟ ಸುಮುಖ 2022ರಲ್ಲಿ ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮನದ ಕಡಲು ಚಿತ್ರದಲ್ಲಿ ನಟಿಸಿದ್ದಾರೆ. ರಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ರಂಗಾಯಣ ರಘು ಮತ್ತು ದತ್ತಣ್ಣ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ.

