

ಮುಂಬೈ: ಮಹಾರಾಷ್ಟ್ರದಲ್ಲಿ ನಿಷೇಧಿತ ಉತ್ಪನ್ನವಾಗಿರುವ ಪಾನ್ ಮಸಾಲಾವನ್ನು ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟರಾದ ಶಾರುಖ್ ಖಾನ್(, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ಮೂವರು ನಟರು 2024 ರಲ್ಲಿ ಪಾನ್ ಮಸಾಲಾ ಕಂಪನಿಯಾದ ವಿಮಲ್ ಎಲೈಚಿ ಉತ್ಪನ್ನದ ಪ್ರಚಾರಕ್ಕಾಗಿ ಒಟ್ಟಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
ಮಹಾರಾಷ್ಟ್ರದ ಆಹಾರ ಸುರಕ್ಷತಾ ಮುಖ್ಯಸ್ಥ ತುಕಾರಾಂ ಮುಂಡೆ ಅವರು ಆಗಸ್ಟ್ 11 ರಂದು ಈ ನೋಟಿಸ್ ನೀಡಿದ್ದು, ತಕ್ಷಣವೇ ಈ ಜಾಹೀರಾತು ಅಭಿಯಾನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು ಹಾಗೂ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿಂದ ಈ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಪ್ರಚಾರದ ವಿಷಯಗಳನ್ನು ತೆಗೆದುಹಾಕಬೇಕು ಎಂದು ನಟರಿಗೆ ನಿರ್ದೇಶನ ನೀಡಿದ್ದಾರೆ.
ಈ ವಿಷಯ ಗಂಭೀರವಾಗಿದೆ. ಏಕೆಂದರೆ ಜಾಹೀರಾತು ವಿಮಲ್ ಪಾನ್ ಮಸಾಲಾದೊಂದಿಗೆ ಸಂಬಂಧಿಸಿದ ಅದೇ ಬ್ರ್ಯಾಂಡ್ ಗುರುತನ್ನು ಬಳಸಿದೆ ಎಂದು ಎಫ್ಡಿಎಯ ಗ್ರೇಟರ್ ಮುಂಬೈ ವಿಭಾಗ ಆಗಸ್ಟ್ 11ರಂದು ಹೊರಡಿಸಿದ ನೋಟಿಸ್ನಲ್ಲಿ ತಿಳಿಸಿದೆ. ಇದು ಮೂವರು ನಟರನ್ನು ಬ್ರ್ಯಾಂಡ್ ಪ್ರಚಾರಕರು ಎಂದು ವಿವರಿಸಿದ್ದು, 15 ದಿನಗಳಲ್ಲಿ ಪ್ರತಿಕ್ರಿಯೆ ಕೋರಿದೆ.
ಈ ಜಾಹೀರಾತನ್ನು ಪರಿಶೀಲಿಸಿದಾಗ, ಮಹಾರಾಷ್ಟ್ರ ರಾಜ್ಯದಲ್ಲಿ ಉತ್ಪಾದನೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ‘ವಿಮಲ್ ಪಾನ್ ಮಸಾಲಾ’ ಬ್ರ್ಯಾಂಡ್ಗೆ ಪೂರಕವಾಗಿ ಈ ಜಾಹೀರಾತು ಪ್ರಚಾರ ನೀಡುತ್ತಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಒಂಬತ್ತು ಪುಟಗಳ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ನೋಟಿಸ್ ಅನ್ನು "ಅಂತಿಮ ಎಚ್ಚರಿಕೆ" ಎಂದಿರುವ ಎಫ್ಡಿಎ, ಇದು ದಾರಿತಪ್ಪಿಸುವ ಜಾಹೀರಾತು ಎಂದು ಪ್ರಾಥಮಿಕವಾಗಿ ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006ರ ನಿಬಂಧನೆಗಳು ಮತ್ತು ಅದರಡಿ ರೂಪಿಸಲಾದ ನಿಯಮಗಳಿಗೆ ವಿರುದ್ಧ ಎಂದಿದೆ. ಇತರ ಕಾನೂನುಗಳು ಮತ್ತು ಮಾರ್ಗಸೂಚಿಗಳ ಅಡಿಯಲ್ಲಿ ಪರೋಕ್ಷ ಜಾಹೀರಾತಿನ ಉಲ್ಲಂಘನೆಗಳ ಸಾಧ್ಯತೆಯನ್ನೂ ಸಹ ಗುರುತಿಸಿದೆ.
ನಟರು ವಿಮಲ್ ಪಾನ್ ಮಸಾಲಾ/ಎಲೈಚಿ ಜಾಹೀರಾತಿನಲ್ಲಿ ಭಾಗವಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು, ವೆಬ್ಸೈಟ್ಗಳು ಮತ್ತು ಅವರ ಇತರ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದ ಪ್ರಚಾರದ ವಿಷಯವನ್ನು ತೆಗೆದುಹಾಕುವಂತೆ ಎಫ್ಡಿಐ ನಿರ್ದೇಶಿಸಿದೆ.
ಯಾವುದೇ ರೂಪದಲ್ಲಿ ಜಾಹೀರಾತಿನ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರದಲ್ಲಿ ಸಹಕಾರ ಅಥವಾ ಸಹಾಯ ನೀಡಬಾರದು ಎಂದು ಎಫ್ಡಿಐ ನಟರಿಗೆ ನಿರ್ದೇಶಿಸಿದೆ. ಅಭಿಯಾನದಲ್ಲಿ ಭಾಗವಹಿಸುವ ಮೊದಲು ನಟರು ಅಥವಾ ಅವರ ಏಜೆನ್ಸಿಗಳು ಕೈಗೊಂಡಿರುವ ಸೂಕ್ತ ಪರಿಶ್ರಮದ ವಿವರಗಳನ್ನು ಒದಗಿಸುವಂತೆ ನೋಟಿಸ್ನಲ್ಲಿ ಕೇಳಲಾಗಿದೆ.